ಕಾರವಾರ:
ಭಾರತೀಯ ನೌಕಾನೆಲೆಯೊಳಗೆ ಮೂವರು ಅನುಮಾನಾಸ್ಪದ ವ್ಯಕ್ತಿಗಳು ನುಗ್ಗಿದ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ನಗರ ಪೊಲೀಸ್ ಠಾಣೆಗೆ ನೌಕಾನೆಲೆ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ. ಸಂಜೆಯವರೆಗೂ ನೌಕಾನೆಲೆ ಸಿಬ್ಬಂದಿ ಹಾಗೂ ಪೊಲೀಸರು ಅಪರಿಚಿತರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದು, ಸಂಜೆ ವೇಳೆಗೆ ಇದನ್ನು ಅಣಕು ಕಾರ್ಯಾಚರಣೆ ಎಂದು ನೌಕಾನೆಲೆ ಸ್ಪಷ್ಟ ಪಡಿಸಿದೆ.
ಬೆಳಗ್ಗೆ ಕದಂಬ ನೌಕಾನೆಲೆ ಸುತ್ತಲು ಹಾಕಲಾದ ತಡೆಗೋಡೆ ರಂದ್ರ ಕೊರೆದು ಮೂವರ ಒಳ ಪ್ರವೇಶಿಸಿದ್ದಾರೆ ಎಂಬ ಮಾತುಗಳು ನಗರದಲ್ಲಿ ವ್ಯಾಪಕವಾಗಿ ಹರಡಿದ್ದು, ಎಲ್ಲಡೆ ಬಿಗಿ ಭದ್ರತೆ ಕಂಡು ಬಂದಿತು. ಅನುಮಾನಾಸ್ಪದ ವ್ಯಕ್ತಿಗಳು ನುಗ್ಗಿದ ವದಂತಿ ಬಹಿರಂಗವಾಗುತ್ತಿದ್ದಂತೆ ಜನ ಆತಂಕಗೊಂಡರು. ಉಗ್ರರು ನುಸಳಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಜನ ಹೆದರಿದ್ದರು. ಬೈತಖೋಲ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪೊಲೀಸರು ವಾಹನ ಹಾಗೂ ಜನರ ತಪಾಸಣೆ ನಡೆಸಿದರು. ಇದರಿಂದ ಸಾರ್ವಜನಿಕರು ಗಾಬರಿಗೊಂಡಿದ್ದರು. ಬೆಳಗ್ಗೆ 9ಗಂಟೆಯ ವೇಳೆಗೆ ನೌಕಾನೆಲೆ ಅಧಿಕಾರಿಗಳಿಂದ ಈ ಮಾಹಿತಿ ಪೊಲೀಸರಿಗೆ ರವಾನೆಯಾಗಿದ್ದು, ಸ್ಥಳೀಯ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿತ್ತು. ಸಂಜೆಯವರೆಗೂ ಈ ಬಗ್ಗೆ ನೌಕಾನೆಲೆ ಅಧಿಕಾರಿಗಳು ಯಾವದೇ ಸ್ಪಷ್ಟ ಮಾಹಿತಿ ನೀಡದ ಕಾರಣ ಗೊಂದಲ ಮುಂದುವರೆದಿತ್ತು.
ಸಂಜೆ 7.30ಕ್ಕೆ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ನೌಕಾನೆಲೆ ಅಧಿಕಾರಿಗಳು, ಇದೊಂದು ಅಣಕು ಕಾರ್ಯಾಚರಣೆ ಎಂದು ತಿಳಿಸಿದ್ದಾರೆ. ಚೆಂಡಿಯಾ, ಹಟ್ಟಿಕೇರಿ ಭಾಗದ ಹಳ್ಳಿಗಳ ಜನ ಕಟ್ಟಿಗೆ ಕಟಾವು ಹಾಗೂ ಮೀನುಗಾರಿಕೆ ನಡೆಸಲು ನೌಕಾನೆಲೆ ಒಳಗೆ ಅನಧಿಕೃತ ಪ್ರವೇಶ ನಡೆಸುತ್ತಿದ್ದು, ಅವರನ್ನು ಬಂಧಿಸಿ ಪೊಲೀಸ್ ಠಾಣೆಗೆ ಹಸ್ತಾಂತರಿಸುವದು ಆಗಾಗ ನಡೆಯುತ್ತಿರುತ್ತದೆ. ಕಳೆದ ಹತ್ತು ದಿನದ ಅವದಿಯಲ್ಲಿ ಇಂತಹ ಎರಡು ಘಟನೆ ನಡೆದಿದ್ದು, ನೌಕಾನೆಲೆ ಸಿಬ್ಬಂದಿ ಭದ್ರತಾ ಕಾರ್ಯಾಚರಣೆ ಕುರಿತು ಪರೀಕ್ಷಿಸಲು ಅಣಕು ಕಾರ್ಯಾಚರಣೆ ನಡೆಸಲಾಯಿತು ಎಂದು ತಿಳಿಸಲಾಗಿದೆ. ಕರಾವಳಿಯಲ್ಲಿ ನಡೆಯುತ್ತಿರುವ ಹೆದ್ದಾರಿ ಅಗಲೀಕರಣದಿಂದ ತಡೆಗೋಡೆಗೆ ದಕ್ಕೆ ಉಂಟಾಗಿದ್ದು, ಆಯಾ ಪ್ರದೇಶಗಳ ಮೂಲಕ ಸ್ಥಳೀಯರು ಒಳ ಪ್ರವೇಶಿಸುತ್ತಾರೆ. ಅದನ್ನು ಗಮನಿಸಿದ ಸಿಬ್ಬಂದಿ ತಡೆಗೋಡೆಯನ್ನು ಭದ್ರಪಡಿಸುತ್ತಾರೆ. ಗುರುವಾರ ಕೂಡ ಸಂಕ್ರುಭಾಗ ಹಾಗೂ ಬಿಣಗಾದಲ್ಲಿ ಅಪರಿಚಿತರು ಪ್ರವೇಶಿಸಿದ್ದರು. ಭದ್ರತಾ ಸಿಬ್ಬಂದಿ ಅವರನ್ನು ಬಂಧಿಸಲು ತೆರಳಿದಾಗ ಓಡಿ ತಪ್ಪಿಸಿಕೊಂಡರು. ಅಪರಿಚಿತರು ಅಲ್ಲಿನ ಕಾಡಿನಲ್ಲಿ ತಲೆಮರೆಸಿಕೊಂಡ ಅನುಮಾನವಿದ್ದರಿಂದ ಕಾರ್ಯಾಚರಣೆ ನಡೆಸಲಾಯಿತು. ಸಂಜೆ ವೇಳೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆ ವಿವರಿಸಿದೆ.
* ದೋಷ ಮುಚ್ಚಿಡುವ ಪ್ರಯತ್ನ
ಅಪರಿಚಿತ ವ್ಯಕ್ತಿಗಳು ನೌಕಾನೆಲೆಯೊಳಗೆ ಅನಧಿಕೃತ ಪ್ರವೇಶ ನಡೆಸಿದ್ದು, ಅವರನ್ನು ಪತ್ತೆ ಹಚ್ಚಲು ಸಾದ್ಯವಾಗದ ನೌಕಾನೆಲೆ ಅಧಿಕಾರಿಗಳು ಕೊನೆಗೆ ಇದನ್ನು ಅಣಕು ಪ್ರದರ್ಶನ ಎಂದು ಬಿಂಬಿಸಿದ್ದಾರೆ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
Leave a Comment