ಹೊನ್ನಾವರ:
ಸುಮಾರು 50 ವರ್ಷಗಳ ಹಿಂದಿನ ಹಾಗೂ ಮುಂದಿನ 100 ವರ್ಷಗಳ ದಿನಾಂಕ ಹೇಳಿದರೆ ಕ್ಷಣಾರ್ಧದಲ್ಲಿ ಯಾವ ವಾರ ಎಂದು, ವಿಶೇಷ ಹಬ್ಬ ಹರಿದಿನಗಳು ಯಾವ ದಿನದಲ್ಲಿ ಬರಲಿದೆ ಎಂಬುದನ್ನು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಹೇಳುವ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ ಈತ ತಾಲೂಕಿನ ಅನಿಲಗೋಡ ಜನತಾ ವಿದ್ಯಾಲಯದದಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಈತನಿಗೆ ಜನತಾ ವಿದ್ಯಾಲಯ ಅನಿಲಗೋಡ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಾಲ್ಯದಲ್ಲಿ ಎಲ್ಲರಂತೆ ಚುರುಕಾಗಿರದೇ ಅಂತರ್ಮುಖಿಯಾಗರುತ್ತಿದ್ದ. ಓದಿನಲ್ಲೂ ಅಷ್ಟೇನು ಚುರುಕಿಲ್ಲದ ಈ ಹುಡುಗನನ್ನು ಕಂಡವರು ಈತನ ಅಣ್ಣನಿಗಿರುವ ಪ್ರತಿಭೆ ಈತನಲ್ಲಿಲ್ಲ ಎಂದು ಆತನ ತಂದೆ ತಾಯಿಗೆ ಪ್ರಶ್ನಿಸುತ್ತಿದ್ದರು. ಕಳೆದ ಒಂದು ವರ್ಷಗಳಿಂದ ಈತ ಬದಲಾಗಿದ್ದಾನೆ ಎಂದು ಆತನ ತಂದೆ ಪ್ರಕಾಶ ಹೆಗಡೆ ತಿಳಿಸಿದರು. ಮಗ್ಗಿಯನ್ನು ಬಾಲ್ಯದಿಂದಲೇ ಪಟಪಟನೆ ಹೇಳುವ ಜ್ಞಾಪಕ ಶಕ್ತಿ ಇವನದಾಗಿತ್ತು. ಮೊಬೈಲ್ ಫೋನ್, ಟಿವಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದ ಈ ಹುಡುಗ ಗೃಹಣ, ಭೂಕಂಪ ವಿಚಾರವನ್ನು ಟಿವಿಯಲ್ಲಿ ತಪ್ಪದೇ ಏಕಾಗ್ರತೆಯಿಂದ ನೋಡುತ್ತಾನೆ. ಕ್ಯಾಲೆಂಡರ್ ಬಗ್ಗೆ ಇವನಿಗೆ ಎಲ್ಲಿಲ್ಲದ ಆಸಕ್ತಿ. ಕ್ಯಾಲೆಂಡರ್ ಕಂಡಾಕ್ಷಣ ತದೇಕ ಚಿತ್ತದಿಂದ ಅಭ್ಯಸಿಸುತ್ತಾನೆ. ಇದೇ ಇವನ ವಿಸ್ಮಯ ಜ್ಞಾಪಕ ಶಕ್ತಿಗೆ ಕಾರಣವಾಗಿರಬಹುದು ಎಂಬ ಅಭಿಪ್ರಾಯ ಪಾಲಕರದ್ದು.
ಈತ ಮುಂಬರುವ 100 ವರ್ಷಗಳ ಯಾವ ದಿನಾಂಕದಂದು ಯಾವ ಹಬ್ಬ-ಹರಿದಿನಗಳು, ಶತಮಾನದಲ್ಲಿ ಬರುವ ಅಧಿಕ ಮಾಸಗಳು, ಕ್ಷಯ ಮಾಸಗಳು ಚಂದ್ರಮಾನ ಯುಗಾದಿ ಬರುವ ದಿನಗಳು, ಮಹಾಶಿವರಾತ್ರಿ ಬರುವ ದಿನಗಳನ್ನು ಕ್ಷಣಾರ್ಧದಲ್ಲಿ ಹೇಳುವ ಮೂಲಕ ಎಲ್ಲರಿಗೂ ಬೆರಗುಗೊಳಿಸಿದ್ದಾನೆ. ಅಷ್ಟೇ ಅಲ್ಲದೇ ಯಾವುದೇ ವ್ಯಕ್ತಿಯ ಹುಟ್ಟಿದ ದಿನಾಂಕವನ್ನು ತಿಳಿಸಿದರೆ ಹುಟ್ಟಿದ ವಾರವನ್ನು ತಿಳಿಸುತ್ತಾನೆ. ವಿಶ್ವದ ಯಾವುದೇ ದೇಶದ ಹೆಸರು ಹೇಳಿದರೆ ಆ ದೇಶದ ರಾಜಧಾನಿ ಯಾವುದು? ಅಲ್ಲಿ ಹಾದು ಹೋಗುವ ಅಕ್ಷಾಂಶ, ರೇಖಾಂಶದ ಬೆಗ್ಗೆಯೂ ಅವನಲ್ಲಿ ಅಲ್ಲಿನ ವಿಶೇಷತೆಗಳ ಬಗ್ಗೆ ಸಿದ್ಧ ಉತ್ತರ ಸಿಗುತ್ತದೆ. ಈ ಪ್ರತಿಭೆಯನ್ನು ಎಲ್ಲರಿಗೂ ಗುರುತಿಸಬೇಕು ಎಂಬ ಹಂಬಲದಿಂದ ಆತ ಕಲಿತಿರುವ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಾರುತಿ ಶೇಟ್ ಮಣ್ಣಿಗೆ, ಮುಖ್ಯ ಶಿಕ್ಷಕ ಕಮಾಲಕರ ಹುಲುಸ್ವಾರ್, ಸತೀಶ ಶೆಟ್ಟಿ, ಸೌಮ್ಯ ಹೆಗಡೆ ಎಲ್ಲರೂ ಸೇರಿ ಹೊನ್ನಾವರ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಂಗಣದಲ್ಲಿ ಬಾಲಕನ ಪ್ರತಿಭೆ ಪ್ರದರ್ಶಿಸಿದರು. ಇವನ ಭವಿಷ್ಯ ಉಜ್ವಲವಾಗಲಿ ಎಂದು ಹರಸಿದರು. ಪತ್ರಕರ್ತ ಎಚ್.ಎಂ.ಮಾರುತಿ ಪ್ರತಿಭಾವಂತನಿಗೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಬಾಲಕನ ತಂದೆ ಪ್ರಕಾಶ ಹೆಗಡೆ, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Leave a Comment