ಕಾರವಾರ:
ಕರಾವಳಿಯಲ್ಲಿ ಮಳೆ ರಭಸಗೊಂಡಿದೆ. ಐದಾರು ದಿನಗಳಿಂದ ಗಾಳಿ ಮಳೆ ಜೋರಾಗಿದೆ. ಇದರಿಂದ ಹೊರ ರಾಜ್ಯಗಳಿಂದ ಮೀನುಗಾರಿಕೆಗೆ ತೆರಳಿದ್ದ ನೂರಾರು ಬೋಟ್ಗಳು ಮುಂದೆ ಸಾಗಲಾಗದೆ ಬೈತಖೋಲ ಬಂದರಿನಲ್ಲಿ ಲಂಗರು ಹಾಕಿದೆ.
ದಕ್ಷಿಣ ಗುಜರಾತ್ ಭಾಗ ಹಾಗೂ ಬಂಗಾಳ ಕೊಲ್ಲಿಗಳಲ್ಲಿ ಉಂಟಾಗಿರುವ ಅಧಿಕ ವಾಯುಭಾರ ಕುಸಿತದಿಂದಾಗಿ ಮಧ್ಯ ಮಹಾರಾಷ್ಟ್ರ, ಗೋವಾ, ಕರ್ನಾಟಕದ ಕರಾವಳಿ ಭಾಗ, ಕೇರಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ಮೀನುಗಾರಿಕೆಗೆ ತೆರಳಿದ್ದ ಗೋವಾ, ಉಡುಪಿ, ಮಂಗಳೂರು, ಸ್ಥಳೀಯ ಮೀನುಗಾರಿಕಾ ಬೋಟ್ಗಳು ಇಲ್ಲಿನ ಬೈತಖೋಲ ಬಂದರಿನಲ್ಲಿ ಲಂಗರು ಹಾಕಿವೆ. ಅಲ್ಲದೆ ಮಳೆ ಇನ್ನು ಮೂರ್ನಾಲ್ಕು ದಿನ ಮುಂದುವರಿಯುವ ಸೂಚನೆ ಇದ್ದು, ಸಮುದ್ರದಲ್ಲಿನ ತೂಫಾನ್ ತಿಳಿಯಾದ ಬಳಿಕವೇ ಬೋಟ್ಗಳು ತೆರಳಲಿವೆ.
ಸದ್ಯ ಬೈತಖೋಲ್ ಬಂದರಲಿನಲ್ಲಿ ಇದೀಗ ಸ್ಥಳಾವಕಾಶದ ಕೊರತೆ ಎದುರಾಗಿದೆ. ಸಮುದ್ರದಲ್ಲಿ ಗಾಳಿ ಜೋರಾಗಿರುವುದರಿಂದ ಸ್ಥಳೀಯ ಬೋಟ್ಗಳಿಗೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಿದ್ದು, ಕೆಲ ಬೋಟ್ಗಳು ಹತ್ತಿರದಲ್ಲಿಯೇ ಮೀನುಗಾರಿಕೆ ನಡೆಸುತ್ತಿವೆ. ಆದರೆ ಈಗಾಗಲೇ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಹೊರ ರಾಜ್ಯ ಹಾಗೂ ಜಿಲ್ಲೆಗಳ ಬೋಟ್ಗಳು ತೂಫಾನ್ ಎದ್ದ ಕಾರಣ ದಡಕ್ಕೆ ಆಗಮಿಸಿದ್ದು, ಇದೀಗ ಬೈತಖೋಲ್ ಬಂದರಿನಲ್ಲಿ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಎದುರಾಗಿದೆ. ಅಲ್ಲದೆ ವಾಣಿಜ್ಯ ಬಂದರಿನ ಹಡಗುಗಳು ಆಗಾಗ ಬಂದು ಹೋಗುವುದರಿಂದ ಲಂಗರು ಹಾಕಿದ ಬೋಟ್ಗಳು ತೆಗೆದು ಹಡಗುಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಚಂಡಮಾರುತ ಭೀತಿಯಿಂದ ಮೀನುಗಾರಿಕೆ ಸ್ಥಗಿತಗೊಂಡು ಬೋಟ್ಗಳನ್ನು ಬಂದರಿನಲ್ಲಿ ಲಂಗರು ಹಾಕಲಾಗಿದ್ದು, ಇದರಿಂದ ಮೀನುಗಾರರು ಉದ್ಯೋಗವಿಲ್ಲದೆ ನಷ್ಟ ಅನುಭವಿಸುವಂತಾಗಿದೆ.
ಕಳೆದ ಎರಡ್ಮೂರು ದಿನಗಳಿಂದ ಮಾರುಕಟ್ಟೆಗಳಲ್ಲಿ ಮೀನು ಲಭ್ಯವಾಗದೆ ಮೀನಿನ ದರ ಗಗನಕ್ಕೆರಿದೆ. ಕಳೆದೊಂದು ತಿಂಗಳ ಹಿಂದೆ ಪ್ರಾರಂಭವಾಗಿದ್ದ ಮೀನುಗಾರಿಕೆಯಿಂದ ಖುಷಿಯಾಗಿದ್ದ ಮೀನುಗಾರರ ಕನಸು ಹುಸಿಯಾಗಿದ್ದು, ಇದೀಗ ಕೆಲಸವಿಲ್ಲದೆ ಕಾಲಾಹರಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಮುದ್ರದಗಳಲ್ಲಿ ಗಾಳಿ ಕೂಡ ವಿಪರಿತವಾಗಿ ಬೀಸತೊಡಗಿದೆ. ಇದರಿಂದ ಇಲ್ಲಿನ ಬೈತಖೋಲ್ ಬಂದರಿನಲ್ಲಿ ಸಾಲಗಟ್ಟಿ ನಿಂತಿರುವ ಬೋಟ್ಗಳು ಒಂದಕ್ಕೊಂದು ತಿಕ್ಕಾಟ ನಡೆಸಿ ಬೋಟ್ಗಳಿಗೆ ಹಾನಿಯಾಗುವ ಆತಂಕ ಎದುರಾಗಿದೆ.
Leave a Comment