ಹಳಿಯಾಳ: ನಾನು ಶಾಸಕನಾಗಿ ಈ ಕ್ಷೇತ್ರಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಬಹಳಷ್ಟಿತ್ತು ಇಂದು ಕಾಂಗ್ರೇಸ್ ಸರ್ಕಾರದ ಆಡಳಿತದ ಅವಧಿಯಲ್ಲಿ ಗ್ರಾಮೀಣ ಭಾಗಗಳಿಗೆ ರಸ್ತೆ, ವಿದ್ಯುತ್ ಸಂಪರ್ಕ, ಶಾಲೆ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯವನ್ನು ಪೂರೈಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ರವಿವಾರ ತಾಲೂಕಿನ ಅಗಸಲಕಟ್ಟಾ ಬಾಂದಾರಿಗೆ ಬಾಗಿನ ಅರ್ಪಿಸಿ ನಂತರ 121.40 ಲಕ್ಷ ವೆಚ್ಚದ ಹಲಸಿ ಗ್ರಾಮದ ಹತ್ತಿರ ನಾಲಾ ಬಾಂದಾರ ನಿರ್ಮಾಣ ಕಾಮಗಾರಿಗೆ ಮತ್ತು 50 ಲಕ್ಷ ವೆಚ್ಚದ ಕ್ಯಾತನಗೇರಾ ಹತ್ತಿರ ನಾಲಾ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೇರವೆರಿಸಿ ಮಾತನಾಡಿದರು.
ರೈತರು ಅನ್ನದಾತರು ಅವರಿಗೆ ಎಲ್ಲಾ ರೀತಿಯ ಸೌಲಭ್ಯ ಸಿಗುವಂತೆ ಕಾಂಗ್ರೇಸ್ ಸರ್ಕಾರ ಶ್ರಮಿಸುತ್ತಿದ್ದು ಕೃಷಿಗಾಗಿ ಆಯಾ ಗ್ರಾಮಗಳಲ್ಲಿ ಬಾಂದಾರಗಳನ್ನು ನಿರ್ಮಾಣ ಮಾಡಿ ನೀರಾವರಿ ಸೌಲಭ್ಯಕ್ಕಾಗಿ ನೂರಾರು ಕೋಟಿ ಹಣವನ್ನು ಮಂಜೂರಿ ಮಾಡಿದೆ ಎಂದರು. ತಾಲೂಕಿನಲ್ಲಿ 105 ಬಾಂದಾರಗಳಿದ್ದು ರಾಜ್ಯದ ಬೇರ್ಯಾವ ತಾಲೂಕಿನಲ್ಲಿ ಇಷ್ಟೊಂದು ಬಾಂದಾರಗಳು ಇಲ್ಲ ಎಂದರು. ಸರ್ಕಾರ ಅಭಿವೃದ್ದಿಗಾಗಿ ನೂರಾರು ಯೋಜನೆಗಳ ಮೂಲಕ ಕೋಟಿಗಟ್ಟಲೆ ಅನುದಾನ ಬಿಡುಗಡೆಮಾಡಿದ್ದು ಜನರು ಪಕ್ಷಾತೀತವಾಗಿ ಅವುಗಳು ಕಳಪೆಮಟ್ಟದ ಕಾಮಗಾರಿ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಕರೆ ನೀಡಿದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಮಾತನಾಡಿ ಅಗಸಲಕಟ್ಟಾ ಬಾಂದಾರನಿಂದ ಆ ಭಾಗದ ರೈತರ 40 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಲಾಗಿದೆ ಅದರಂತೆ ಹಲಸಿ ಗ್ರಾಮದ ಬಾಂದಾರ ನಿರ್ಮಾಣದಿಂದ 80 ಎಕರೆ ಹೊಲಕ್ಕೆ ಹಾಗೂ ಕ್ಯಾತನಗೇರಾ ಗ್ರಾಮದ ಬಾಂದಾರ ನಿರ್ಮಾಣದಿಂದ 40ಎಕರೆ ಹೊಲಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ ಎಂದ ಅವರು ಸಚಿವರ ಪ್ರಯತ್ನದಿಂದ ಗ್ರಾಮೀಣ ಭಾಗಗಳಲ್ಲಿ ಆಗಿರುವ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯೆ ಲಕ್ಷ್ಮೀ ಸುಭಾಷ ಕೊರ್ವೆಕರ, ತಪಾಂ ಅಧ್ಯಕ್ಷೆ ರೀಟಾ ಸಿದ್ದಿ, ಗ್ರಾಪಂ ಅಧ್ಯಕ್ಷೆ ಶಾಂತಾಬಾಯಿ ಕಾಗೆ, ಉಪಾಧ್ಯಕ್ಷ ದಿಲಶಾದ ಮಕ್ತೆಸರ, ಸದಸ್ಯ ಚಂದ್ರುಬಾಯಿ ಬಡಿಗೇರ, ಪ್ರಮುಖರಾದ ಸಂಜಯ ಪಾಟೀಲ್, ಅಂತೋನ ಡಿಗ್ಗೇಕರ, ರಮೇಶ ಪವಾರ, ತಹಶೀಲ್ದಾರ್ ವಿದ್ಯಾಧರ ಗುಳಗುಳೆ, ಡಿಡಿಪಿಐ ಪ್ರಸನ್ನಕುಮಾರ, ತಾಪಂ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಕೃಷಿ ಅಧಿಕಾರಿ ನಾಗೇಶ ನಾಯ್ಕ, ಪಿಡಬ್ಲೂಡಿ ಎಇಇ ಆರ್.ಎಚ್..ಕುಲಕರ್ಣಿ, ಬಿಇಓ ಸಮೀರ ಮುಲ್ಲಾ ಮುಂತಾದವರು ಇದ್ದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜೀನಿಯರ್ ಎಚ್.ವಿಶ್ವನಾಥ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಲಿಂಗ ಮಾಳ್ವಿ ನಿರೂಪಿಸಿ ವಂದಿಸಿದರು.
Leave a Comment