ಕಾರವಾರ:
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದಾಂಡೇಲಿಯಲ್ಲಿ ಕಾಳಿ ಕಯಾಕ್ ಉತ್ಸವವನ್ನು ಆಯೋಜಿಸಲಾಗುತ್ತಿದ್ದು, ಜೂನ್ 2ರಿಂದ 4ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ದೇಶ ವಿದೇಶಗಳಿಂದ ಕಯಾಕ್ ಪಟುಗಳು ಭಾಗವಹಿಸಲಿದ್ದಾರೆ.
ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಸಲಹೆಗಾರ ಕೀರ್ತಿ ಪಾಯಸ್ ಅವರು ಸೋಮವಾರ ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವೈಟ್ ವಾಟರ್ ಕಯಾಕ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. ಕೇರಳದ ಮಲಬಾರ್ ನದಿ ಉತ್ಸವ, ಗಂಗಾ ಕಯಾಕ್ ಉತ್ಸವ, ಉತ್ತರಾಕಂಡ ಮತ್ತು ಮೇಘಾಲಯ ಕಯಾಕ್ ಉತ್ಸವ ಮಾದರಿಯಲ್ಲಿ ಕಾಳಿ ಕಯಾಕ್ ಉತ್ಸವ ಆಯೋಜಿಸಲಾಗುತ್ತಿದೆ. ಈಗಾಗಲೇ ನ್ಯೂಜಿಲ್ಯಾಂಡ್, ನೇಪಾಳ, ಮೇಘಾಲಯ ಮತ್ತಿತರ ಕಡೆಗಳಿಂದ ಸುಮಾರು 125ಮಂದಿ ಸ್ಪರ್ಧಾಳುಗಳು ತಮ್ಮ ಹೆಸರು ನೊಂದಾಯಿಸಿದ್ದಾರೆ ಎಂದು ಹೇಳಿದರು.
ಮೂರು ವಿಭಾಗಗಲ್ಲಿ ಸ್ಪರ್ಧೆ ನಡೆಯಲಿದ್ದು, ವೃತ್ತಿಪರ ವಿಭಾಗದಲ್ಲಿ ಪ್ರಥಮ ಬಹುಮಾನ 40ಸಾವಿರ ರೂ, ದ್ವಿತೀಯ ಬಹುಮಾನ 25ಸಾವಿರ ರೂ. ಹಾಗೂ ತೃತೀಯ ಬಹುಮಾನ 15ಸಾವಿರ ರೂ ನಿಗದಿಪಡಿಸಲಾಗಿದೆ. ಅಮೆಚೂರ್ ವಿಭಾಗದಲ್ಲಿ ಪ್ರಥಮ ಬಹುಮಾನ 15ಸಾವಿರ ರೂ, ದ್ವಿತೀಯ ಬಹುಮಾನ 10ಸಾವಿರ ರೂ. ಹಾಗೂ ತೃತೀಯ ಬಹುಮಾನ ಏಳುಸಾವಿರದ ಐದುನೂರು ನಗದು ಬಹುಮಾನ ನಿಗದಿಪಡಿಸಲಾಗಿದೆ. ಮಧ್ಯಕಾಲಿಕ ವಿಭಾಗದಲ್ಲಿ ವಿಜೇತರಿಗೆ ಕಯಾಕಿಂಗ್ ಸಂಬಂಧಿಸಿದ ಉಪಕರಣಗಳನ್ನು ಬಹುಮಾನವಾಗಿ ನೀಡಲಾಗುವುದು ಎಂದರು.
ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸ್ಲಲೋಂ, ಬೋಟರ್ಕ್ರಾಸ್, ರಿಲೇ, ಮ್ಯಾರಥಾನ್ ಮತ್ತಿತರ 9ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ವೃತ್ತಿಪರ ಹಾಗೂ ಮಧ್ಯಂತರ ವಿಭಾಗಗಳಲ್ಲಿ ಸ್ಪರ್ಧಿಸುವವರಿಗೆ ಊಟ ಮತ್ತು ವಾಸ್ತವ್ಯದ ವ್ಯವಸ್ಥೆಯನ್ನು ಸಹ ಮಾಡಲಾಗುವುದು. ಜಿಲ್ಲಾಡಳಿತದ ವತಿಯಿಂದ ಲೈಫ್ಗಾರ್ಡ್ ತರಬೇತಿ ಪಡೆದಿರುವ ಅಭ್ಯರ್ಥಿಗಳಿಗೆ ಸಹ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
ವರ್ಷವಿಡೀ ಹರಿಯುವ ದೇಶದ ಕೆಲವೇ ನದಿಗಳಲ್ಲಿ ಕಾಳಿ ಒಂದಾಗಿದ್ದು, ಇದು ಕಯಾಕ್ ಮಾಡುವ ಸಾಹಸಪ್ರಿಯರಿಗೆ ಉತ್ತಮ ತಾಣವಾಗಿದೆ. ಇದೇ ಪ್ರಥಮ ಬಾರಿಗೆ ಕಯಾಕ್ ಉತ್ಸವ ಆಯೋಜಿಸಲಾಗುತ್ತಿದ್ದು, ಮುಂದಿನ ವರ್ಷಗಳಲ್ಲಿ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಂಘಟಿಸಲಾಗುವುದು. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಯಾಕ್ ಉತ್ಸವ ಉತ್ತಮ ಕೊಡುಗೆ ನೀಡುವುದರಲ್ಲಿ ಸಂಶಯವಿಲ್ಲ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ರಮೇಶ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ಉಪಸ್ಥಿತರಿದ್ದರು.
Leave a Comment