ಹೊನ್ನಾವರ :-
ಇಂದು ದೇಶದಲ್ಲಿ ಯಾವುದೇ ವ್ಯವಸ್ಥೆಯ ಪ್ರಯೋಜನ ಪಡೆಯಬೇಕಾದರೆ ಆಧಾರ ಕಾರ್ಡ್ ಅವಶ್ಯವೆಂಬುದು ಸರ್ಕಾರದ ಆದೇಶವಾಗಿದೆ. ಅಂದರೆ “ಸರ್ವಂ ಆಧಾರಮಯಂ” ಎನ್ನುವಂತಾಗಿದೆ. ಆದರೆ ಕಳೆದ 5 ವರ್ಷಗಳಿಂದ ಆಧಾರ ಕಾರ್ಡುಗಳಿಗಾಗಿ ಅಲೆಯುತ್ತಿರುವ ಬಡಕುಟುಂಬಗಳು, ಅಸಹಾಯಕರು, ಸಾವಿರ-ಸಾವಿರ ಸಂಖ್ಯೆಯಲ್ಲಿ ಇದ್ದಾರೆ. 2013 ರಿಂದ ಇಲ್ಲಿ ತನಕ ನಾಲ್ಕು ಬಾರಿ ಆಧಾರಕಾರ್ಡ್ಗಾಗಿ ಬಯೋ ಮೆಟ್ರಿಕ್ ಮಾಡಿಸಿ ನೂರಾರು ಸಲ ಕಛೇರಿಗಳಿಗೆ ಅಲೆದಾಡಿದರೂ ಸಹ ಯಾವುದೇ ಪ್ರಯೋಜನವಾಗದಿರುವುದು ಅರಣ್ಯರೋಧನದಂತಾಗಿದೆ.
ಹೊನ್ನಾವರ ತಾಲೂಕ ಅನಿಲಗೋಡ ಗ್ರಾಮದ ಮಕ್ಕಿಗದ್ದೆ ನಿವಾಸಿ ಕಾಲೇಜು ವಿದ್ಯಾರ್ಥಿನಿ ಪೂಜಾ ಬಾಲಕೃಷ್ಣ ನಾಯ್ಕ ಇವಳನ್ನು ಉದಾಹರಣೆಗಾಗಿ ನೀಡಲಾಗಿದೆ. ಕಾರಣ ಬಯೋ ಮೆಟ್ರಿಕ್ ತಯಾರಿಸಲು ಹಳ್ಳಿಗಳಿಗೆ ಬಂದ Enrolment Operator ಗಳಿಂದ ಉಂಟಾದ ತಾಂತ್ರಿಕ ಲೋಪದೋಷಗಳೇ ಕಾರಣ. ಹೊರತು ಜನಸಾಮಾನ್ಯರು ಕೇಳಿದ ಎಲ್ಲಾ ದಾಖಲೆ ನೀಡಿ ಸಹಕರಿಸಿದ್ದಾರೆ. ಈ Enrolment Operator ಗಳು ಮಾಡಿದ ತಪ್ಪಿನಿಂದಾಗಿ ಜಿಲ್ಲೆಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಆಧಾರಕಾರ್ಡ್ ಪಡೆಯಲಾಗದೇ ಹತ್ತು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅದರಲ್ಲಿಯೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಇಲ್ಲದೇ ತೀರಾ ಸಮಸ್ಯೆಗೆ ಒಳಗಾಗಿದ್ದಾರೆ. ಬಡಕುಟುಂಬದ ವಿದ್ಯಾರ್ಥಿಗಳು ಒಂದೆಡೆ ಬಿ.ಪಿ.ಎಲ್.ಕಾರ್ಡಿನಲ್ಲಿ ಹೆಸರನ್ನು ಕಳೆದುಕೊಂಡು ಪಡಿತರ ವ್ಯವಸ್ಥೆ ಸಿಗದಂತಾಗಿದೆ. ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯಲಾಗದೇ, ತೆರೆದರೆ ಆಧಾರ್ ಲಿಂಕ್ ಮಾಡಲಾಗದೇ ವಿದ್ಯಾರ್ಥಿ ವೇತನ ಇನ್ನಿತರ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಬಡಕುಟುಂಬದ ವಿದ್ಯಾರ್ಥಿಗಳಿಗಾದ ಅನ್ಯಾಯ ಹಾನಿಯನ್ನು ತುಂಬಿಸಿಕೊಡುವವರ್ಯಾರು ಎನ್ನುವ ಪ್ರಶ್ನೆಯಾಗಿದೆ. ಈ ಕುರಿತು ಉತ್ತರಕನ್ನಡ ಜಿಲ್ಲಾ ದಿ|| ಡಿ.ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ ಇವರು ಕಳೆದ 6 ತಿಂಗಳ ಹಿಂದೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಈ ತನಕ ಆದಂತ ಲೋಪ ದೋಷ ಸರಿಪಡಿಸುವಲ್ಲಿ ತಂತ್ರಜ್ಞಾನದಲ್ಲಿ ಸುಧಾರಣೆಯಾಗಿದ್ದು ಕಂಡುಬಂದಿಲ್ಲ. ಆಧಾರ್ ಕಾರ್ಡ್ ತಯಾರಿಸುವಲ್ಲಿ ಟೆಂಡರ್ ಪಡೆದ ಸಂಸ್ಥೆ ಆದ ಲೋಪ ದೋಷಗಳನ್ನು ಸರಿಪಡಿಸುವ ಇಚ್ಛಾಶಕ್ತಿ ಹೊಂದಿಲ್ಲವೋ ಅಥವಾ ಸರ್ಕಾರ ಸೂಕ್ತ ಮಾರ್ಗದರ್ಶನ, ಆದೇಶ ನೀಡಿಲ್ಲವೋ ತಿಳಿಯಲಾಗಿದೆ ಆದ ಕಾರಣ ಮತ್ತೊಮ್ಮೆ ಸರ್ಕಾರವನ್ನು ಆಗ್ರಹಿಸಿ ಮಾನ್ಯ ರಾಜ್ಯಪಾಲರಿಗೂ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೂ ಮತ್ತು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿಕೊಳ್ಳಲಾಗಿದೆಯೆಂದು ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ದೀಪಕ್ ಲೋಬೋ ಕೋಡಾಣಿ, ಮಂಜುನಾಥ ಹಳ್ಳೇರ ಹಾಡಗೇರಿ, ದೇವೇಂದ್ರ ನಾಯ್ಕ ಹುಂಜನಮಕ್ಕಿ ಇವರು ಪತ್ರಿಕೆಗೆ ತಿಳಿಸಿದ್ದಾರೆ.
Leave a Comment