ಕಾರವಾರ: ಸಾಕ್ಷಾಧಾರದ ಕೊರತೆ ಹಿನ್ನಲೆಯಲ್ಲಿ ಬೇಲೆಕೇರಿ ಅಕ್ರಮ ಅದಿರು ನಾಪತ್ತೆ ಪ್ರಕರಣವನ್ನು ಕೈ ಬಿಡಲು ಸಿಬಿಐ ನಿರ್ಧರಿಸಿದ್ದು, ಪ್ರಮುಖ ಸಾಕ್ಷಿಯಾಗಬೇಕಿದ್ದ ದಾಸ್ತಾನಿರಿಸಿದ ಅದಿರು ಗಾಳಿ ಮಳೆಗೆ ನಲುಗಿದೆ.
ಬೇಲೇಕೇರಿ ಹಾಗೂ ಕಾರವಾರ ಬಂದರುಗಳಲ್ಲಿ ಲೋಕಾಯುಕ್ತರು ಜಪ್ತಿ ಮಾಡಿದ ಕಬ್ಬಿಣದ ಅದಿರನ್ನು ಹರಾಜಿನ ಮೂಲಕ ವಿಲೇವಾರಿ ಮಾಡಲು ಈ ಹಿಂದೆಯೇ ಅರಣ್ಯ ಇಲಾಖೆ ಮೇಲೆ ಬಂದರು ಇಲಾಖೆ ಒತ್ತಡ ತಂದಿತ್ತು. ಆದರೆ, ಹರಾಜು ಪ್ರಕ್ರಿಯೆಗೆ ಹಲವು ಕಾನೂನಿನ ತೊಡಕುಗಳು ಎದುರಾಗಿದ್ದವು. ಸದ್ಯದ ಪರಿಸ್ಥಿತಿಯಲ್ಲಿ ಸಾಕ್ಷಾಧಾರದ ಕೊರತೆ ಹಿನ್ನಲೆ ಈಡಿ ಪ್ರಕರಣವನ್ನು ಕೈ ಬಿಡಲು ನಿರ್ಧರಿಸಿದ್ದು, ಪ್ರಭಲ ಸೂಕ್ತ ರಕ್ಷಣೆಯಿಲ್ಲದೇ ಸಾಕ್ಷಿ ನಾಶವಾಗುತ್ತಿದೆ. ಲೋಕಾಯುಕ್ತರು 2010ರ ಮಾರ್ಚ್ನಲ್ಲಿ ವಶಪಡಿಸಿಕೊಂಡಿದ್ದ ಈ ಅದಿರನ್ನು ತನಿಖೆಯ ನಂತರ ಉಸ್ತುವಾರಿಗಾಗಿ ಅರಣ್ಯ ಇಲಾಖೆಗೆ ವಹಿಸಿಕೊಡಲಾಗಿತ್ತು. ಕಾರವಾರ ಬಂದರಿನಲ್ಲಿ ಸುಮಾರು 80ಸಾವಿರ ಟನ್ ಅದಿರು ಹಾಗೂ ಬೇಲೇಕೇರಿ ಬಂದರಿನಲ್ಲಿ ಸುಮಾರು 20ಲಕ್ಷ ಟನ್ ಕಬ್ಬಿಣದ ಅದಿರನ್ನು ಕಳೆದ ಏಳುವರೆ ವರ್ಷಗಳಿಂದ ಅರಣ್ಯ ಇಲಾಖೆ ನೋಡಿಕೊಳ್ಳುತ್ತಿತ್ತು. ಪ್ರತಿ ಮಳೆಗಾಲದಲ್ಲಿ ಕಬ್ಬಣದ ಅದಿರು ಸಮುದ್ರಕ್ಕೆ ಹರಿದು ಹೋಗದಂತೆ ಹಾಗೂ ಅದನ್ನು ರಕ್ಷಣೆ ಮಾಡಲು ಅರಣ್ಯ ಹಾಗೂ ಬಂದರು ಇಲಾಖೆಯವರು ಈಗಾಗಲೇ ಲಕ್ಷಾಂತರ ರೂ. ವೆಚ್ಚವನ್ನು ಮಾಡಿದ್ದು ವರ್ಷದಿಂದ ವರ್ಷಕ್ಕೆ ಇದರ ವೆಚ್ಚ ಹೆಚ್ಚಾದರೂ ಅದಿರು ಸಮುದ್ರ ಸೇರುವದು ತಪ್ಪಿರಲಿಲ್ಲ.
ಈ ಅದಿರು ಬಂದರು ಪ್ರದೇಶದ ಬಹುದೊಡ್ಡ ಸ್ಥಳವನ್ನು ಅತಿಕ್ರಮಿಸಿರುವುದರಿಂದ ಬಂದರಿನ ವ್ಯವಹಾರಕ್ಕೂ ತೊಂದರೆಯಾಗುತ್ತಿದೆ ಎಂದು ಬಂದರು ಇಲಾಖೆ ವಾದಿಸಿತ್ತು. ಈಗ ದಾಸ್ತಾನು ಇರುವ ಅದಿರು ಸುಮಾರು 40 ವಿವಿಧ ಕಂಪೆನಿಗಳಿಗೆ ಸೇರಿದ್ದು ಅಕ್ರಮ ಅದಿರು ವಹಿವಾಟಿಗಾಗಿ ಈ ಕಂಪೆನಿಗಳ ಮೇಲೆ ಈಗಾಗಲೇ ಆರೋಪ ಪಟ್ಟಿಯನ್ನು ವಿವಿಧ ತನಿಖಾ ಸಂಸ್ಥೆಗಳು ನ್ಯಾಯಾಲಯದಲ್ಲಿ ಸಲ್ಲಿಸಿದ್ದವು. 50 ಸಾವಿರ ಟನ್ಗಿಂಗ ಹೆಚ್ಚಿನ ಅದಿರು ರಫ್ತು ಮಾಡಿದ ಕಂಪೆನಿಗಳ ವಿರುದ್ಧ ದೂರು ದಾಖಲಾಗಿದ್ದವು. ಈ ಮಧ್ಯೆ ಬೇಲೇಕೇರಿ ಬಂದರಿನಲ್ಲಿ ರಫ್ತು ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿದ್ದು ಇಲ್ಲಿನ ದಾಸ್ತಾನು ಇರುವ ಅದಿರಿನ ರಕ್ಷಣೆಯ ಕಾರ್ಯ ಸಂಪೂರ್ಣವಾಗಿ ಅರಣ್ಯ ಇಲಾಖೆಯ ಮೇಲಿದೆ.
ಎರಡು ವರ್ಷಗಳ ಹಿಂದೆ ಬಂದರು ಇಲಾಖೆ, ಅರಣ್ಯ ಇಲಾಖೆಗೆ ಪತ್ರ ಬರೆದು ಈ ಅದಿರನ್ನು ವಿಲೇವಾರಿ ಮಾಡಿ ಬೇಲೇಕೇರಿ ಬಂದರನ್ನು ತೆರವುಗೊಳಿಸುವಂತೆ ತಿಳಿಸಿತ್ತು. ಆದರೆ ಈ ಅದಿರನ್ನು ದಾಸ್ತಾನು ಮಾಡಿದ್ದ ಕಂಪೆನಿಗಳ ವಿರುದ್ಧ ಬೆಂಗಳೂರಿನ ಸಿಬಿಐ ನ್ಯಾಯಾಲಯದಲ್ಲಿ ಮೊಕದ್ದಮೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಅದಿರಿ ವಿಲೇವಾರಿಗೆ ಅನುಮತಿ ಕೋರಿ ಸಿಬಿಐ ನ್ಯಾಯಾಲಯದಲ್ಲಿ ಅರಣ್ಯ ಇಲಾಖೆ ಮೂರು ವರ್ಷದ ಹಿಂದೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡುವಂತೆ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿತ್ತು. ಆದರೆ ಈ ಆದೇಶದ ವಿರುದ್ಧ ಅದಿರು ಕಂಪೆನಿಗಳ ಮಾಲೀಕರು ಉಚ್ಛನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತಂದಿದ್ದರು. ಹೀಗಾಗಿ ಅದಿರು ಕಾರವಾರ ಹಾಗೂ ಬೇಲೇಕೇರಿ ಬಂದರಿನಲ್ಲಿ ಉಳಿದುಕೊಂಡಿತ್ತು.
ಅದಿರು ರಕ್ಷಣೆಗಾಗಿಯೇ ವರ್ಷವಿಡಿ ಸಿಬ್ಬಂದಿ ನೇಮಿಸಿಬೇಕಾಗಿ ಬಂದಿದ್ದು ಈಗಾಗಲೇ ಸಿಬ್ಬಂದಿಯ ಕೊರತೆಯಿಂದ ಬಳಲುತ್ತಿರುವ ಅರಣ್ಯ ಇಲಾಖೆಗೆ ಇದೊಂದು ಹೆಚ್ಚುವರಿ ಹೊರೆಯಾಗಿ ಪರಿಣಮಿಸಿತು. ಅಲ್ಲದೆ ಸಿಬಿಐ ಚೆನ್ನೈ, ಸಿಬಿಐ ಬೆಂಗಳೂರು ಹಾಗೂ ಲೋಕಾಯುಕ್ತರು ಪ್ರತ್ಯೇಕವಾಗಿ ತನಿಖೆ ಮಾಡುತ್ತಿರುವುದರಿಂದ ಪ್ರಕರಣಗಳು ನ್ಯಾಯಾಲಯ ವಿಚಾರಣೆ ಹಂತದಲ್ಲಿ ಇರುವುದರಿಂದ ನ್ಯಾಯಾಯದ ಅಂತಿಮ ತಿರ್ಮಾನದವರೆಗೂ ಈ ಅದಿರನ್ನು ಕಾಯ್ದುಕೊಳ್ಳಬೇಕು ಎಂದು ಅರಣ್ಯ ಇಲಾಖೆಗೆ ಸೂಚಿಸಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಸಿಬಿಐ ಪ್ರಕರಣವೂ ಮುಕ್ತಾಯದ ಹಂತದಲ್ಲಿದ್ದು, ಪ್ರಭಲ ಸಾಕ್ಷಿಯಾಗಬೇಕಿದ್ದ ಅದಿರು ಕಣ್ಮರೆಯಾಗುತ್ತಿದೆ.
Leave a Comment