ಕಾರವಾರ:
ಅಸಮರ್ಪಕ ಮತ್ತು ತಪ್ಪು ಮಾಹಿತಿ ನೀಡುತ್ತಿದ್ದ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಜಿ.ಪಂ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಜಿ.ಪಂ ಸದಸ್ಯೆ ಪುಷ್ಪಾ ನಾಯ್ಕ ಮಾತನಾಡಿ ಹೊನ್ನಾವರದ ಬಾಳುಬೆಲೆಯಲ್ಲಿ ಕನ್ನಡ ಶಾಲೆ ಶಿಥಿಲಾವಸ್ಥೆ ತಲುಪಿದ್ದು, ಕೂಡಲೇ ನೂತನ ಕಟ್ಟಡ ನಿರ್ಮಿಸುವಂತೆ ಕಳೆದ ಮೂರು ವರ್ಷದಿಂದ ಒತ್ತಾಯಿಸಲಾಗುತ್ತಿದೆ. ಆದರೆ ಕಳೆದ ಕೆಲ ತಿಂಗಳ ಹಿಂದೆ ಕಟ್ಟಡ ಮಂಜೂರಿಯಾಗಿದೆ ಎಂದು ಮಾಹಿತಿ ನೀಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕರು ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಕೇಳಿದರೆ ಹೊಸದಾಗಿ ಬಂದ ಅಧಿಕಾರಿಗಳು ತಮಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಇನ್ನೊಂದು ತಿಂಗಳಲ್ಲಿ ಮಳೆಗಾಲ ಆರಂಭವಾಗುವ ಸಾಧ್ಯತೆ ಇಂತಹ ಸಂದರ್ಭದಲ್ಲಿ ಮಕ್ಕಳು ಅಥವಾ ಶಿಕ್ಷಕರು ಶಾಲೆಯಲ್ಲಿದ್ದರೆ ಅಪಾಯಕ್ಕಿ ಸಿಲುಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರತಿಕ್ರಿಯೆ ನೀಡಿದ ಕಾರವಾರ ಡಿಡಿಪಿಐ ಪಿ.ಕೆ. ಪ್ರಕಾಶ, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಿದರು. ಆದರೆ ಇದಕ್ಕೆ ಅಸಮಾಧಾನಗೊಂಡ ಸದಸ್ಯರು ಡಿಡಿಪಿಐ ಸಭೆಗೆ ಬರುವ ಮುನ್ನ ವಿಷಯ ತಿಳಿದು ಬರಬೇಕು ಅದನ್ನು ಬಿಟ್ಟು ನನಗೆ ಗೊತ್ತಿಲ್ಲ ಎನ್ನುವುದು ಸರಿಯಾದ ಕ್ರಮವಲ್ಲ ಎಂದು ಅಸಾಮಾಧಾನ ವ್ಯಕ್ತಪಡಿಸಿದರು. ಬಳಿಕ ಸಿಇಓ ಚಂದ್ರಶೇಖರ ನಾಯಕ ಮಾತನಾಡಿ ಸಭೆಗೆ ಬರುವ ಮುನ್ನ ಎಲ್ಲ ಮಾಹಿತಿಯನ್ನು ಪಡೆದು ಬರಬೇಕು. ಸಭೆ ಮುಗಿಯುವುದರೊಳಗೆ ಈ ಹಿಂದಿನ ವಿಷುಯವನ್ನು ತಿಳಿದು ಅದರ ಸಂಪೂರ್ಣ ವಿವರವನ್ನು ಸಲ್ಲಿಸುವಂತೆ ಸೂಚಿಸಿದರು. ಗೋಕರ್ಣದ ಮರಾಕಲ್ ನೀರಿನ ಯೋಜನೆಯ 2014-15ನೇ ಸಾಲಿನ 5.20 ಲಕ್ಷ ವಿದ್ಯುತ್ ಬಿಲ್ ಬಾಕಿ ಇದೆ. ಆದರೆ ಇದು ಯಾರು ತುಂಬಬೇಕು ಎನ್ನುವುದು ಗೊತ್ತಿಲ್ಲ. ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಒಂದೊಂದು ಸಲ ಒಂದೊಂದು ಉತ್ತರ ನೀಡುತ್ತಿದ್ದಾರೆ ಎಂದು ಸದಸ್ಯ ಪ್ರದೀಪ ನಾಯ್ಕ ದೂರಿದರು. ಸದಸ್ಯ ಗಜಾನನ ಪೈ ಮಾತನಾಡಿ, ಕುಮಟಾದ ಬಾಸೋಳ್ಳಿಯಲ್ಲಿ ಕುಡಿಯುವ ನೀರು ಕಾಮಗಾರಿ ಪೂರ್ಣಗೊಂಡಿದ್ದರು ಇನ್ನು ವಿದ್ಯುತ್ ಪೂರೈಕೆಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ ಸ್ಥಳೀಯರಲ್ಲಿಯೇ ತಕರಾರು ಇದೆ ಎನ್ನುತ್ತಾರೆ. ಇದರಿಂದ ಎಲ್ಲ ಕಾಮಗಾರಿ ಮುಗಿದರು ನೀರು ಪೂರೈಕೆಯಾಗುತ್ತಿಲ್ಲ. ಇದಕ್ಕೆ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳ ಬೇಜವಬ್ದಾರಿಯೇ ಕಾರಣ ಎಂದು ದೂರಿದರು. ಇದೆ ವೇಳೆ ಸದಸ್ಯ ಚೈತ್ರಾ ಕೋಠಾರಕರ್ ಕಾರವಾರದ ಕೆರವಡಿ ಕುಡಿಯುವ ನೀರು ಯೋಜನೆಯನ್ನು ಮಾಚ್ ಅಂತ್ಯದೊಳಗೆ ಪ್ರಾರಂಭಿಸುವುದಾಗಿ ಹಿಂದಿನ ಸಭೆಯಲ್ಲಿ ತಿಳಿಸಿ ಈವರೆಗೂ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಇದಕ್ಕೆ ಉತ್ತರ ನೀಡಲು ಮುದಾದ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆ ಎಇಇ ಎಂ.ಬಿ. ಪಾಟೀಲ್, ತಡವರಿಸಿದರು. ಮದ್ಯ ಪ್ರವೇಶಿಸಿದ ಸಿಇಓ ಅಧಿಕಾರಿಗೆ ಬಾಸೊಳ್ಳಿಯಲ್ಲಿ ಸಮಸ್ಯೆಯನ್ನು ಇನ್ನು ಒಂದು ವಾರದೊಳಗೆ ಸರಿಪಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಗೋಕರ್ಣದ ಮರಾಕಲ್ ಕುಡಿಯುವ ನೀರಿನ ಯೋಜನೆಯ ವಿದ್ಯುತ್ ಯಾವ ಇಲಾಖೆ ಬಿಲ್ ಎಂಬುದು ಎಂದು ಖಾತ್ರಿ ಪಡಿಸಿ ಕೂಡಲೇ ತುಂಬಬೇಕು ಎಂದು ಸೂಚಿಸಿದರು. ಇನ್ನೂ ಕಾರವಾರದ ಕೆರವಡಿ ಕುಡಿಯುವ ನೀರಿನ ಯೋಜನೆಯನ್ನು ಬರುವ ಅಕ್ಟೋೀಬರ್ ಒಳಗಾಗಿ ನಾನೇ ಜವಬ್ದಾರಿ ತೆಗೆದುಕೊಂಡು ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದರು. ಜಿಲ್ಲೆಯಲ್ಲಿ 234 ಮಣ್ಣಿನಗೊಡೆಗಳು ಬಿಳ್ಳುವ ಸ್ಥಿತಿಯಲ್ಲಿದ್ದು, ಅವುಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ಸದಸ್ಯೆ ಪುಷ್ಪಾ ನಾಯ್ಕ ಸಭೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಯಿಸಿದ ಸಿಇಓ ಈಗಾಲೇ ಕಳುಹಿಸಿದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಇನ್ನು ಅನುದಾನ ಬಂದಿಲ್ಲ. ಕೆಲ ಬಿಳ್ಳುವ ಸ್ಥಿತಿಯಲ್ಲಿದ್ದ ಶಾಲೆಗಳ ಕಟ್ಟಕ್ಕೆ ಮಾತ್ರ ಕ್ರಮ ಕೈಗೊಳ್ಳಲಾಗಿದೆ ಎಂದರು. ಇನ್ನೂ ಶೌಚಾಲಯ ನಿರ್ಮಾಣ, ಹೊಸ ಮನೆಗಳಿಗೆ ಹಣ ಮಂಜೂರಿಗೆ ಪಿಡಿಓಗಳು ಸತಾಯಿಸುತ್ತಿರುವ ದೂರು, ಹೊಸ ಗ್ರಾಮ ಪಂಚಾಯಿತಿಗಳಿಗೆ ಕಟ್ಟಡ ನಿರ್ಮಾಣಕ್ಕೆ ಸಂಬಂದಿಸಿದಂತೆ ಅರಣ್ಯ ಹಕ್ಕು ಸಮಿತಿಗಳಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಸುವುದು, ಜಿಲ್ಲೆಯಲ್ಲಿ ಆಯ್ದ ಪ್ರೌಢ ಶಾಲೆಯಲ್ಲಿ ಆಡಿಯೋ-ವಿಡಿಯೋ ಆಧಾರಿತ ಪಠ್ಯಕ್ರಮವನ್ನು ವೀಕ್ಷಿಸಲು ಹಾಲ್, ಬ್ಯಾಂಕ್ಗಳಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಲ ನೀಡಲು ಹಿಂಜರಿಯುತ್ತಿರುವುದರ ವಿರುದ್ಧ ಧೀರ್ಘ ಚರ್ಚೆ ನಡೆಯಿತು. ಕಾರವಾರ ತಾಲೂಕು ಪಂಚಾಯಿತಿ ಸಭೆಗೆ ಆಹ್ವಾನಿಸಿ ನಮ್ಮನ್ನು ಅವಮಾನಗೊಳಿಸಿರುವುದರ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯಿತಿಗೆ ದೂರು ನೀಡಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿ.ಪಂ ಸದಸ್ಯೆ ಚೈತ್ರ ಕೋಠಾರಕರ್ ಸಭೆ ಗಮನಕ್ಕೆ ತಂದರು. ಈ ವೇಳೆ ಮಾತನಾಡಿದ ಅಧ್ಯಕ್ಷೆ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅಧ್ಯಕ್ಷರನ್ನು ಕರೆಸಿ ಕೇಳಿದ್ದು, ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಉಪಾಧ್ಯಕ್ಷ ಸಂತೋಷ ರೇಣಕೆ, ಶಿವಾನಂದ ಹೆಗಡೆ, ಬಸವರಾಜ ದೊಡ್ಮನಿ, ಲಕ್ಷ್ಮಣ ತಿಪ್ಪಣ್ಣ ಪಾಟೀಲ್ ಇದ್ದರು.
Leave a Comment