ಕಾರವಾರ:
ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವೈಪಲ್ಯತೆಗಳನ್ನು ಅರ್ಥಮಾಡಿಕೊಂಡು ಜನ ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ನಗರದ ಮಾಲಾದೇವಿ ಮೈದಾನದಲ್ಲಿ ಬುಧವಾರ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯಕ್ಕೆ ವಿದ್ಯುತ್ ನೀಡುವ ಉತ್ತರ ಕನ್ನಡ ಜಿಲ್ಲೆ ಕತ್ತಲೆಯಲ್ಲಿದೆ. ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆ ಸ್ಥಾಪನೆಗೆ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿದ್ದರೂ ಆ ಬಗ್ಗೆ ಸರ್ಕಾರ ಗಮನ ನೀಡಿಲ್ಲ. ಕದಂಬ ನೌಕಾನೆಲೆ ಸ್ಥಾಪನೆಯಿಂದ ನಿರಾಶ್ರಿತರಾದವರಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೂ ರಾಜ್ಯ ಸರ್ಕಾರ ಅದನ್ನು ವಿಲೆವಾರಿ ಮಾಡಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಬಡ ಜನರ ಬಗ್ಗೆ ಕಾಳಜಿ ಇಲ್ಲ. ಅಭಿವೃದ್ದಿ ವಿರೋಧಿ ದೋರಣೆ ಹೊಂದಿರುವ ರಾಜ್ಯ ಸರ್ಕಾರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನವನ್ನು ನಡೆಸಿಲ್ಲ ಎಂದು ಆರೋಪಿಸಿದರು. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕಾರವಾರಕ್ಕೆ ಮೆಡಿಕಲ್ ಕಾಲೇಜು ಮಂಜೂರಿ ಮಾಡಲಾಗಿತ್ತು. ನಂತರ ಅಧಿಕಾರ ಹಿಡಿದ ಕಾಂಗ್ರೆಸ್ ಅದನ್ನು ಸರಿಯಾಗಿ ಕೆಲಸ ಮಾಡಿಲ್ಲ. ಮೆಡಿಕಲ್ ಕಾಲೇಜು ನಿರ್ಮಾಣ ಕೆಲಸ ತೃಪ್ತಿಕರವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಜನ ಕಸ್ತೂರಿ ರಂಗನ್ ವರದಿ ಜಾರಿಯ ಗೊಂದಲದಲ್ಲಿದ್ದಾರೆ. ಯಾವದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವದಿಲ್ಲ. ಅತಿಕ್ರಮಣದಾರರ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ ಎಂದು ದೂರಿದರು. ಅತಿಕ್ರಮಣದಾರರ ಪರವಾಗಿ ಬಿಜೆಪಿ ಪಕ್ಷ ಕೆಲಸ ಮಾಡುತ್ತಿದೆ. ಸಂಬಂಧಿಸಿದ ಮಂತ್ರಿಗಳಿಗೆ ಸಮಸ್ಯೆಯ ಗಂಭೀರತೆ ಕುರಿತು ಮನವರಿಕೆ ಮಾಡಿಕೊಡಲಿದೆ ಎಂದು ಹೇಳಿದರು. ಅಡಿಕೆ ಹಾಗೂ ತೆಂಗಿನ ಬೆಳೆ ನಷ್ಟದಲ್ಲಿದ್ದು ಸರ್ಕಾರ ಈ ಬಗ್ಗೆ ಯೋಚನೆ ಮಾಡಿಲ್ಲ. ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಆದರೆ ಸಿದ್ದರಾಮಯ್ಯನವರ ಸರ್ಕಾರ ಸಾಲಮನ್ನಾದ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು. ಬರಗಾಲದ ಸಮಸ್ಯೆಗಳ ಬಗ್ಗೆ ಸರ್ಕಾರ ಜನವಿರೋಧಿ ನೀತಿ ಅನುಸರಿಸಿದೆ ಎಂದು ಆರೋಪಿಸಿದರು. ಇನ್ನು ಸಾಗರಮಾಲಾ ಯೋಜನೆ ಅಡಿ ಬಂದರುಗಳಿಗೆ ರೈಲ್ವೇ ಸಂಪರ್ಕ ನೀಡುವದು, ಹುಬ್ಬಳ್ಳಿ-ಅಂಕೋಲಾ ರೈಲು ನಿರ್ಮಾಣ ಯೋಜನೆಗೆ ಒತ್ತು ನೀಡುವದು ಸೇರಿದಂತೆ ವಿವಿಧ ಕೆಲಸಗಳಿಗೆ ಕೇಂದ್ರ ಸರ್ಕಾರ ಸಿದ್ದವಾಗಿದೆ ಎಂದರು. ಮುಂದಿನ ಚುನಾವಣೆಯಲ್ಲಿ 150ಕ್ಕೂ ಅಧಿಕ ಬಿಜೆಪಿ ಸದಸ್ಯರು ಆಯ್ಕೆಯಾಗಲಿದ್ದು, ಬಿಜೆಪಿ ಪಕ್ಷ ಜನಾಭಿಪ್ರಾಯದೊಂದಿಗೆ ಅಭ್ಯರ್ಥಿಗಳ ಆಯ್ಕೆ ನಡೆಸಲಿದೆ ಎಂದ ಅವರು ಯಾರೇ ಅಭ್ಯರ್ಥಿ ಆದರೂ ಜನ ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಪದ್ಮಶ್ರಿ ಪುರಸ್ಕøತ ಸುಕ್ರಿ ಗೌಡ, ಮಹಿಳಾ ಗುತ್ತಿಗೆದಾರ ಸತ್ಯಕ್ಕ ಪೂಜಾರ್, ಸಾಧಕ ಎಂ.ಬಿ.ಎ ವಿದ್ಯಾರ್ಥಿ ಅಣ್ಣಪ್ಪ ಸಿದ್ದಿ ಹಾಗೂ ಪೌರ ಕಾರ್ಮಿಕರನ್ನು ಸನ್ಮಾನಿಸಿದರು. ಸಂಸದ ಅನಂತಕುಮಾರ ಹೆಗಡೆ, ಪ್ರಮುಖರಾದ ಕುಮಾರ ಬಂಗಾರಪ್ಪ ಮಾತನಾಡಿದರು. ವಿವಿಧ ಕ್ಷೇತ್ರದ ಮಾಜಿ ಶಾಸಕರಾದ ವಿ.ಎಸ್. ಪಾಟೀಲ್, ದಿನಕರ ಶೆಟ್ಟಿ, ಸುನಿಲ ಹೆಗಡೆ, ಜೆ.ಡಿ ನಾಯ್ಕ, ಶಿವಾನಂದ ನಾಯ್ಕ ಇನ್ನಿತರ ಗಣ್ಯರು ವೇದಿಕೆಯಲ್ಲಿದ್ದರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾಪಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆಜಿ ನಾಯ್ಕ ಸ್ವಾಗತಿಸಿದರು. ಮಹಿಳಾ ಮೋರ್ಚಾದ ರೂಪಾಲಿ ನಾಯ್ಕ ಸಂಘಟಿಸಿದ್ದರು. ಪಕ್ಷದ ನಗರಾಧ್ಯಕ್ಷ ಮನೋಜ ಭಟ್ಟ ವಂದಿಸಿದರು.
Leave a Comment