ಹೊನ್ನಾವರ:
ಮಾವಿನಕುರ್ವಾ ಗ್ರಾಮ ಪಂಚಾಯತಿ ಅಧ್ಯಕ್ಷ ತಿಲಕ ಜಟ್ಟಿ ಗೌಡ ಮತ್ತು ಪಿಡಿಒ ಅಕ್ರಮ ನಡೆಸಿ ತಾವೇ ತೋಡಿದ ಹೊಂಡದಲ್ಲಿ ಇವರೇ ಬಿದ್ದು ಒದ್ದಾಡುವಂತಾಗಿದೆ. ಇವರ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ಪಾಪದ ಕೊಡ ತುಂಬಿದೆ ಎಂದು ಮಾವಿನಕುರ್ವಾ ಗ್ರಾಮ ಪಂಚಾಯತಿ ಸದಸ್ಯ ಪೀಟರ್ ಅಂಥೋನ್ ಮೆಂಡಿಸ್ ಹೇಳಿದರು.
ಪಟ್ಟಣದ ಶಿವಸಾಗರ ರೆಸಿಡೆನ್ಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಮಾವಿನಕುರ್ವಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೀಮಾ ನಾಯ್ಕ ಎಂ.ಬಿ. ಅವರ ಮೇಲೆ ಅಕ್ರಮ ಲಂಚ ಪಡೆದ ಪ್ರಕರಣ ಹಾಗೂ ಕರ್ತವ್ಯಲೋಪದ ಬಗ್ಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೊರಡಿಸಿದ ಅಮಾನತು ಆದೇಶವನ್ನು ಸ್ವಾಗತಿಸಿ ಅಭಿನಂದಿಸಿದರು. ಗ್ರಾಮದ ವಾರ್ಡ ಸಭೆ, ಗ್ರಾಮ ಸಭೆಯಲ್ಲಿ ಗ್ರಾಮದ ಅಭಿವೃದ್ಧಿಯ ಬಗ್ಗೆ ಮಾತನಾಡಿದರೆ ಸಾರ್ವಜನಿಕರ ಮೇಲೆ `ಹಲ್ಲೆ ನಡೆಸಿ ಸುಳ್ಳು ದೂರು’ ದಾಖಲಿಸಿರುತ್ತಾರೆ. ಮಾವಿನಕುರ್ವಾದಲ್ಲಿ ಕಳ್ಳಭಟ್ಟಿ, ಮಟಕಾ ದಂಧೆಗಳಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ಅವರು ಈ ಬಗ್ಗೆ ಪಿಡಿಓ ಮೇಲೆ ಮೇಲಾಧಿಕಾರಿಗಳಿಗೆ ದೂರು ನೀಡಿದರೆ ಅಂತವರ ಮೇಲೆ `ಜಾತಿ ನಿಂದನೆ’ ದೂರು ದಾಖಲಿಸುತ್ತಾರೆ. ಈ ಕಾರಣಗಳಿಂದ ಪಂಚಾಯತ ವ್ಯಾಪ್ತಿಯ ಯಾವುದೇ ವಾರ್ಡ ಸಭೆ ಹಾಗೂ ಗ್ರಾಮಸಭೆಗೆ ಜನರು ಭಾಗವಹಿಸಲು ಹಿಂಜರಿಯುತ್ತಾರೆ. ಹಾಗಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕೆಲವು ಸದಸ್ಯರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಕಾಶ ಗೌಡ ಮಾತನಾಡಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ನ್ಯಾಯಯುತ ಸೌಲಭ್ಯ ಪಡೆಯಲು ಗ್ರಾಮ ಪಂಚಾಯತಿ ಕಚೇರಿಗೆ ಹೋದಾಗ ವಿನಾಕಾರಣ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಉನ್ನತ ಶಿಕ್ಷಣ ಪಡೆದು ಸರ್ಕಾರಿ ನೌಕರಿ ಪಡೆಯಬೇಕೆಂಬ ಹಂಬಲ ತಣ್ಣೀರೆರಚಿದ್ದಾರೆ. ನ್ಯಾಯಕೇಳಲು ಹೋದವರ ಮೇಲೆ ಪಿಡಿಒ ಮತ್ತು ಅಧ್ಯಕ್ಷರು ಅಧಿಕಾರ ದುರುಪಯೋಗಪಡಿಸಿಕೊಂಡು ಹಲ್ಲೆ ನಡೆಸಿ ಪ್ರಕರಣ ದಾಖಲಿಸುತ್ತಾರೆ ಎಂದು ಆರೋಪಿದರು.
ಕಾನೂನು ಬಾಹಿರವಾಗಿ ಅಧಿಕಾರ ದುರುಪಯೋಗ: ಮಾವಿನಕುರ್ವಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಂಜುನಾಥ ಮಂಜು ಗೌಡ ಮಾತನಾಡಿ ಪಿಡಿಒ ಅಮಾನತು ಆದೇಶದ ಕುರಿತು ಗ್ರಾ.ಪಂ.ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಅಧಿಕೃತ ಪಂಚಾಯತದ ಮೊಹರಿನೊಂದಿಗೆ ಮಾವಿನಕುರ್ವಾ ಗ್ರಾಮಪಂಚಾಯತ ಕಾರ್ಯಾಲಯ ಅಧಿಕೃತ ಲೆಟರ್ಹೆಡ್ನಲ್ಲಿ ಸರ್ಕಾರದ ಆದೇಶದ ವಿರುದ್ದ ಮಾಹಿತಿ ನೀಡಿದ್ದಾರೆ. ಮಾವಿನಕುರ್ವಾ ಪಿಡಿಓ ಬೀಮಾ ನಾಯ್ಕ ಎಂ.ಬಿ. ಇವರ ಮೇಲೆ ಜಿ.ಪಂ ಸಿಇಓ ರಂದು ಹೊರಡಿಸಿದ ಆದೇಶದ ವಿರುದ್ಧ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿಗೆ ಠರಾವು ಮಂಡಿಸುವ ಅಧಿಕಾರವಿರುವುದಿಲ್ಲ. ಇದು ಕಾನೂನು ಬಾಹೀರವಾಗಿದೆ. ಅಧ್ಯಕ್ಷರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಕಾನೂನು ಬಾಹೀರವಾಗಿ ಸರ್ಕಾರದ ಆದೇಶದ ವಿರುದ್ಧ ಪತ್ರಿಕಾ ಹೇಳಿಕೆ ನೀಡಿರುತ್ತಾರೆ ಈ ಬಗ್ಗೆ ಅಧ್ಯಕ್ಷರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮಾವಿನಕುರ್ವಾ ಪಿಡಿಒ ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾವಿನಕರ್ವಾ ಅಭಿವೃದ್ದಿ ಸಮಿತಿಯ ಉಲ್ಲಾಸ ಶಾನಭಾಗ, ಹರಿಶ್ಚಂದ್ರ ನಾಯ್ಕ, ಮಾಜಿ ಗ್ರಾ.ಪಂ.ಸದಸ್ಯರಾದ ನಾರಾಯಣ ಶಿವಯ್ಯ ಗೌಡ, ಮಂಜುನಾಥ ಮಂಜು ಗೌಡ, ಫಾತಿಮಾ ಫರ್ನಾಂಡಿಸ್, ಬಾಲಚಂದ್ರ ನಾಗೇಶ ಶಾನಭಾಗ, ಮಾದೇವ ಕೇಶವ ಗೌಡ, ನವೀನ ರೊಡ್ರಿಗಿಸ್, ಪ್ರಕಾಶ ಗೌಡ, ಗಜಾನನ ಗೌಡ ಇತರರು ಇದ್ದರು.
Leave a Comment