ಕಾರವಾರ:
ಸಾವಿನ ನಂತರವೂ ತಮ್ಮ ಸೇವೆ ಸಲ್ಲಿಕೆಗಾಗಿ ನಿವೃತ್ತ ಅಧಿಕಾರಿಯೊಬ್ಬರು ಪತ್ನಿಯೊಂದಿಗೆ ದೇಹದಾನ ನೊಂದಣಿ ಮಾಡಿಸಿದ್ದಾರೆ.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಮರಣಾ ನಂತರ ದೇಹದಾನ ನಡೆಸುವದಾಗಿ ಅವರ್ಸಾದ ಕಮಲಾಕರ ನಾಯಕ (75) ಹಾಗೂ ಸೌಭಾಗ್ಯ (56) ದಂಪತಿಗಳು ಹೇಳಿದ್ದು, ಜಿಲ್ಲಾ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆ ತಮ್ಮ ದೇಹವನ್ನು ಒಪ್ಪಿಸುವದಾಗಿ ತಿಳಿಸಿದ್ದಾರೆ. ನಿವೃತ್ತ ಬಂದರು ಉಪ ಸಂರಕ್ಷಣಾಧಿಕಾರಿಯಾಗಿರುವ ಕಮಲಾಕರ ನಾಯಕ ಮೊದಲಿನಿಂದಲೂ ಬಡ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮಾಡುತ್ತ ಬಂದವರು. ಸದ್ಯ ಮರಣಾ ನಂತರವೂ ತಮ್ಮಿಂದ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂಬ ಮನೊಭಾವ ಹೊಂದಿದ್ದಾರೆ.
ಮರಣದ ನಂತರ ಮಣ್ಣಾಗುತ್ತಿದ್ದ ದೇಹವನ್ನು ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಿದಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂಬ ಆಲೋಚನೆ ಹೊಳೆದಿತ್ತು. ಅದರಂತೆ ಮನದಾಳದ ಮಾತನ್ನು ಪತ್ನಿ ಸೌಭಾಗ್ಯಳ ಬಳಿ ಹೇಳಿದಾಗ ತಾನು ದೇಹದಾನ ಮಾಡುವುದಾಗಿ ಮಡದಿ ತಿಳಿಸಿದ್ದು, ದೇಹದಾನಕ್ಕೆ ಅರ್ಜಿ ಸಲ್ಲಿಸಿದೆವು ಎಂದು ಅವರು ತಿಳಿಸಿದರು. ಇವರು ದೇಹದಾನಕ್ಕೆ ಅರ್ಜಿ ಹಾಕಿದ ವಿಷಯ ಮಕ್ಕಳಿಗೆ ತಿಳಿದಿರಲಿಲ್ಲ.
ಇನ್ನು ಈ ದಂಪತಿ ಮಂಗಳವಾರ ಜಿಲ್ಲಾಸ್ಪತ್ರೆಗೆ ವೀಲ್ ಚೇರ್ವೊಂದನ್ನು ಕೊಡುಗೆ ನೀಡಿದರು. ಕಮಲಾಕರರ ಚಿಕ್ಕಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾಗ ಹೊಸದಾದ ವೀಲ್ಚೇರ್ ಕೊಳ್ಳಲಾಗಿತ್ತು. ಆದರೆ, ಅದನ್ನು ಅವರಿಗೆ ನೀಡುವದರೊಳಗೆ ಮೃತ ಪಟ್ಟಿದ್ದರು. ಹೀಗಾಗಿ ವಿಲ್ ಚೇರ್ನ್ನು ಜಿಲ್ಲಾಸ್ಪತ್ರೆಗೆ ಕೊಡುಗೆ ನೀಡಿದ ಅವರು, ಅನುಕೂಲಕ್ಕೆ ಬಳಸುವಂತೆ ಮನವಿ ಮಾಡಿದರು.
Leave a Comment