ಹೊನ್ನಾವರ:
ರಾಷ್ಟ್ರೀಯ ಸೇವಾ ಯೋಜನೆ 15 ದಿನಗಳ ಕಾಲ ಹಮ್ಮಿಕೊಂಡಿರುವ “ಸ್ವಚ್ಛತಾ ಪಕ್ವಾರ’ಆಂದೋಲನದ ಅಂಗವಾಗಿ ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಸೋಮವಾರ ಪಟ್ಟಣದಲ್ಲಿ ಸ್ವಚ್ಛತೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳು ನಡೆದವು.
ಪ್ರಭಾತನಗರದ 3 ವಾರ್ಡಗಳಲ್ಲಿನ ಮನೆ ಮನೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಹೊರಡಿಸಿರುವ ಕರಪತ್ರವನ್ನು ಹಂಚಿದರು.
ನಂತರ ಪಟ್ಟಣದಲ್ಲಿ ನೂರಾರು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.ಕಾಲೇಜಿನಿಂದ ಆರಂಭಗೊಂಡ ಮೆರವಣಿಗೆ ಬಾಜಾರ್ ಮೂಲಕ ಸಾಗಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಕೊನೆಗೊಂಡಿತು.ಪರಿಸರ,ಜಲಸಂರಕ್ಷಣೆ,ಸ್ವಚ್ಛತೆ,ಆರೋಗ್ಯ ಮೊದಲಾದವುಗಳಿಗೆ ಸಂಬಂಧಿಸಿದ ಘೋಷಣೆಗಳನ್ನು ಕೂಗುತ್ತ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರೊ.ಸುರೇಶ ಎಸ್.,ಪ್ರಾಧ್ಯಾಪಕ ಜಿ.ಎಸ್.ಹೆಗಡೆ ಲಯನ್ಸ್ ಕ್ಲಬ್ನ ಡಿ.ಡಿ.ಮಡಿವಾಳ,ಸುರೇಶ ಶೇಟ್,ಎನ್.ಜಿ.ಭಟ್ಟ,ಶೇಖರ ನಾಯ್ಕ,ರಾಜೇಶ ಸಾಳೆಹಿತ್ತಲ್ ಭಾಗವಹಿಸಿದರು.ಸ್ಥಳೀಯ ಮೆರವಣಿಗೆಗೆ ಪೊಲೀಸರು ಅಗತ್ಯ ಭದ್ರತೆ ಒದಗಿಸಿದರು.
Leave a Comment