ಹೊನ್ನಾವರ
`ಹೊನ್ನಾವರ ಪ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪದ ದೂರಿನ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಮೂವರ ಸದಸ್ಯತ್ವ ಊರ್ಜಿತಗೊಳಿಸಿ ಆದೇಶ ಹೊರಡಿಸಿರುವುದು ಸತ್ಯಕ್ಕೆ ಸಂದ ಜಯವಾಗಿದೆ’ ಎಂದು ಪ.ಪಂ ಅಧ್ಯಕ್ಷೆ ಜೈನಾಬಿ ಸಾಬ್ ಹೇಳಿದರು.
ನಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ನಾವು ಯಾವುದೇ ಪಕ್ಷದ ಚುನಾವಣಾ ವಿಪ್ ಉಲ್ಲಂಘನೆ ಮಾಡಿಲ್ಲ. ಆದರೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಹಾಗೂ ಸದಸ್ಯರಾದ ರಾಜಶ್ರೀ ಬಾಲಚಂದ್ರ ನಾಯ್ಕ ಮತ್ತು ಜಮಿಲಾ ಶೇಖ್ ಇವರು ಪಕ್ಷದ ವಿಪ್ ಉಲ್ಲಂಘಿಸಿರುವುದಾಗಿ ಆರೋಪಿಸಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ನಾಲ್ಕು ಸದಸ್ಯರಾದ ಜೈನಾಬಿ ಸಾಬ್, ಶರಾವತಿ ಮೇಸ್ತ, ಉದಯ ಮರ್ತು ನಾಯ್ಕ, ಸುರೇಶ ಮೇಸ್ತ ಇವರನ್ನು ಅನರ್ಹಗೊಳಿಸಲು ದೂರು ನೀಡಿದ್ದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಕರ್ನಾಟಕ ಸ್ಥಳೀಯ ಸಂಸ್ಥೆಗಳ ಕಾಯ್ದೆ 1987ರ ಸೆಕ್ಷನ್ 1 (ಬಿ) ಅನ್ವಯ ವಿಚಾರಣೆ ನಡೆಸಿದ್ದು, ವಿಪ್ ಉಲ್ಲಂಘಿಸಿದ್ದಾರೆಂದು ಸುರೇಶ ಮೇಸ್ತ ಅವರನ್ನು ಅನರ್ಹಗೊಳಿಸಿ ಆದೇಶ ಹೊರಬಂದಿದೆ. ಇದು ನಮಗೆ ಬೇಸರ ತಂದಿದೆ. ಅವರ ಸಹಿ ಸಾಕ್ಷಿಯಾಗಿರುವುದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. ಆದರೆ ಅದು ನಕಲಿ ಸಹಿ ಎಂದು ಸುರೇಶ ಮೇಸ್ತ ನಮಗೆ ತಿಳಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ಕೈಗೆತ್ತುಕೊಳ್ಳಲಾಗುವುದು. ಹೋರಾಟದ ಮೂಲಕ ಅವರ ಸದಸ್ಯತ್ವವನ್ನು ಮರುಪಡೆಯುವ ವಿಶ್ವಾಸ ನಮಗಿದೆ ಎಂದರು.
ಉಳಿದ ಮೂವರು ಸದಸ್ಯರ ವಿರುದ್ಧ ಸಮರ್ಪಕವಾದ ಸಾಕ್ಷಿ ಇಲ್ಲದ ಕಾರಣ ಸದಸ್ಯತ್ವ ಅನರ್ಹತೆಯನ್ನು ವಜಾಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸಹಕರಿಸಿದ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕಿ ಶಾರದಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಪಕ್ಷಾತೀತವಾಗಿ ನಮ್ಮನ್ನು ಬೆಂಬಲಿಸಿದ ಪ.ಪಂ ಸದಸ್ಯರುಗಳಿಗೆ ಪಕ್ಷದ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹೊನ್ನಾವರ ಪ.ಪಂ ಗೆ ವಿಶೇಷ ಅನುದಾನವನ್ನು ಶಾಸಕಿ ಶಾರದಾ ಶೆಟ್ಟಿ ಅವರು 5 ಕೋಟಿ ರೂ. ಹಾಗೂ ಉಸ್ತುವಾರಿ ಸಚಿವರು ಅಲ್ಪಸಂಖ್ಯಾತ ನಿಗಮದಿಂದ 1.16 ಕೋಟಿ ರೂ. ಹಣವನ್ನು ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ. ಈಗಾಗಲೇ ಪ.ಪಂ ಗೆ ಅಲ್ಪಸಂಖ್ಯಾತರ ನಿಗಮದಿಂದ ಪತ್ರವೂ ಬಂದಿದೆ ಎಂದರು.
ಪ.ಪಂ ಸದಸ್ಯ ಉದಯ ಮರ್ತು ನಾಯ್ಕ ಮಾತನಾಡಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆಯಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಅವರು ಬಿಳಿಯ ಹಾಳೆಯ ಮೇಲೆ ಸಹಿ ಹಾಕಲು ಒತ್ತಡ ತಂದಿದ್ದರು. ಆದರೆ ನಾನು ಆ ಒತ್ತಡಕ್ಕೆ ಮಣಿಯಲಿಲ್ಲ. ಬಿಳಿಯ ಹಾಳೆಯ ಮೇಲೆ ಸುರೇಶ ಮೇಸ್ತ ಸಹಿ ಹಾಕಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಪ.ಪಂ ಸದಸ್ಯರಾದ ಸಿ.ಜಿ.ನಾಯ್ಕ, ಎ.ಜಿ.ನಾಯ್ಕ, ಮಂಜುನಾಥ ಖಾರ್ವಿ ಇತರರು ಇದ್ದರು.
Leave a Comment