ಹೊನ್ನಾವರ:
ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿಯಲ್ಲಿ ತಾಲೂಕಿನ ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಪಟ್ಟಣದ ಶರಾವತಿ ಕಲಾಕೇಂದ್ರದಲ್ಲಿ ಏರ್ಪಡಿಸಿದ ಉದ್ಯೋಗ ಮೇಳದಲ್ಲಿ 926 ಯುವಕರು ಪಾಲ್ಗೊಂಡು ವಿವಿಧ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದರು.
ಕೆಸಿ ಕಾಫಿ ಡೇ 124, ಬೆಂಗಳೂರಿನ ಟೀ ಲೀಜರ್ 68, ಸ್ಕೋಡ್ವೆಸ್ ಸಂಸ್ಥೆ 145, ಆದಿಶಕ್ತಿ ಇಂಡಸ್ಟ್ರೀಸ್ , ಸಿಂಡ್ ಗ್ರಾಮೀಣ ಸಂಸ್ಥೆ 59, ಭಾರತೀಯ ಜೀವ ವಿಮಾ ನಿಗಮ 73, ಹಾಗೂ ಇತರ ಕಂಪನಿಗಳು 296 ಯುವಕರನ್ನು ತರಬೇತಿಗೆ ಆಯ್ಕೆ ಮಾಡಿಕೊಂಡಿವೆ. ಅಭ್ಯರ್ಥಿಗಳ ಆಯ್ಕೆಮಾಡಿಕೊಂಡ ಉದ್ಯೋಗಕ್ಕೆ ಸಂಬಂಧಿಸಿ ನಿಗದಿತ ಅವಧಿಯ ತರಬೇತಿಯನ್ನು ನೀಡಲಾಗುವುದು ಎಂದು ಕಂಪನಿಗಳ ನಿರ್ದೇಶಕರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ.ಉಪಕಾರ್ಯದರ್ಶಿ ಆರ್.ಜಿ.ನಾಯಕ ಮಾತನಾಡಿ`ಸೂಕ್ತ ತರಬೇತಿಯಿಲ್ಲದೆ ದೇಶದ ಶೇ. 65 ರಷ್ಟು ಯುವಜನಶಕ್ತಿ ವ್ಯರ್ಥವಾಗುತ್ತಿದೆ. ಕೌಶಲ್ಯ ಯೋಜನೆಯನ್ನು ಬಳಸಿಕೊಂಡು ಯುವಕರು ಸ್ವಾವಲಂಬನೆ ಬದುಕು ನಡೆಸಬೇಕು’ ಎಂದು ಹೇಳಿದರು.
ತಾ.ಪಂ ಉಪಾಧ್ಯಕ್ಷೆ ಲಲಿತಾ ನಾಯ್ಕ ಮಾತನಾಡಿ ಪಾಲಕರು ತಮ್ಮ ಮಕ್ಕಳನ್ನು ಕೌಶಲ್ಯ ತರಬೇತಿಗೆ ಹೋಗುವಂತೆ ಪ್ರೋತ್ಸಾಹಿಸಿ ಅವರ ಭವಿಶ್ಯ ಉಜ್ವಲಗೊಳಿಸಬೇಕು ಎಂದರು.
ತಾ.ಪಂ ಸದಸ್ಯ ಲೋಕೇಶ ಧರ್ಮ ನಾಯ್ಕ, ಹೊಸಾಕುಳಿ ಗ್ರಾ.ಪಂ ಅಧ್ಯಕ್ಷ ಸುರೇಶ ಶೆಟ್ಟಿ, ಖರ್ವಾ ಗ್ರಾ.ಪಂ ಅಧ್ಯಕ್ಷ ಮಾಬ್ಲ ರಾಮ ನಾಯ್ಕ, ಚಿಕ್ಕನಕೋಡ ಗ್ರಾ.ಪಂ ಅಧ್ಯಕ್ಷೆ ನಾಗವೇಣಿ ನಾಯ್ಕ ಇತರರು ಇದ್ದರು. ತಾ.ಪಂ ಇಒ ಡಾ.ಮಹೇಶ ಕುರಿಯವರ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ಸಂಯೋಜನಾಧಿಕಾರಿ ಬಾಲಚಂದ್ರ ನಾಯ್ಕ, ಸುಧೀಶ ನಾಯ್ಕ ನಿರೂಪಿಸಿದರು
Leave a Comment