ಕಾರವಾರ:
ನಗರದ ಬಾಲ ಮಂದಿರದಲ್ಲಿ ಖಾಸಗಿ ವಿದ್ಯಾಸಂಸ್ಥೆಗಳ ಶಿಕ್ಷಕರ ನೇಮಕಾತಿಗೆ ಭಾನುವಾರ ನೇರ ಸಂದರ್ಶನ ನಡೆದಿದ್ದು, 40ಕ್ಕೂ ಅಧಿಕ ಸಂಸ್ಥೆಗಳು ಹಾಗೂ 500ಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದರು. ಸಂಘಟಕರ ಲೆಕ್ಕದ ಪ್ರಕಾರ 150 ಅಭ್ಯರ್ಥಿಗಳು ಆಯ್ಕೆಯಾದರು.
* ಶಿಕ್ಷಕರ ಕೊರತೆ ನೀಗಿಸದ ಮೇಳ
ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತಪ್ಪಿಸಲು ಈ ಮೇಳವನ್ನು ಆಯೋಜಿಸಲಾಗಿತ್ತು. ಅನುಭವಿ ಶಿಕ್ಷಕರು ಹಾಗೂ ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ನಿರುದ್ಯೋಗಿಗಳ ಅನುಕೂಲಕ್ಕಾಗಿ ಮೇಳ ಹಮ್ಮಿಕೊಂಡಿರುವದಾಗಿ ಸಂಘಟಕರು ತಿಳಿಸಿದ್ದರು. ಅದರಂತೆಯೇ ಶಿಕ್ಷಕರಾಗುವ ಕನಸು ಕಂಡ ನೂರಾರು ಅಭ್ಯರ್ಥಿಗಳು ಭಾಗವಹಿಸಿದ್ದರು. ಆದರೆ ಸಂಸ್ಥೆಯವರ ವೇತನಕ್ಕೆ ಕೆಲಸ ಮಾಡುವ ಅಭ್ಯರ್ಥಿಗಳು ಸಿಗಲಿಲ್ಲ. ನಾಮಫಲಕದಲ್ಲಿ ಕನ್ನಡ ಮಾದ್ಯಮ ಎಂದು ತಿಳಿಸಿದರೂ, ಆಂಗ್ಲ ಭಾಷಾ ಶಿಕ್ಷಕರಿಗೆ ಪ್ರಾಮುಖ್ಯತೆ ನೀಡುವದಾಗಿ ಸಂದರ್ಶಕರು ತಿಳಿಸುತ್ತಿರುವದು ಕಂಡು ಬಂದಿತು. ಕನ್ನಡ ಭಾಷೆಯಲ್ಲಿ ಕಲಿತ ಶಿಕ್ಷಕರಿಗೆ ಮೇಳದಲ್ಲಿ ಬೆಲೆಯಿರಲಿಲ್ಲ.
* ಕಡಿಮೆ ಸಂಬಳಕ್ಕೆ ಒಲ್ಲೆ ಎಂದ ಅಭ್ಯರ್ಥಿಗಳು
ಖಾಸಗಿ ಶಾಲಾ ನೇಮಕಾತಿ ಕೇಂದ್ರದವರು ಆಯೋಜಿಸಿದ್ದ ಈ ಉದ್ಯೋಗ ಮೇಳಕ್ಕೆ ಆಗಮಿಸಿದ್ದ ವಿದ್ಯಾಸಂಸ್ಥೆಗಳು ನೂರಾರು ಅಭ್ಯರ್ಥಿಗಳ ಸಂದರ್ಶನ ನಡೆಸಿದರು. ಆದರೆ ಯಾವ ವಿದ್ಯಾ ಸಂಸ್ಥೆಯೂ 12ಸಾವರಕ್ಕಿಂತ ಹೆಚ್ಚಿನ ವೇತನ ನೀಡಲು ಸಿದ್ದವಿರಲಿಲ್ಲ. ಕೆಲವೊಂದು ಸಂಸ್ಥೆಯವರು ಮಾತ್ರ ಅಭ್ಯರ್ಥಿಯ ಸಾಮಥ್ರ್ಯ ನೋಡಿ 15-20 ಸಾವಿರ ವೇತನ ನೀಡಲು ಒಪ್ಪಿದವು. ಆದರೆ, ಊಟ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮಾತನಾಡಲಿಲ್ಲ. ಹೀಗಾಗಿ ಅಭ್ಯರ್ಥಿಗಳು ಕೂಡ ಪೆಚ್ಚು ಮೋರೆ ಹಾಕಿ ಅಲ್ಲಿಂದ ಹೊರ ಬಂದರು. ಇನ್ನು ಕೆಲ ಅಭ್ಯರ್ಥಿಗಳು ಸಂದರ್ಶಕರ ಒತ್ತಡಕ್ಕೆ ಮಣಿದು ಸೇವೆಗೆ ಹಾಜರಾಗುವದಾಗಿ ತಿಳಿಸಿ ಹೊರ ಬಂದು ಅವರಿಂದ ತಪ್ಪಿಸಿಕೊಂಡ ಬಗ್ಗೆ ನಿಟ್ಟಿಸುರು ಬಿಟ್ಟರು.
* ಬಯಲು ಸೀಮೆಯನ್ನೊಪ್ಪದ ಅಭ್ಯರ್ಥಿಗಳು
ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಸಲಾಗುವ ಸಂದರ್ಶನಕ್ಕೆ ಜಿಲ್ಲೆಯ ವಿದ್ಯಾಸಂಸ್ಥೆಗಳು ಹೆಚ್ಚಿಗೆ ಭಾಗವಹಿಸಬಹುದು ಎಂಬ ನಿರೀಕ್ಷೆ ಅಭ್ಯರ್ಥಿಗಳಲ್ಲಿತ್ತು. ಆದರೆ ಬೀದರ್, ಬೆಳಗಾವಿ, ಚಿಕ್ಕೋಡಿ, ಅಪ್ಜಲಪುರ, ಹಾವೇರಿ, ದಾವಣಗೆರೆ, ಧಾರವಾಡ ತಾಲೂಕಿನ ವಿವಿಧ ಹಳ್ಳಿಗಳ ವಿದ್ಯಾಸಂಸ್ಥೆಯವರು ಅಭ್ಯರ್ಥಿಗಳನ್ನು ಸಂದರ್ಶಿಸಿದರು. ಕರಾವಳಿ ಹಾಗೂ ಮಲೆನಾಡ ವಾತಾವರಣದಲ್ಲಿ ಬೆಳೆದವರು ಸೀಮೆ ಪ್ರದೇಶದಲ್ಲಿ ಕೆಲಸ ಮಾಡಲು ನಿರಾಕರಿಸಿದರು. ತಮ್ಮ ಯೋಗ್ಯತೆಗೆ ತಕ್ಕಂತೆ ವೇತನ ನೀಡಿದಲ್ಲಿ ಮಾತ್ರ ಕೆಲಸಕ್ಕೆ ಹಾಜರಾಗುವದಾಗಿ ಹೇಳಿದರು. ಇನ್ನು ಬೇರೆ ಭಾಗದಿಂದ ಬಂದ ಸಂದರ್ಶಕರಿಗೆ ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದು, ಅಭ್ಯರ್ಥಿಗಳನ್ನು ಪ್ರಶಂಸಿಸುತ್ತ ತಮ್ಮೊಂದಿಗೆ ಸೇವೆ ಸಲ್ಲಿಸುವಂತೆ ಕೇಳಿಕೊಳ್ಳುತ್ತಿರುವದು ಕಂಡು ಬಂದಿತು.
ಕನ್ನಡ ಮತ್ತು ಇಂಗ್ಲಿಷ್ ಮಾದ್ಯಮದ ಮುಖ್ಯಾಧ್ಯಾಪಕ, ಸಹ ಶಿಕ್ಷಕ, ಗೃಂಥ ಪಾಲಕ, ಸಹಾಯಕ ಮೊದಲಾದ ಹುದ್ದೆಗಳನ್ನು ಅರೆಸಿ ಅಭ್ಯರ್ಥಿಗಳು ಬಂದಿದ್ದರು. ಅಭ್ಯರ್ಥಿಗಳಿಗೆ ಗೊಂದಲವಾಗದಂತೆ 9 ಕೇಂದ್ರಗಳನ್ನು ಬಾಲ ಮಂದಿರದಲ್ಲಿ ತೆರೆಯಲಾಗಿತ್ತು. 100ರೂ ಪ್ರವೇಶ ಶುಲ್ಕವನ್ನು ನಿಗದಿ ಮಾಡಲಾಗಿತ್ತು. ಅಭ್ಯರ್ಥಿಗಳಿಗೆ ಮದ್ಯಾಹ್ನದ ಬೋಜನ ವ್ಯವಸ್ಥೆ ಇರಿಸಲಾಗಿತ್ತು. ವಯಕ್ತಿಕ ಸಂದರ್ಶನದಲ್ಲಿ ನಿರೀಕ್ಷೆಯಷ್ಟು ಅಭ್ಯರ್ಥಿಗಳು ಸಿಗದ ಕಾರಣ ಮದ್ಯಾಹ್ನ ಸಾಮೂಹಿಕ ಸಂದರ್ಶನ ನಡೆಸಲಾಯಿತು. ವಿದ್ಯಾಸಂಸ್ಥೆಗಳಿಗೆ ಇಲ್ಲಿನ ಅಭ್ಯರ್ಥಿಗಳ ಸಾಧನೆ ಮೆಚ್ಚುಗೆಯೆನಿಸಿದರೂ, ಮುಖ್ಯವಾಗಿ ಕಡಿಮೆ ವೇತನಕ್ಕೆ ದೂರದ ಊರುಗಳಿಗೆ ತೆರಳಿ ಉದ್ಯೋಗ ಮಾಡಲು ಅಭ್ಯರ್ಥಿಗಳು ನಿರಾಕರಿಸಿದರು.
Leave a Comment