ಹಳಿಯಾಳ : ಕಳೆದ ಮೂರು ವರ್ಷಗಳಿಂದ ಹಳಿಯಾಳ ತಾಲೂಕು ಮತ್ತೇ ಬರಗಾಲದ ಛಾಯೆಗೆ ತುತ್ತಾಗಿದ್ದು ಹಳಿಯಾಳ ಹಾಗೂ ಜೋಯಿಡಾ ಕ್ಷೇತ್ರವನ್ನು ಬರಗಾಲ ಪೀಡಿತ ತಾಲೂಕೆಂದು ಘೊಷಿಸಬೇಕು, ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು, ದನಕರುಗಳಿಗೆ ಮೇವಿನ ಹಾಗೂ ಜನತೆಗೆ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಳಿಯಾಳ ಬಿಜೆಪಿ ಘಟಕ ಹಾಗೂ ಬಿಜೆಪಿ ರೈತ ಮೋರ್ಚಾ ಶನಿವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ ನೇತೃತ್ವದಲ್ಲಿ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಘಟಕದ ನಿಯೋಗ ಜಿಲ್ಲಾಧಿಕಾರಿಗಳ ಹೆಸರಿನಲ್ಲಿದ್ದ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು.
ಮನವಿಯಲ್ಲಿ :- ಪ್ರಸಕ್ತ ವರ್ಷವು ಮಳೆ ಕೊರತೆಯಿಂದ ಭೀಕರ ಬರಗಾಲ ಆವರಿಸಿದ್ದು ತಕ್ಷಣ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ತಕ್ಷಣ ಕಾರ್ಯಪ್ರವೃತ್ತರಾಗಿ ಬಡವರು, ರೈತರಿಗೆ, ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ, ದನಕರುಗಳಿಗೆ ಮೇವು, ನೀರಿನ ವ್ಯವಸ್ಥೆ ಹಾಗೂ ತಾಲೂಕಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು, ಗೋವಿನ ಜೋಳದ ಬೆಂಬಲ ಬೆಲೆ ಕೇಂದ್ರ ಆಗಷ್ಟ ತಿಂಗಳ ಕೊನೆಗೆ ಎಪಿಎಮ್ಸಿಯಲ್ಲಿ ಖರೀದಿ ಕೇಂದ್ರವನ್ನು ಸ್ಥಾಪಿಸಬೇಕು, ಸೆಪ್ಟಂಬರ ಮೊದಲನೇ ವಾರದಲ್ಲಿ ಗೋವಿನ ಜೋಳ ಖರೀದಿದಾರರನ್ನು ಕರೆದು ತಾಲೂಕಾಡಳಿತ ಯೋಗ್ಯ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು.
ಕಬ್ಬಿಗೆ ಬೆಲೆ ನಿಗದಿಪಡಿಸಿ ಹಾಗೂ ಕಳೆದ ವರ್ಷದ ಕಬ್ಬಿನ ಬಾಕಿ ಮೊತ್ತವನ್ನು ತಕ್ಷಣ ಪಾವತಿಸಬೇಕು. ಹಳಿಯಾಳ ಪ್ಯಾರಿ ಶುಗರ್ಸ್ ಕಂಪೆನಿಯವರು ಪ್ರಥಮ ಆದ್ಯತೆಯ ಮೇರೆಗೆ ಹಳಿಯಾಳ ತಾಲೂಕಿನ ರೈತರ 80% ಅನುಪಾತದಲ್ಲಿ ಕಟಾವು ಪರವಾನಿಗೆಯನ್ನು ನೀಡಬೇಕು, ಸ್ಥಳೀಯ ಟ್ರಾಕ್ಟರ್ ಹಾಗೂ ಟ್ರಕ್ಗಳನ್ನು ಹೊಂದಿದಂತಹ ಸಾಗಾಣಿಕೆದಾರರಿಗೆ ಆದ್ಯತೆಯನ್ನು ನೀಡಬೇಕು. ಪ್ಯಾರಿ ಶುಗರ್ಸ್ ಕಾರ್ಖಾನೆಯು ಈವರೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಕೊಟ್ಟಂತಹ ಮಾಹಿತಿಯನ್ನು ಬಹಿರಂಗಪಡಿಸಬೇಕು. ತೀವೃ ಬರಗಾಲ ಇರುವುದರಿಂದ ಮೇವು ಹಾಗೂ ಕುಡಿಯುವ ನೀರಿನ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಹಳಿಯಾಳ ಜೋಯಿಡಾ ತಾಲೂಕುಗಳನ್ನು ಬರಗಾಲ ಪಿಡಿತ ಎಂದು ಘೊಷಿಸಬೇಕು ಹಾಗೂ ಜೋಯಿಡಾ ಮತ್ತು ರಾಮನಗರ ಭಾಗಕ್ಕೆ ಸೂಪಾ ಡ್ಯಾಂ ನೀರಿನಿಂದ ಕುಡಿಯುವ ನೀರಿನ ಯೋಜನೆಯನ್ನು ರೂಪಿಸುವಂತೆ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೊರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ಎ ಶೆಟವಣ್ಣವರ, ತಾಲೂಕಾಧ್ಯಕ್ಷ ಸಾತುರಿ ಗೋಡಿಮನಿ, ಗಣಪತಿ ಕರಂಜೆಕರ, ಅನಿಲ ಮುತ್ನಾಳ, ನಾರಾಯಣ ಕೆಸರೆಕರ, ವಿಎಮ್ ಪಾಟಿಲ್, ಅಪ್ಪು ಚರಂತಿಮಠ, ರಾಘವೆಂದ್ರ ನಾಯ್ಕ, ನಾಗರಾಜ ಗೌಡಾ, ಇಲಿಯಾಸ ಬಳಗಾರ, ವಾಸು ಪೂಜಾರಿ, ಸೊನಪ್ಪಾ ಸುಣಕಾರ ಮೊದಲಾದವರು ಇದ್ದರು.
Leave a Comment