ಕಾರವಾರ:
ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೋಟೆಗಾಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವಿಫಲತೆಯಿಂದಾಗಿ ಇಂದು ತಾಲೂಕಿನ ಅಸ್ನೋಟಿ ಗ್ರಾಪಂ, ಮುಡಗೇರಿ ಪಂಚಾಯತ್ ಭಾಗದ ಜನರು ಹನಿ ನೀರಿಗೂ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.
ಗೋಟೆಗಾಳಿ ಕುಡಿಯುವ ನೀರಿನ ಯೋಜನೆಯಿಂದ ತಾಲೂಕಿನ ಸಾಕಷ್ಟು ಭಾಗಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಆದರೆ ಅಸ್ನೋಟಿ, ಮುಡಗೇರಿ ಪಂಚಾಯತ್ ವ್ಯಾಪ್ತಿಯ ವಿವಿಧ ಟ್ಯಾಂಕ್ಗಳಿಗೆ ಬರುವ ಕುಡಿಯುವ ನೀರು ಸೋರಿಕೆಯಿಂದಾಗಿ ಜನರು ಬಹು ದೂರದಿಂದ ನೀರು ಹೊತ್ತು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಮುಡಗೇರಿ ಪಂಚಾಯತ್ ವ್ಯಾಪ್ತಿಯ ತೊರ್ಲೆಭಾಗ್, ಅಂಗಡಿ, ಸಾನ್ ಮುಡಗೇರಿ, ಹೋಸಾಳಿ, ದಾದನ ಭಾಗ್, ಹೋಸಾಳಿ ಮನಸಿಟ್ಟಾ ಸೇರಿದಂತೆ ಇನ್ನಿತರ ಭಾಗರ ಜನರು ಕುಡಿಯುವ ನೀರಿನ ಯೋಜನೆಯ ಲಾಭ ಪಡೆಯಲಿ ಎಂದು ಒಂದು ಬೃಹತ್ ನೀರಿನ ಟ್ಯಾಂಕ್ ನಿರ್ಮಾಣ ಮಾಡಿ, ಗ್ರಾಪಂಗೆ ಅದರ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಅಲ್ಲದೆ ಅದೇ ನೀರಿ ಟ್ಯಾಂಕ್ ಮೂಲಕ ಈ ಭಾಗದ ಸಾಕಷ್ಟು ಜನರು ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ.
ಜನರು ಸುಮಾರು ನಾಲ್ಕು ಸಾವಿರ ರೂ. ವೆಚ್ಚ ಮಾಡಿ ಕುಡಿಯುವ ನೀರಿನ ಮೀಟರ್, ಪೈಪ್ ಲೈನ್ಗಳನ್ನು ಜೋಡಿಸಿಕೊಂಡಿದ್ದಾರೆ. ಆದರೆ ಗ್ರಾಪಂನವರ ಸೂಕ್ತ ನಿರ್ವಹಣೆ ಇಲ್ಲದೆ ಜನರು ಸಂಪರ್ಕ ಪಡೆದುಕೊಂಡಿರುವ ಪೈಲ್ಲೈನ್ ಮೂಲಕ ತೊಟ್ಟು ಹನಿ ನೀರು ಸಹ ಬರುತ್ತಿಲ್ಲ. ಇದರಿಂದ ಮುಡಗೇರಿ ಪಂಚಾಯತ್ ವ್ಯಾಪ್ತಿಯ ಜನರು ಕುಡಿಯುವ ನೀರಿಗೂ ತೊಂದರೆ ಪಡುವಂತಾಗಿದೆ. ಸೂಕ್ತ ರೀತಿಯಲ್ಲಿ ನೀರು ಲಭ್ಯವಾಗದಿದ್ದರೂ ಗ್ರಾಪಂಗೆ ವರ್ಷಕ್ಕೆ ನೀರಿನ ಶುಲ್ಕವೆಂದು 600ರೂ. ಅನಿವಾರ್ಯವಾಗಿ ಕಟ್ಟಡಬೇಕಾಗಿದ್ದು ಜನರು ಆಕ್ಷೇಪ ವ್ಯಕ್ತಡಿಸುವಂತಾಗಿದೆ.
* ಕೊಳಚೆ ಪಾಲಾಗುತ್ತಿರುವ ಕುಡಿಯುವ ನೀರು
ಗೋಟೆಗಾಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದಾಗಿ ಅಸ್ನೋಟಿ ಗ್ರಾಪಂ, ಮುಡಗೇರಿಯ ಪಂಚಾಯತ್ ವ್ಯಾಪ್ತಿಗೆ ಬರುವ ಅನೇಕ ಕಡೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಅಸ್ನೋಟೆಗೆ ತೆರಳುವ ಮಾರ್ಗ ಮಧ್ಯದಲ್ಲಿರುವ ಹೋಸಾಳಿ ಕ್ರಾಸ್ ಬಳಿ ಇರುವ ನೀರು ಸರಬರಾಜಾಗುವ ನೀರಿನ ಟ್ಯಾಂಕಿನಿಂದ ನಿತ್ಯ ಬೃಹತ್ ಪ್ರಮಾಣದಲ್ಲಿ ನೀರು ಪೋಲಾಗಿ ಕೊಳಚೆಗೆ ಸೇರುತ್ತಿದೆ. ಈ ಬಗ್ಗೆ ಮುಡಗೇರಿ ತಾಪಂ ಸದಸ್ಯ ಸುರೇಂದ್ರ ಗಾಂವಕರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಸಲ ದೂರು ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಆಯಾ ಭಾಗದ ಗ್ರಾಪಂನವರು ನೀರು ಪೋಲಾಗುವುದನ್ನು ತಡೆದು ಸೂಕ್ತ ಕ್ರಮಕೈಗೊಂಡರೇ ನೀರಿನ ಸಂಪರ್ಕ ಪಡೆದ ಜನರಿಗೆ ನೀರಿ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಸಂಪೂರ್ಣ ನೀರು ಮಾರ್ಗ ಮಧ್ಯೆಯೇ ಸೋರಿಕೆಯಾಗಿ ಪೋಲಾಗುವುದರಿಂದ ಸಂಪರ್ಕ ಪಡೆದಿರುವ ಜನರ ಮನೆಗೆ ನೀರು ತುಲುಪುತ್ತಿಲ್ಲ.
ಅದೇ ರೀತಿಯಲ್ಲಿ ಗೋಟೆಗಾಳಿಯ ಬಹುಗ್ರಾಮ ಕುಡಿಯುವ ನೀರಿನ ಬೃಹತ್ ಟ್ಯಾಂಕ್ನಿಂದ ಮುಡಗೇರಿ ಪಂಚಾಯತ್ ವ್ಯಾಪ್ತಿಯಲ್ಲ ನಿರ್ಮಿಸಲಾಗಿರುವ ಇನ್ನೊಂದು ಬೃಹತ್ ಟ್ಯಾಂಕಿಗೆ ನೀರು ಸರಬರಾಜಾಗುತ್ತಿದೆ. ಆದರೆ ಗ್ರಾಪಂನವರ ಸೂಕ್ತ ನಿರ್ವಹಣೆ ಇಲ್ಲದೆ ನಿತ್ಯ ಸಾವಿರಾರು ಲೀ. ಕುಡಿಯುವ ನೀರು ಮಣ್ಣುಪಾಲಾಗುತ್ತಿದೆ ಎನ್ನುತ್ತಾರೆ ಮುಡಗೇರಿ ಗ್ರಾಪಂ ಸದಸ್ಯ ಸಾಯಿನಾಥ ನಾಯ್ಕ ಅವರು. ಈ ಬಗ್ಗೆ ಗ್ರಾಪಂ ಸಭೆಯಲ್ಲಿ ಸಾಕಷ್ಟು ಸಲ ವಿಷಯ ಪ್ರಸ್ತಾಪಿಸಿದರೂ ಅಧಿಕಾರಿಗಳು ಖ್ಯಾರೇ ಎನ್ನುತ್ತಿಲ್ಲ.
ಮೂಡಗೇರಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಬಾವಿಯು ಸಂಪೂರ್ಣವಾಗಿ ಬತ್ತಿದೆ. ಒಂದು ಹನಿ ನೀರು ಸಹ ಬಾವಿಯಲ್ಲಿ ಇಲ್ಲದ ಕಾರಣದ ದೂರದ ಬಾವಿಯೊಂದರ ಆಶ್ರಯವನ್ನು ಇಲ್ಲಿನ ಜನರು ಪಡೆದುಕೊಂಡಿದ್ದಾರೆ. ಅಲ್ಲದೆ ಬಹುಗ್ರಾಮ ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡಿದ್ದರೂ ಯಾವುದೇ ಪ್ರಯೋಜನ ಇಲ್ಲಿನ ಜನರಿಗಾಗಿಲ್ಲ. ಸರಕಾರ ಕುಡಿಯುವ ನೀರಿಗಾಗಿ ಕೋಟ್ಯಾಂತರ ರೂ. ವ್ಯಯಿಸುತ್ತಿದ್ದರೂ ಸೋರಿಕೆಯ ಮೂಲಕ ಕೊಳಚೆ ಪಾಲಾತ್ತಿದೆ.
Leave a Comment