ಕಾರವಾರ:
ವಾಹನದಡಿಗೆ ಸಿಲುಕಿ ಸಾವನಪ್ಪುವ ವನ್ಯಮೃಗಗಳ ಸಂಖ್ಯೆ ಹೆಚ್ಚಿದೆ. ದಟ್ಟ ಅರಣ್ಯವನ್ನು ಹೊಂದಿದ ಜೊಯಿಡಾ ಹಾಗೂ ದಾಂಡೇಲಿ ಪ್ರದೇಶದಲ್ಲಿ ಪದೇ ಪದೇ ಕಾಡುಪ್ರಾಣಿಗಳ ಸಾವು ಸಂಭವಿಸುತ್ತಿದೆ. ಇದನ್ನು ಹೊರತು ಪಡಿಸಿ ಜಿಲ್ಲೆಯ ಉಳಿದ ಭಾಗಗಳಲ್ಲಿ ಕೂಡ ವನ ಹಾಗೂ ವನ್ಯಜೀವಿಗಳು ವಿನಾಶದ ಹಾದಿಯಲ್ಲಿವೆ.
ವಾಹನಗಳ ಅಬ್ಬರಕ್ಕೆ ಕಾಡುಪ್ರಾಣಿಗಳು ನಲುಗಿವೆ. ಚಿರತೆ, ಕಾಡು ಹಂದಿ, ನಾಗರಹಾವು, ಮಂಡೂಕ, ಕರಡಿ, ಶಿಂಗಳಿಕ, ಮುಳ್ಳು ಹಂದಿ, ಜಿಂಕೆ ಹಾಗೂ ಕಡವೆಯಂತಹ ಜೀವಿಗಳು ವಾಹನಗಳ ಅಡಿ ಜೀವ ಬಿಡುತ್ತಿದೆ. ಮಂಗಳವಾರ ಕೂಡ ಜೊಯಿಡಾದಲ್ಲಿ ಕರಡಿಯೊಂದು ವಾಹನ ಅಪಘಾತದಲ್ಲಿ ಕೊನೆ ಉಸಿರೆಳೆದಿದೆ. ಜೊಯಿಡಾ ಹಾಗೂ ದಾಂಡೇಲಿ ಭಾಗದಲ್ಲಿ ವಾಹನ ಅಪಘಾತದಲ್ಲಿ ವನ್ಯಜೀವಿ ಮೃತಪಟ್ಟರೆ ವಾಹನ ಮಾಲಿಕರಿಗೆ 7 ವರ್ಷಗಳ ಕಾಲ ಶಿಕ್ಷೆ ವಿಧಿಸುವ ಬಗ್ಗೆ ರಸ್ತೆಯುದ್ದಕ್ಕೂ ನಾಮಫಲಕ ಹಾಕಲಾಗಿದೆ. ಈ ಬಗ್ಗೆ ತಿಳುವಳಿಕೆಯಿದ್ದರೂ ವಾಹನ ಚಾಲಕರ ಅಜಾಗರುಕತೆಯಿಂದಾಗಿ ಕಾಡುಪ್ರಾಣಿಗಳು ಉಸಿರು ಕಳೆದುಕೊಳ್ಳುತ್ತಿವೆ.
ವನ್ಯಜೀವಿಗಳ ರಕ್ಷಣೆಗೆ ಅರಣ್ಯ ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿದೆ. ರಾತ್ರಿ ಹಾಗೂ ನಸುಕಿನ ವೇಳೆ ವಾಹನ ಅಪಘಾತಗಳಲ್ಲಿ ಪ್ರಾಣಿ ಸಾವನಪ್ಪುವದು ಸಾಮಾನ್ಯವಾಗಿ ಕಂಡು ಬರುತ್ತದೆ. ಹೀಗಾಗಿ ಜೊಯಿಡಾದ ಕೆಲ ರಸ್ತೆಗಳನ್ನು ಸಂಜೆ 6ರಿಂದ ಬೆಳಗ್ಗೆ 6ಗಂಟೆಯವರೆಗೆ ಬಂದ್ ಮಾಡಲಾಗುತ್ತದೆ. ಸ್ಥಳೀಯ ಜನರನ್ನು ಹೊರತು ಪಡಿಸಿ ಉಳಿದವರಿಗೆ ಪ್ರವೇಶ ನೀಡಲಾಗುವದಿಲ್ಲ. ಆದರೂ ನಿಯಮ ಉಲ್ಲಂಗಿಸಿ ಸಂಚಾರ ನಡೆಸುವದು ವನ್ಯಜೀವಿ ಸಾವಿಗೆ ಪ್ರಮುಖ ಕಾರಣವಾಗಿದೆ. ಅವಷ್ಯವಿದ್ದಲ್ಲಿ ರಾತ್ರಿ ಶಿಬಿರಗಳನ್ನು ನಡೆಸಿ ವನ್ಯಜೀವಿಗಳ ಚಲನ ವಲನಗಳ ಮೇಲೆ ನಿಗಾ ಇರಿಸಲಾಗುತ್ತಿದೆ. ಅಲ್ಲಲ್ಲಿ ಗುಪ್ತ ಕ್ಯಾಮರಾ ಅಳವಡಿಸಿ ಕಳ್ಳಭೇಟೆಗಾರರನ್ನು ಬಂಧಿಸಲಾಗಿದೆ. ಆದರೆ, ವಾಹನಗಳ ಅಬ್ಬರಕ್ಕೆ ಸಿಲುಕಿ ಸಾವನಪ್ಪುವ ಪ್ರಾಣಿಗಳ ಸಮಸ್ಯೆ ನಿವಾರಿಸಲು ಸಾದ್ಯವಾಗಿಲ್ಲ. ಅಂಕೆ ಸಂಖ್ಯೆಗಳನ್ನು ಕೆದಕಿದರೆ ಎರಡು ವರ್ಷದ ಅವದಿಯಲ್ಲಿ ಹತ್ತಕ್ಕೂ ಅಧಿಕ ವನ್ಯಜೀವಿ ಸಾವು ಇಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ಪ್ರಾಣಿಗಳ ಸಂಖ್ಯೆಯೇ ಹೆಚ್ಚಿದೆ.
Leave a Comment