ಕಾರವಾರ:
ನಿರ್ವಹಣಾ ಸಮಿತಿಯವರ ಹಿಡಿತದಲ್ಲಿದ್ದ ಕನ್ನಡ ಭವನವನ್ನು ನಗರಸಭೆ ಅಧಿಕಾರಿಗಳು ಏಕಾಏಕಿ ತಾಲೂಕಾ ಸಾಹಿತ್ಯ ಪರಿಷತ್ಗೆ ಹಸ್ತಾಂತರಿಸುವದರ ಮೂಲಕ ನಗರಸಭೆಯ ಹಿಂದಿನ ನಿರ್ಣಯವನ್ನು ಉಲ್ಲಂಗಿಸಿದ್ದಾರೆ.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಹಣದಿಂದ ಕನ್ನಡ ಭವನವನ್ನು ನಿರ್ಮಿಸಲಾಗಿದ್ದು, 2016ರ ಸೆಪ್ಟೆಂಬರ 21ರಂದು ನಗರಸಭೆ ಸದಸ್ಯರೆಲ್ಲರೂ ಸರ್ವಾನುಮತದಿಂದ ನಿರ್ವಹಣಾ ಸಮಿತಿಯನ್ನು ರಚಿಸಿಕೊಂಡಿದ್ದರು. ಕನ್ನಡ ಭವನ ನಿರ್ವಹಣಾ ಸಮಿತಿಯೇ ಉಸ್ತುವಾರಿ ವಹಿಸಿಕೊಂಡಿತ್ತು. ಹೀಗಿರುವಾಗ ಸದ್ಯ ನಗರಸಭೆ ಅಧಿಕಾರಿಗಳು ಯಾರ ಗಮನಕ್ಕೂ ತಾರದೇ ಕನ್ನಡ ಭವನವನ್ನು ಕನ್ನಡ ಸಾಹಿತ್ಯಪರಿಷತ್ಗೆ ಹಸ್ತಾಂತರಿಸಿದ್ದಾರೆ. ಹೀಗಾಗಿ ನಗರಸಭೆ ಅಧಿಕಾರಿಗಳ ವಿರುದ್ದ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ತೀವೃ ವಾಗ್ದಾಳಿ ನಡೆಯಿತು. ಅಭಿಪ್ರಾಯ ಸಂಗ್ರಹಿಸದೇ ಏಕಾಏಕಿ ಕನ್ನಡ ಭವನವನ್ನು ಸಂಸ್ಥೆಯೊಂದಕ್ಕೆ ಹಸ್ತಾಂತರಿಸಿರುವದಕ್ಕೆ ನಗರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ನಗರಸಭೆಯಲ್ಲಿ ಈ ಹಿಂದೆ ಮಂಡಿಸಲಾಗಿದ್ದ ಠರಾವನ್ನು ಉಲ್ಲಂಗಿಸಲಾಗಿದೆ ಎಂಬ ಸದಸ್ಯರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧಿಕಾರಿಗಳು “ಹಿಂದೊಮ್ಮೆ ಸಂಘಟನೆ ಸದಸ್ಯರೊಬ್ಬರು ಕನ್ನಡ ಭವನದಲ್ಲಿ ಕಾರ್ಯಕ್ರಮ ನಡೆಸಿದಾಗ ಜಿಲ್ಲಾಧಿಕಾರಿ ವಿರುದ್ದ ಹೇಳಿಕೆ ನೀಡಿದ್ದರು. ಇದರಿಂದ ಕೋಪಿತಗೊಂಡ ಜಿಲ್ಲಾಧಿಕಾರಿ ಕನ್ನಡ ಭವನವನ್ನು ಕನ್ನಡ ಸಾಹಿತ್ಯ ಪರಿಷತ್ಗೆ ಹಸ್ತಾಂತರಿಸುವಂತೆ ಪತ್ರ ಬರೆದ ಕಾರಣ ಮುಂದಿನ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು. ಕನ್ನಡ ಪರ ಹೋರಾಟಗಾರರು, ಕನ್ನಡ ಪ್ರೇಮಿಗಳು, ಹಲವು ಸಂಘಟನೆಗಳ ಶ್ರಮದಿಂದ ಕನ್ನಡ ಭವನವನ್ನು ರಚಿಸಲಾಗಿದೆ. ನಗರಸಭೆ ಅಧೀನದಲ್ಲಿರುವ ಕನ್ನಡ ಭವನವನ್ನು ನಿರ್ವಹಣಾ ಸಮಿತಿ ಉಸ್ತುವಾರಿ ವಹಿಸಿಕೊಳ್ಳುತ್ತಿದ್ದು, ಅದನ್ನು ಯಾವದೇ ಸಂಸ್ಥೆಗೆ ವಹಿಸಲು ಅಧಿಕಾರವಿಲ್ಲ ಎಂದು ನಗರಸಭೆ ಸದಸ್ಯ ದೇವಿದಾಸ ನಾಯ್ಕ ಹಾಗೂ ಸಂತೋಷ ಗುರುಮಠ ಹೇಳಿದರು.
ನಗರಸಭೆಯ ಬಹುತೇಕ ಆಸ್ತಿಗಳು ಪರರ ಪಾಲಾಗಿದೆ. ಅನೇಕರು ನಗರಸಭೆ ಜಾಗದಲ್ಲಿ ಬಂಗಲೆ ನಿರ್ಮಿಸಿಕೊಂಡು ಅದನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಂಡಿದ್ದಾರೆ. ಅವುಗಳನ್ನು ಖುಲ್ಲಾ ಮಾಡಬೇಕು ಎಂದು ಸದಸ್ಯ ಸಂದೀಪ ತಳ್ಳೆಕರ ಇನ್ನಿತರರು ಒತ್ತಾಯಿಸಿದರು. ಹೆದ್ದಾರಿ ವಿಸ್ತರಣೆಗಾಗಿ ನಗರಸಭೆ ಕಮಾನು ಹಾಗೂ ಇನ್ನಿತರ ಆಸ್ತಿಗಳನ್ನು ಹಾಳು ಮಾಡಿದರಿಂದ ನಷ್ಟವಾಗಿರುವ ಬಗ್ಗೆಯೂ ಚರ್ಚೆ ನಡೆಯಿತು. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ಲೀಲಾಬಾಯಿ ಠಾಣೆಕರ್ ಸ್ಥಾಯಿ ಸಮಿತಿ ಅಧ್ಯಕ್ಷ ವಿಠಲ ಸಾವಂತ ಇತರರಿದ್ದರು.
Leave a Comment