ಹೊನ್ನಾವರ : ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ದೇಶ ಶರವೇಗದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಜಗತ್ತಿನಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿದೆ. ಇದರಿಂದ ಖಾಯಂ ಭಾರತ ದ್ವೇಷಿಸುವ ಪಾಕಿಸ್ತಾನ ಮತ್ತು ಇತ್ತೀಚೆಗೆ ಕಾಲು ಕೆದರುತ್ತಿರುವ ಚೀನಾಕ್ಕೆ ಹೊಟ್ಟೆಉರಿ ಉಂಟಾಗಿದೆ. ಆದ್ದರಿಂದ ಭಾರತೀಯರೆಲ್ಲರೂ ಹೆಚ್ಚು ಒಗ್ಗಟ್ಟಿನಿಂದ, ಆತ್ಮವಿಶ್ವಾಸದಿಂದ ದೇಶದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಹಿರಿಯ ಆರ್ಎಸ್ಎಸ್ ಕಾರ್ಯಕರ್ತ ವಿಶ್ವನಾಥ ನಾಯಕ ಹೇಳಿದರು.
ಅವರು ಶನಿದೇವಸ್ಥಾನದ ಭೋಜನಾಲಯದಲ್ಲಿ ನಡೆದ ರಕ್ಷಾ ಬಂಧನ ಸಮಾರಂಭದಲ್ಲಿ ಮುಖ್ಯ ಉಪನ್ಯಾಸ ನೀಡಿದರು. ನಾವು ಚೈನಾ ವಸ್ತುವನ್ನು ಬಹಿಷ್ಕರಿಸಬೇಕು, ಭಯೋತ್ಪಾದಕರನ್ನು ಸದೆಬಡಿಯುತ್ತಿರುವ ಸೈನಿಕರಿಗೆ ಬೆಂಬಲ ನೀಡಬೇಕು, ಜಾತಿ,ಮತ,ಧರ್ಮ,ಅಂತಸ್ತುಗಳ ಭೇದ ಮರೆತು ಭಾರತೀಯರೆಲ್ಲಾ ನಮ್ಮ ಅಣ್ಣ ತಮ್ಮಂದಿರು ಎಂದು ದೇಶ ಭಕ್ತಿ ಪ್ರದರ್ಶಿಸಬೇಕು.
ರಕ್ಷಾ ಬಂಧನ ಕೇವಲ ಹಬ್ಬವಲ್ಲ, ಪರಸ್ಪರರ ಬೆಂಬಲ, ವಿಶ್ವಾಸದ ಕುರುಹು. ಆದ್ದರಿಂದ ಎಲ್ಲಾ ಅನಿಷ್ಠಗಳನ್ನು ಕಿತ್ತೊಗೆದು, ಒಳ್ಳೆಯ ಪ್ರಜೆಗಳಾಗಿ ಜಗತ್ತಿಗೆ ಗುರುವಾಗುವಂತಹ ದೇಶವನ್ನು ಕಟ್ಟೋಣ ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಅಶೋಕ ಮಹಾಲೆ ರಾಖಿ ಹಬ್ಬದ ಶುಭ ಕೋರಿದರು.
ಶನಿ ದೇವಾಲಯದ ವತಿಯಿಂದ ಪ್ರಸಾದ ವಿತರಿಸಲಾಯಿತು.
Leave a Comment