ಹೊನ್ನಾವರ:
ತಾಲೂಕಿನ ಹಳದೀಪುರದ ಕುಂಬಾರಮಕ್ಕಿಯಲ್ಲಿ ಮಾಲ್ಕಿ ಜಾಗದಲ್ಲಿ ಕೊಳವೆಬಾವಿ ಕೊರೆಸಲು ಮುಂದಾದಾಗ ಸ್ಥಳಿಯರು ಪ್ರತಿಭಟಿಸಿದರು. ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಕೊಳವೆಬಾವಿ ನಿರ್ಮಾಣಕಾರ್ಯವನ್ನು ಸ್ಥಗಿತಗೊಳಿಸಿದರು.
ಕುಂಬಾರಮಕ್ಕಿಯ ಶಂಭು ಗಜಾನನ ಅವಧಾನಿ ಎಂಬುವರು ತಮ್ಮ ಮಾಲ್ಕಿ ಜಾಗದಲ್ಲಿ ಕೊಳವೆ ಬಾವಿ ಕೊರೆಸಲು ಮುಂದಾಗಿದ್ದರು. ಕುಂಬಾರಮಕ್ಕಿಯ ಸುಮಾರು 23 ಕುಟುಂಬಗಳು 2 ವರ್ಷಗಳಿಂದ ಕೊಳವೆಬಾವಿ ತೆಗೆಯುವುದಕ್ಕೆ ತಕರಾರು ತೆಗೆಯುತ್ತಲೇ ಬಂದಿದ್ದರು. ಈ ಹಿನ್ನೆಲೆಯಲ್ಲಿ ಶಂಭು ಅವಧಾನಿ ಅವರು ಸಾಕಷ್ಟು ಬಾರಿ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು. ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಕೊಳವೆಬಾವಿ ಕೊರೆಸಲು ಅನುಮತಿ ನೀಡಿತ್ತು. ಈ ಆದೇಶದನ್ವಯ ಶಂಭು ಗಜಾನನ ಅವಧಾನಿ ಎಂಬುವವರ ಜಮೀನಿಗೆ ಬಂದ ಕೊಳವೆಬಾವಿ ಯಂತ್ರದ ವಾಹನವನ್ನು ಕುಂಬಾರಮಕ್ಕಿಯ ಸುಮಾರು 50 ಜನರು ತಡೆದು ನಿಲ್ಲಿಸಿ ಪ್ರತಿಭಟಿಸಿದರು.
ಘಟನಾ ಸ್ಥಳಕ್ಕೆ ತಹಸೀಲ್ದಾರ್ ವಿ.ಆರ್.ಗೌಡ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಡಾ.ಮಹೇಶ ಕುರಿಯವರ್, ಪಿಎಸ್ಐ ಆನಂದಮೂರ್ತಿ ಭೇಟಿ ನೀಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರನ್ನು ಮನವೊಲಿಸಲು ಮುಂದಾದರು. ಆದರೆ ಅಧಿಕಾರಿಗಳ ಮಾತಿಗೆ ಬಗ್ಗದ ಸಾರ್ವಜನಿಕರು ಒಂದೊಮ್ಮೆ ಕೊಳವೆಬಾವಿ ತೆಗೆಸಲು ಅನುಮತಿ ನೀಡಿದರೆ ಎಲ್ಲರೂ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಕುಂಬಾರಮಕ್ಕಿಯಲ್ಲಿ ಕೊಳವೆಬಾವಿ ಕೊರೆಸಲು ಒಂದೊಮ್ಮೆ ಅನುಮತಿ ನೀಡಿದರೆ ಪ್ರತಿಯೊಬ್ಬರೂ ಕೊಳವೆಬಾವಿ ಕೊರೆಸಲು ಮುಂದಾಗುತ್ತಾರೆ ಎನ್ನುವ ಆತಂಕ ಸಾರ್ವಜನಿಕರದ್ದು. ಕುಂಬಾರಮಕ್ಕಿ ವ್ಯಾಪ್ತಿಯಲ್ಲಿ ಸಾಕಷ್ಟು ನೀರಿನ ಪ್ರಮಾಣ ಕಡಿಮೆಯಿದ್ದು ಕೊಳವೆಬಾವಿ ತೆಗೆಸುವುದರಿಂದ ಅಂತರ್ಜಲ ಮಟ್ಟ ಕುಸಿಯುವ ಭೀತಿ ಎದುರಾಗಲಿದೆ. ಈ ಕಾರಣದಿಂದ ಕೊಳವೆ ಬಾವಿಗೆ ಪರವಾನಿಗೆ ನೀಡಬಾರದೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ತಹಸೀಲ್ದಾರ್ ವಿ.ಆರ್.ಗೌಡ ಮಾತನಾಡಿ ಕುಂಬಾರಮಕ್ಕಿಯಲ್ಲಿ ಅಂತರ್ಜಲಮಟ್ಟ ಕುಸಿಯುವ ಭೀತಿಯಿಂದ ಕೊಳವೆಬಾವಿ ಕೊರೆಸಲು ಸಾರ್ವಜನಿಕರು ಅಡ್ಡಿಪಡಿಸುತ್ತಿದ್ದಾರೆ. ಸಾರ್ವಜನಿಕರ ವಿರೋಧವಿರುವುದರಿಂದ ಕೊಳವೆಬಾವಿ ಕೊರೆಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿ ಪ್ರತಿಭಟನಾಕಾರರ ಮನವೊಲಿಸಿದರು.
ಸ್ಥಳದಲ್ಲಿದ್ದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ ಕುರಿಯವರ್ `ಕುಂಬಾರಮಕ್ಕಿ ವ್ಯಾಪ್ತಿಯಲ್ಲಿ ನೀರಿನ ಅಭಾವ ಕಂಡುಬಂದಲ್ಲಿ ಟ್ಯಾಪ್ ಅಳವಡಿಸಿ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.
Leave a Comment