ಕಾರವಾರ:
ಜಿಲ್ಲೆಯಲ್ಲಿ ಎಚ್1ಎನ್1 ಮಾರಕ ಕಾಯಿಲೆ ಜನರನ್ನು ಭಯಭೀತರನ್ನಾಗಿಸಿದೆ. ಸೂಕ್ತ ಚಿಕಿತ್ಸೆಯ ಅಲಭ್ಯತೆ, ರೋಗ ಪತ್ತೆಗೆ ಪರೀಕ್ಷಾ ಕೇಂದ್ರವಿಲ್ಲದೆ ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ದೂರದ ರಾಜ್ಯಗಳಲ್ಲಿ ದುಡಿಯುವ ಅಥವಾ ಪ್ರವಾಸಕ್ಕೆಂದು ತೆರಳುವವರು ಜಿಲ್ಲೆಗೆ ಎಚ್1ಎನ್1 ಕಾಯಿಲೆಯನ್ನು ಹೊತ್ತು ತರುತ್ತಿದ್ದು 2017ರಲ್ಲಿ ಈವರೆಗೆ ಸುಮಾರು 22 ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೆ 6 ಜನ ರೋಗ ಬಾಧಿತರು ಮೃತಪಟ್ಟಿದ್ದು ಜನರನ್ನು ಇನ್ನಷ್ಟು ಆತಂಕಕ್ಕಿಡು ಮಾಡುತ್ತಿದೆ. ಕಾರವಾರದಲ್ಲಿ 3, ಅಂಕೋಲಾ, ಕುಮಟಾ, ಸಿದ್ದಾಪುರ, ಯಲ್ಲಾಪುರದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿದ್ದರೇ ಹೊನ್ನಾವರದಲ್ಲಿ 5, ಭಟ್ಕಳದದಲ್ಲಿ 7 (3 ಸಾವು), ಶಿರಸಿಯಲ್ಲಿ 3 ಪ್ರಕರಣ ಪತ್ತೆಯಾಗಿದ್ದು ಮೂವರು ಮೃತಪಟ್ಟಿದ್ದಾರೆ. ಹೆಚ್ಚಿನ ಪ್ರಕರಣದಲ್ಲಿ ಗೋವಾ, ರಾಜಸ್ಥಾನ, ಗುಜರಾತ್ನಂಥ ರಾಜ್ಯಗಳಿಗೆ ತೆರಳಿದ್ದವರೇ ಎಚ್1ಎನ್1 ಕಾಯಿಲೆ ಪೀಡಿತರಾಗಿ ಜಿಲ್ಲೆಗೆ ವಾಪಸ್ಸಾಗುತ್ತಿದ್ದಾರೆ. ಸೊಂಕು ರೋಗವಾಗಿರುವ ಎಚ್1ಎನ್1 ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆಗಳಿವೆ. ಕಳೆದ ಮೂರು ವರ್ಷಕ್ಕೆ ಪೈಕಿ ಈ ವರ್ಷ ಅರ್ಧ ಮುಗಿಯುವವರೆಗೆ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದ್ದು ಜಿಲ್ಲೆಯ ಮಟ್ಟಿಗೆ ಆತಂಕದ ವರ್ಷವಾಗಿ ಪರಿಣಮಿಸಿದೆ. ಕೆಲವೇ ವಾರದಲ್ಲಿ ಸಾವಿನ ಮೇಟ್ಟಿಲ ಬಳಿ ಒಯ್ಯುವ ಎಚ್1ಎನ್1 ರೋಗ ಪತ್ತೆಗೆ ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿಲ್ಲ. ಅನುಮಾನಿತ ವ್ಯಕ್ತಯ ಗಂಟಲು ಮಾದರಿಯನ್ನು ದೂರದ ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಅಂಥ ಆಸ್ಪತ್ರೆಗಳಿಗೆ ಕಳುಹಿಸಿದಾಗ ಮಾದರಿಯ ವರದಿ ಬರುವವರೆಗೆ ವ್ಯಕ್ತಿ ಇನ್ನಷ್ಟು ಅಸ್ವಸ್ಥಗೊಳ್ಳುತ್ತಿದ್ದಾರೆ.
2014ರಲ್ಲಿ ಜಿಲ್ಲೆಯಲ್ಲಿ ಕೇವಲ ಒಂದು ಪ್ರಕರಣ ಪತ್ತೆಯಾಗಿತ್ತು. ಅದೇ ಪ್ರಕಾರ 2015ರಲ್ಲಿ ಒಟ್ಟೂ 25 ಎಚ್1ಎನ್1 ರೋಗ ಬಾಧಿತರಲ್ಲಿ 4 ಜನ ಮೃತಪಟ್ಟಿದ್ದರು. ಕಳೆದ 2016ರಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಆದರೆ 2017ರಲ್ಲಿ ಕೇವಲ ಏಳು ತಿಂಗಳ ಅವಧಿಯಲ್ಲಿ ಒಟ್ಟು 22 ಎಚ್1ಎನ್1 ದಾಖಲಾಗಿದ್ದು 6ಜನರು ಮೃಪಟ್ಟಿದ್ದಾರೆ. ಈ ವರ್ಷ ಶಿರಸಿ ತಾಲೂಕಿನಲ್ಲಿ ಮೃತಪಟ್ಟ ಮೂರು ವ್ಯಕ್ತಿಗಳು ಈಗಾಗಲೇ ಮೃತಪಟ್ಟು ಭಟ್ಕಳ ತಾಲೂಕಿನಲ್ಲಿ ತಾಯಿ ಮಗು ಅಸುನಿಗಿದ್ದಾರೆ. ಹೆಚ್ಚಿನವರು ಬೇರೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆಯಲ್ಲೇ ಮೃತರಾಗಿದ್ದಾರೆ. ಎಚ್1ಎನ್1 ಕಾಯಿಲೆ ಮೂರು ಹಂತವಾಗಿ ಬಾಧಿತರಿಗೆ ಕಾಡುತ್ತದೆ. ಪ್ರಾರಂಭದಲ್ಲಿ ಸ್ವಲ್ಪ ಜ್ವರ, ಕೆಮ್ಮು, ನೆಗಡಿ ಪ್ರಾರಂಭವಾಗಿ ನಂತರ ಅದರ ತೀವೃತೆ ಹೆಚ್ಚುತ್ತದೆ. ಮೂರನೇ ಹಂತವಾಗಿ ಕಾಯಿಲೆ ಇದ್ದವರಿಗೆ ಉಸಿರಾಟದ ತೊಂದರೆ ಪ್ರಾರಂಭಗೊಳ್ಳುತ್ತದೆ. ರೋಗಿಗೆ ಶ್ವಾಶಕೋಶದ ತೊಂದರೆ ಪ್ರಾರಂಭಗೊಂಡು ಕಾಯಿಲೆ ತೀವ್ರಗೊಳ್ಳುತ್ತಿದೆ. ಅಂಥ ರೋಗಿಗೆ ಉಸಿರಾಡಲು ಕೃತಕ ಉಸಿರಾಟದ ವ್ಯವಸ್ಥೆ ಮಾಡಬೇಕಾಗುತ್ತಿದೆ.
ಶಂಕಿತರಲ್ಲಿ ರೋಗ ಪತ್ತೆ ಮಾಡಿಕೊಳ್ಳಬೇಕಾದರೆ ಇಲ್ಲಿನ ಆಸ್ಪತ್ರೆಗಳಿಂದ ಗಂಟಲ ಮಾದರಿ(ಸ್ವಾಬ್) ವ್ಯವಸ್ಥೆ ಹೊಂದರುವ ಹೊರ ಜಿಲ್ಲೆಗೆ ಕಳುಹಿಸಬೇಕಾಗುತ್ತದೆ. ಅಲ್ಲದೆ ಹೆಚ್ಚಿನ ಶಂಕಿತರು ಮಣಿಪಾಲ ಆಸ್ಪತ್ರೆಗೆ ತೆರಳುತ್ತಿದ್ದಾರೆ. ಅಲ್ಲದೆ ಬೆಳಗಾವಿ, ಧಾರವಾಡ, ಹುಬ್ಬಳಿಯಲ್ಲಿ ಆಸ್ಪತ್ರೆಗಳಲ್ಲಿ ರೋಗ ಪತ್ತೆ ಮಾಡುವ ಅತ್ಯಾಧುನಿಕ ವ್ಯವಸ್ಥೆಗಳಿವೆ. ಆದರೆ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಸರಕಾರ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಮೆಡಿಕಲ್ ಕಾಲೇಜು ಪ್ರಾರಂಭಗೊಂಡಿದ್ದು ಎಲ್ಲ ವ್ಯವಸ್ಥೆ ಇರುವ ಮೆಡಿಕಲ್ ಕಾಲೇಜಿನಲ್ಲಿ ಅತ್ಯಾಧುನಿಕ ಪ್ರಯೋಗಾಲಯ ನೀಡಲಾಗುತ್ತಿದೆ. ಕೊನೆ ಪಕ್ಷ ಇಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ವಿವಿಧ ಮಾದರಿಯ ರೋಗ ಪತ್ತೆ ಮಾಡಲು ಎಲ್ಲ ವ್ಯವಸ್ಥೆಯನ್ನು ಸರಕಾರ ಕಲ್ಪಿಸಬೇಕು. ಇದರಿಂದ ಜಿಲ್ಲೆಯ ಜನರು ದೂರದ ಜಿಲ್ಲೆಗೆ ತೆರಳುವುದು ತಪ್ಪಲಿದೆ ಎನ್ನುವುದು ಜಿಲ್ಲೆಯ ಪ್ರಜ್ಞಾವಂಥರ ಬೇಡಿಕೆಯಾಗಿದೆ.
ಮುನ್ನೆಚ್ಚರಿಕೆ ಕ್ರಮಕ್ಕೆ ಆರೋಗ್ಯ ಇಲಾಖೆ ಸಲಗೆಗಳು
*ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು
*ಮೂಗು, ಕಣ್ಣು ಅಥವಾ ಬಾಯಿ ಮುಟ್ಟಿಕೊಂಡಾದ ಸಾಬೂನಿನಿಂದ ಕೈ ತೊಳೆಯಬೇಕು.
*ಚೆನ್ನಾಗಿ ನಿದ್ದೆ, ದೈಹಿಕ ಚಟುವಟಿಕೆ ಮಾಡಬೇಕು.
*ಹೆಚ್ಚು ನೀರು, ಪೌಷ್ಠಿಕಾಂಶದ ಆಹಾರ, ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಬೇಕು.
*ಜನ ಸಂದಣಿ ಇರುವ ಸ್ಥಳಕ್ಕೆ ತೆರಳಿದ್ದಾಗ ಸಾಕಷ್ಟು ಜಾಗೃತವಾಗಿರಬೇಕು.
ರೋಗದ ಲಕ್ಷಣ:
*ತೀವ್ರ ಸ್ವರೂಪದ ಜ್ವರ,
*ಅತೀ ಭೇದಿ/ವಾಂತಿ
ಕೆಮ್ಮು ಮತ್ತು ಹಳದಿ ಕಫ
*ನೆಗಡಿ ಮತ್ತು ಗಂಟಲು ಕೆರೆತ
*ಅತೀಯಾದ ಮೈ ಕೈ ನೋವು
*ಉಸಿರಾಟದ ತೊಂದರೆ
ಆರೋಗ್ಯ ಇಲಾಖೆ ನೀಡಿದ ಮಾರ್ಗ ದರ್ಶನವನ್ನು ಜನರು ಪಾಲಿಸಬೇಕು. ಜ್ವರ ಇನ್ನಿತರ ರೋಗ ಲಕ್ಷಣವಿದ್ದಾಗ ತಪಾಸಣೆ ಮಾಡಿಕೊಳ್ಳುವುದು, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಈಗಾಗಲೇ ಹೊರ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಸೊಂಕುಗಳ ಬಗ್ಗೆ ಜನರು ಸೂಕ್ತವಾಗಿ ತಿಳಿದುಕೊಂಡು ಜಾಗೃತರಾಗಬೇಕಾಗಿರಬೇಕು.
* ಡಾ. ಅಶೋಕಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
Leave a Comment