ಕಾರವಾರ:
ಮಳೆಗಾಲಕ್ಕಿಂತ ಮೊದಲು ಚರಂಡಿ ಸ್ವಚ್ಛಗೊಳಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಆಯಾ ತಾಲೂಕಿನ ಚರಂಡಿ, ರಾಜಕಾಲುವೆಗಳ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ.
ಜಿಲ್ಲೆಯ ಎಲ್ಲ ತಾಲೂಕಿನ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮುಂದಿನ 5 ದಿನಗಳ ಕಾಲ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದ್ದು ಚರಂಡಿಗಳಲ್ಲಿ ತುಂಬಿರುವ ಕಸಕಡ್ಡಿ, ಮಣ್ಣು, ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ತೆಗೆದ ಕಸಕಡ್ಡಿಗಳನ್ನು ಅಲ್ಲಿಯೇ ರಾಶಿ ಹಾಕದೇ ತೆರವುಗೊಳಿಸಬೇಕು. ಅರೆಬರೆ ಕಸಕಡ್ಡಿಗಳನ್ನು ತೆಗೆದು ಚರಂಡಿ ಮೇಲೆ ರಾಶಿ ಮಾಡಿ ಮತ್ತೆ ಚರಂಡಿ ತುಂಬಲು ಅವಕಾಶ ಮಾಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಚರಂಡಿ ಸ್ವಚ್ಛತಾ ಕಾರ್ಯ ಅಭಿಯಾನ ರೂಪದಲ್ಲಿ ನಡೆಯಲಿದ್ದು ಎಲ್ಲ ವಾರ್ಡ್ ಗಳಲ್ಲಿ ಸ್ವಚ್ಛತಾ ಕಾರ್ಯ ಈ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಸಾರ್ವಜನಿಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಹ ತಮ್ಮ ವ್ಯಾಪ್ತಿಯ ಪರಿಸರದಲ್ಲಿ ಚರಂಡಿ ಸ್ವಚ್ಛಗೊಳಿಸಿರುವುದನ್ನು ಖಾತ್ರಿಪಡಿಸಬೇಕು. ಮಳೆಗಾಲದಲ್ಲಿ ಚರಂಡಿ ಕಟ್ಟಿಕೊಂಡು ಸಾರ್ವಜನಿಕರಿಗೆ ತೊಂದರೆಯಾದರೆ ಆಯಾ ಅಧಿಕಾರಿಗಳೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
Leave a Comment