ಹೊನ್ನಾವರ :
ವಿದ್ಯೆ ಬಯಸುವವರಿಗೆ ಸಮರ್ಥ ಚಾರಿಟೇಬಲ್ ಟ್ರಸ್ಟ್ ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಎಲ್ಲ ಬಡವರು ವಿದ್ಯೆ ಕಲಿಯಬೇಕು ಎಂದು ಶಾಸಕ ಮಂಕಾಳು ವೈದ್ಯ ಹೇಳಿದ್ದಾರೆ. ಮುಗ್ವಾ ಸುಬ್ರಹ್ಮಣ್ಯದ ರಾಘವೇಂದ್ರ ಭಾರತಿ ಸಭಾಭವನದಲ್ಲಿ ಸಮರ್ಥ ಚಾರಿಟೇಬಲ್ ಟ್ರಸ್ಟ್ನಿಂದ ಪಂಚಗ್ರಾಮ ಮತ್ತು ಭಟ್ಕಳ ತಾಲೂಕಿನ ಮುರ್ಡೇಶ್ವರ ಗ್ರಾಮದ ಶಾಲೆಗಳ ಬಡಮಕ್ಕಳಿಗೆ ಉಚಿತ ಪಟ್ಟಿ ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಸಮರ್ಥ ಟ್ರಸ್ಟ್ನ ರಾಮ ಗೌಡ ಬಡತನದಲ್ಲಿ ಕಲಿತು ಬೆಂಗಳೂರಿನಲ್ಲಿ ಉದ್ಯಮಿಯಾಗಿ ಬೆಳೆದರೂ ಹುಟ್ಟಿದ ಊರಿನ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಸತತ 5 ವರ್ಷಗಳಿಂದ ಪಟ್ಟಿಗಳನ್ನು ವಿತರಿಸುತ್ತಿರುವುದು ಅಭಿನಂದನೀಯ ಎಂದರು.
ಹಿರಿಯ ಪತ್ರಕರ್ತ ಜಿ. ಯು. ಭಟ್ಟ್ ಮಾತನಾಡಿ ಈ ಕಾರ್ಯಕ್ರಮ ನಿಜಕ್ಕೂ ಅಬಿನಂದನೀಯ, ರಾಮ ಗೌಡರು ಇನ್ನೂ ಹೆಚ್ಚಿನ ಇಂತ ಒಳ್ಳೆಯ ಕಾರ್ಯಗಳನ್ನು ಮಾಡಲಿ ಎಂದರು.
ಸಾಮಾಜಿಕ ಕಾರ್ಯಕರ್ತ ಕೃಷ್ಣ ಜೆ. ಗೌಡ, ಮಾವಿನಖುರ್ವಾ ಮಾತನಾಡಿ ರಾಮ ಗೌಡರು ಯಾವುದೇ ಪ್ರಚಾರ ಸ್ವಾರ್ಥ ಬಯಸದೇ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ದೇವರು ಇವರಿಗೆ ಇನ್ನು ಹೆಚ್ಚಿನ ಶಕ್ತಿ ಕೊಡಲಿ ಎಂದರು.
ಕಾರ್ಯಕ್ರಮದಲ್ಲಿ 510 ವಿದ್ಯಾರ್ಥಿಗಳಿಗೆ ನೋಟ್ ಬುಕ್, 20 ಅಂಗನವಾಡಿಗೆ ಆಟಿಗೆ ಸಾಮಗ್ರಿ ವಿತರಿಸಲಾಯಿತು. ಓಸಿಯನ್ ಹಾರ್ಟ ಬ್ರೇಕರ್ಸ್ ಹೊನ್ನಾವರ ಇವರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.
ನೀಲಗೋಡ ಯಕ್ಷಿ ಚೌಡೇಶ್ವರಿ ದೇವಾಲಯದ ಅರ್ಚಕರಾದ ಮಹಾದೇವ ಸ್ವಾಮಿ ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲಕೃಷ್ಣ ಭಟ್ಟ ಶುಭಾಸಯ ಕೋರಿದರು. ಚಂದ್ರಶೇಖರ ಗೌಡ ಮಂಕಿ, ಮುಗ್ವಾ ಗ್ರಾ. ಪಂ. ಅಧ್ಯಕ್ಷ ಟಿ. ಎಸ್. ಹೆಗಡೆ, ಸಂತೆಗುಳಿ ಗ್ರಾ. ಪಂ. ಅಧ್ಯಕ್ಷ ಸುರೇಶ ಶೆಟ್ಟಿ, ಐ. ವಿ. ನಾಯ್ಕ ನಗರೆ, ತಾ. ಪಂ. ಸದಸ್ಯ ಲೋಕೇಶ ನಾಯ್ಕ, ಗ್ರಾ. ಪಂ. ಸದಸ್ಯರು ಇನ್ನಿತರ ಗಣ್ಯರು, ಟ್ರಸ್ಟ್ನ ಪದಾದಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ಸುದೀಶ ನಾಯ್ಕ, ಶಂಕರ ಗೌಡ ಕಾರ್ಯಕ್ರಮ ನಿರ್ವಹಿಸಿದರು.
Leave a Comment