ಕಾರವಾರ:
ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಸೀಬರ್ಡ್ ನೌಕಾನೆಲೆ ನಿರಾಶ್ರಿತರ ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಫೆನ್ಸ್ ಎಸ್ಟೇಟ್ ಅಧಿಕಾರಿ ಕಚೇರಿ ಶಾಖೆಯನ್ನು ಆರಂಭಿಸಲು ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದ್ದು, ಪರಿಹಾರ ವಿತರಣೆ ಕಾರ್ಯ ತ್ವರಿತಗೊಳ್ಳುವ ಆಶಾಭಾವನೆ ಮೂಡಿದೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಯಾ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸೋಮವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕಾರವಾರದಲ್ಲಿ ಡಿಫೆನ್ಸ್ ಎಸ್ಟೇಟ್ ಅಧಿಕಾರಿ ಕಚೇರಿ ಆರಂಭಿಸುವುದು ಸೇರಿದಂತೆ ಜಿಲ್ಲಾಡಳಿತದ ಪ್ರಮುಖ ಬೇಡಿಕೆಗಳಿಗೆ ಮನ್ನಣೆ ದೊರೆತಿದೆ.
ಡಿಫೆನ್ಸ್ ಎಸ್ಟೇಟ್ ಅಧಿಕಾರಿ ಕಚೇರಿ ಬೆಂಗಳೂರಿನಲ್ಲಿದ್ದು, ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ಪ್ರತಿಯೊಂದು ಪ್ರಕರಣದಲ್ಲಿ ಸಹ ಡಿಫೆನ್ಸ್ ಎಸ್ಟೇಟ್ ಅಧಿಕಾರಿ ತಗಾದೆ ತೆಗೆಯುತ್ತಿರುವುದರಿಂದ ಪರಿಹಾರ ವಿತರಣೆ ವಿಳಂಬವಾಗಿದೆ. ಕಾರವಾರದಲ್ಲಿ ಡಿಫೆನ್ಸ್ ಎಸ್ಟೇಟ್ ಕಚೇರಿಯನ್ನು ತೆರೆಯುವ ಮೂಲಕ ಪರಿಹಾರ ವಿತರಣೆ ಪ್ರಕ್ರಿಯೆ ತ್ವರಿತಗೊಳ್ಳಲಿದೆ. ಇದಕ್ಕಾಗಿ ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಚೇರಿಯನ್ನು ಸಿದ್ಧಪಡಿಸಲಾಗಿದ್ದು, ಆದಷ್ಟು ಬೇಗನೆ ಕಚೇರಿ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಒಟ್ಟು 912 ಪ್ರಕರಣಗಳಲ್ಲಿ 221.24ಕೋಟಿ ರೂ. ಪರಿಹಾರ ಧನವನ್ನು ರಕ್ಷಣಾ ಇಲಾಖೆ ಈಗಾಗಲೇ ಜಮಾ ಮಾಡಿದೆ. ಇನ್ನೂ ಒಟ್ಟು ಹೆಚ್ಚಿನ ಪರಿಹಾರ 634.41ಕೋಟಿ ರೂ. ಇಲ್ಲಿಯವರೆಗೆ ಡಿಫೆನ್ಸ್ ಎಸ್ಟೇಟ್ ಆಫೀಸರ್ ನೀಡಬೇಕಾಗಿದ್ದು, ಈ ಬಗ್ಗೆ ಒಂದು ಮೊತ್ತವನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು ನೌಕಾನೆಲೆ ಕಾರವಾರ ಖಾತೆಗೆ ಜಮಾ ಮಾಡಲು ಮುಖ್ಯ ಕಾರ್ಯದರ್ಶಿಯವರು ರಕ್ಷಣಾ ಸಚಿವಾಲಯದ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ಹೆಚ್ಚಿನ ಪರಿಹಾರಕ್ಕಾಗಿ ಕೋರಿ 18(1) ಅಡಿಯಲ್ಲಿ ಒಟ್ಟು 1204ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ. ಇದಕ್ಕೆ ಹೊರತುಪಡಿಸಿ 24ದಾವೆಗಳು ಪುನರ್ವಸತಿ ಕೇಂದ್ರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾಖಲಾಗಿವೆ. ಹೆಚ್ಚಿನ ಪರಿಹಾರಕ್ಕಾಗಿ ಮೇಲ್ಮನವಿ ಸಲ್ಲಿಸಿರುವ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ನಲ್ಲಿ ಸದರಿ ಪ್ರಕರಣಗಳು ವಜಾಗೊಂಡಿದ್ದು, ಪ್ರತಿಗುಂಟೆಗೆ 11500 ರೂ. ಪರಿಹಾರ ಒದಗಿಸಲು ಆದೇಶವಾಗಿದೆ. ಇದರಂತೆ 317ಪ್ರಕರಣಗಳಲ್ಲಿ ಡಿಫೆನ್ಸ್ ಎಸ್ಟೇಟ್ ಅಧಿಕಾರಿ ಪೂರ್ತಿ ಹಣ ರೂ. 173ಕೋಟಿ ಜಮಾ ಮಾಡಿದ್ದಾರೆ. 595ಪ್ರಕರಣಗಳಿಗೆ ಸಂಬಂಧಪಟ್ಟಂತೆ ಶೇ.25 ಮತ್ತು ಶೇ.50ರಷ್ಟು ಹೆಚ್ಚಿನ ಪರಿಹಾರವಾಗಿ 48ಕೋಟಿ ರೂ. ಸೇರಿದಂತೆ ಒಟ್ಟು 912ಪ್ರಕರಣಗಳಲ್ಲಿ 221.24 ಕೋಟಿ ರೂ. ಜಮಾ ಮಾಡಲಾಗಿದೆ.
ಸೀಬರ್ಡ್ ಯೋಜನೆಯಡಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸದೇ ನೇರವಾಗಿ 28(ಅ) ಅಡಿಯಲ್ಲಿ ಭೂಸ್ವಾಧೀನಾಧಿಕಾರಿಗಳಿಗೆ 1494 ಅರ್ಜಿಗಳನ್ನು ಸಲ್ಲಿಸಲಾಗಿದೆ. ಇವುಗಳ ಪೈಕಿ 1401 ಪ್ರಕರಣಗಳು ಇತ್ಯರ್ಥಗೊಂಡಿವೆ. 413ಅರ್ಜಿಗಳು ತಿರಸ್ಕøತಗೊಂಡಿವೆ. ಉಳಿದ 988ಪ್ರಕರಣಗಳ ಪೈಕಿ 581 ಪ್ರಕರಣಗಳಲ್ಲಿ ಜಿಲ್ಲಾಧಿಕಾರಿ ಅವರ ಅನುಮೋದನೆ ಬಳಿಕ ಹೆಚ್ಚಿನ ಪರಿಹಾರ ಭರಿಸಲು ಸೂಚಿಸಿ ಡಿಫೆನ್ಸ್ ಎಸ್ಟೇಟ್ ಆಫಿಸರ್ ಕಚೇರಿಗೆ ಕಳುಹಿಸಲಾಗಿದೆ. 93ಪ್ರಕರಣಗಳು ಬಾಕಿಯಿವೆ. 164ಪ್ರಕರಣಗಳನ್ನು ಜಿಲ್ಲಾಧಿಕಾರಿಗಳ ಅನುಮೋದನೆಗಾಗಿ ಹಾಗೂ 243ಪ್ರಕರಣಗಳನ್ನು ಡಿಫೆನ್ಸ್ ಎಸ್ಟೇಟ್ ಅವರಿಗೆ ಕಳುಹಿಸಲು ಬಾಕಿಯಿದೆ. ಮುಂದಿನ ಒಂದು ತಿಂಗಳ ಒಳಗಾಗಿ ಬಾಕಿ ಇರುವ ಪ್ರಕರಣಗಳ ಲೆಕ್ಕ ತಖ್ತೆಯನ್ನು ಡಿಫೆನ್ಸ್ ಎಸ್ಟೇಟ್ ಆಫೀಸರ್ಗೆ ಕಳುಹಿಸಲು ಸಭೆಯಲ್ಲಿ ಸೂಚಿಸಲಾಗಿದೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಕಮಡೋರ್ ಗಿರೀಶ್ ಜಾಧವ್ ಪ್ರಾಜೆಕ್ಟ್ ಸೀಬರ್ಡ್ ಕಾರವಾರ, ರಕ್ಷಣಾ ಸಚಿವಾಲಯದ ಗೀತಾ ಕಶ್ಯಪ್, ಡಿಫೆನ್ಸ್ ಎಸ್ಟೇಟ್ ಆಫೀಸರ್ ಸುಬ್ರತಾ ಪಾಲ್ ಕ್ಯಾಪ್ಟನ್ ವಿ.ಕೆ.ಜನಾರ್ಧನ್ ಬೇಸ್ ಕಮಾಂಡರ್ ಇಂಡಿಯನ್ ನೇವಿ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಉಪವಿಭಾಗಾಧಿಕಾರಿ ಎಸ್.ಬಿ.ಕರಾಳೆ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment