ಕಾರವಾರ:
ಬಸ್ ನಿಲ್ದಾಣದ ಮುಂಭಾಗದ ನಗರಸಭೆ ಜಾಗದಲ್ಲಿ ಸೆಂಟ್ ಮೈಕಲ್ ಶಾಲೆಯ ಆಡಳಿತ ಮಂಡಳಿಯು ಗೇಟ್ ಅಳವಡಿಸಿರುವುದಕ್ಕೆ ಟೆಂಪೋ ಚಾಲಕರು ಹಾಗೂ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೆಂಟ್ ಮೈಕಲ್ ಶಾಲೆಯ ಹಿಂಭಾಗದಲ್ಲಿ ನಗರಸಭೆಯ ಖಾಲಿ ಜಾಗವಿದ್ದು ಇದಕ್ಕೆ ಶಾಲೆಯ ಆಡಳಿತ ಮಂಡಳಿಯು ಕೆಲ ದಿನಗಳ ಹಿಂದೆ ಗೇಟ್ ಅಳವಡಿಸಿದೆ. ಇದರಿಂದ ಕಳೆದ ಹಲವು ವರ್ಷಗಳಿಂದ ಇಲ್ಲಿ ಟೆಂಪೋ ನಿಲುಗಡೆ ಮಾಡುತ್ತಿದ್ದವರಿಗೆ ಹಾಗೂ ಸುತ್ತಮುತ್ತಲಿನ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಆಡಳಿತ ಮಂಡಳಿಗೆ ಹಾಗೂ ನಗರಸಭೆಗೆ ತಿಳಿಸಲಾಗಿದೆ. ಜಾಗ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಟೆಂಪೋ ಚಾಲಕರು ಆಕ್ಷೇಪ ವ್ಯಕ್ತಪಡಿಸಿದರು.
ಶಾಲಾ ಆಡಳಿತ ಮಂಡಳಿಯು ಇದೀಗ ಮಕ್ಕಳ ಪಾಲಕರನ್ನು ಮುಂದು ಮಾಡಿ ಗೇಟ್ ತೆರವು ಮಾಡಿಸದಂತೆ ಒತ್ತಡ ಹೇರುತ್ತಿದೆ. ಶಾಲಾ ಆಡಳಿತ ಮಂಡಳಿಯು ನಗರಸಭೆ ಜಾಗವನ್ನು ಅತಿಕ್ರಮಿಸಿದ್ದು, ಸರಿಯಾದ ಕ್ರಮವಲ್ಲ. ಹೀಗಿರುವಾಗ ಪಾಲಕರನ್ನು ಮುಂದು ಮಾಡಿ ಸಮಸ್ಯೆಯನ್ನು ದೊಡ್ಡದು ಮಾಡಲು ಯತ್ನಿಸುತ್ತಿದೆ ಎಂದು ಟೆಂಪೋ ಚಾಲಕರು ದೂರಿದ್ದಾರೆ.
ಕಳೆದ ಸುಮಾರು 35 ವರ್ಷದಿಂದ ಇದೇ ಸ್ಥಳದಲ್ಲಿ ಟೆಂಪೊ ನಿಲುಗಡೆ ಮಾಡುತ್ತಿದ್ದೇವೆ. ಈವರೆಗೂ ಯಾರೊಬ್ಬರಿಗೂ ತೊಂದರೆಯಾಗಿರಲಿಲ್ಲ. ಆದರೆ ಏಕಾಏಕಿ ಶಾಲೆಯವರು ಈ ರೀತಿ ಜಾಗ ಅತಿಕ್ರಮಣ ಮಾಡಿ ಗೇಟ್ ಅಳವಡಿಸಿದ್ದು ಸರಿಯಾದ ಕ್ರಮವಲ್ಲ. ಕೂಡಲೇ ನಗರಸಭೆಯವರು ಮಧ್ಯ ಪ್ರವೇಶಿಸಿ ಸೋಮವಾರದೊಳಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ನಗರಸಭೆ ಎದುರು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಟೆಂಪೊ ಚಾಲಕರಾದ ರಾಜೇಶ ನಾಯ್ಕ, ರಾಜೇಶ ಮಾಜಾಳಿಕರ್, ವಾಸುದೇವ ಪೈ, ಸುಭಾಷ ನಾಯ್ಕ, ಜಯರಾಮ ಮೆಹತಾ, ತುಕಾರಾಮ ನಾಯ್ಕ, ಪ್ರಮೋದ ಬಾಂದೇಕರ್, ರಾಜಾ ಗೊವೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Leave a Comment