ಹೊನ್ನಾವರ
ತಾಲೂಕಿನ ಹಳದೀಪುರದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ತಾರೀಬಾಗಿಲಕ್ಕೆ ಹೋಗುವ ರಸ್ತೆ ಕೆಟ್ಟುಹೋಗಿ ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದ್ದು ತಕ್ಷಣ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ಬಿಜೆಪಿ ಘಟಕದ ವತಿಯಿಂದ ಕಾರ್ಯಕರ್ತರು, ಮುಖಂಡರು À ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ದಿನಕರ ಶೆಟ್ಟಿ ಮಾತನಾಡಿ ಹಳದೀಪುರದ ತಾರಿಬಾಗಿಲ ವ್ಯಾಪ್ತಿಯಲ್ಲಿ ಸಾವಿರಾರು ಕುಟುಂಬಗಳ ವಾಸ್ತವ್ಯವಿದ್ದು ರಾಷ್ಟ್ರೀಯ ಹೆದ್ದಾರಿಯಿಂದ ತಾರೀಬಾಗಿಲ ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ರಿಕ್ಷಾದಲ್ಲಿ ಗರ್ಭಿಣಿ ಸ್ತ್ರೀಯರನ್ನು ಕರೆದುಕೊಂಡು ಹೋಗುವುದು ಚಾಲಕರಿಗೆ ಕಷ್ಟವಾಗಿದೆ. ಶಾಸಕಿ ಶಾರದಾ ಶೆಟ್ಟಿ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರವಾಸೋದ್ಯಮ ಇಲಾಖೆಯ ಅನುದಾನದಡಿಯಲ್ಲಿ ರಸ್ತೆ ಕಾಮಗಾರಿ ಮಾಡಬಹುದಿತ್ತು. ಸಚಿವ ದೇಶಪಾಂಡೆ ಹಾಗೂ ಶಾಸಕಿ ಶಾರದಾ ಶೆಟ್ಟಿ ನಡುವಿನ ಜಟಾಪಟಿಯಿಂದ ಪ್ರವಾಸೋದ್ಯಮದಡಿಯಲ್ಲೂ ರಸ್ತೆ ದುರಿಸ್ತಿ ತೆಗೆದುಕೊಂಡಿಲ್ಲ. ಇನ್ನು ಒಂದು ತಿಂಗಳುಗಳೊಳಗೆ ಟೆಂಡರ್ ಕರೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು,
2008-09 ರಲ್ಲಿ ತಾನು ಶಾಸಕರಾಗಿದ್ದ ಸಂದರ್ಭದಲ್ಲಿ ಸಂಸದರಾಗಿದ್ದ ಅನಂತಕುಮಾರ ಹೆಗಡೆ ಅವರು ಅನುದಾನ ನೀಡಿದ್ದರು. ಆಗ ರಸ್ತೆಯನ್ನು ಒಳ್ಳೆಯ ರೀತಿಯಲ್ಲಿ ಮಾಡಲಾಗಿತ್ತು. ಎಂದು ತಿಳಿಸಿದರು.
ಈ ಭಾಗದಲ್ಲಿ ಉಪ್ಪು ನೀರು ನುಗ್ಗುತ್ತಿದ್ದು ರೈತರಿಗೆ ಬೆಳೆ ಬೆಳೆಯುವುದು ಕಷ್ಟವಾಗಿದೆ. ಕುಡಿಯುವ ನೀರು ಸಹ ತೊಂದರೆಯಾಗಿದೆ. ಉಪ್ಪಿನ ನೀರಿನ ತಡಗೋಡೆ ನಿರ್ಮಿಸಿಕೊಡದೇ ಶಾಸಕಿ ಶಾರದಾ ಶೆಟ್ಟಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಮಾಜಿ ತಾ.ಪಂ. ಸದಸ್ಯ ಗಣೇಶ ಪೈ, ಎಪಿಎಂಸಿ ನಿರ್ದೇಶಕ ಪರಮೇಶ್ವರ ನಾಯ್ಕ, ಗ್ರಾ.ಪಂ. ಸದಸ್ಯ ರತ್ನಾಕರ ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.
ತಹಸೀಲ್ದಾರರ ಪರವಾಗಿ ಕಂದಾಯ ಇಲಾಖೆಯ ಅಕಾರಿ ಸತೀಶ ಗೌಡ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
Leave a Comment