ಕಾರವಾರ:
ಸಿಆರ್ಜಡ್ ನಿಯಮದಿಂದ ಮೀನುಗಾರರಿಗೆ ತೊಂದರೆಯಾಗುತ್ತಿರುವ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಕಡಲ ಉಬ್ಬರದಿಂದ 500 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಸಿಆರ್ಜಡ್ ನಿಯಮದಡಿ ನಿಷೇಧ ಹೇರಲಾಗಿದೆ. ಇಲ್ಲಿ ಬಹುಮಹಡಿ ಕಟ್ಟಡಗಳು, ಮರಳುಗಾರಿಕೆ, ವಾಸದ ಮನೆಗಳು, ರಸ್ತೆ, ಬಂದರು ಮುಂತಾದ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ಈ ಕಾಯ್ದೆಯಿಂದಾಗಿ ಸಮುದ್ರ ದಂಡೆ ಮೇಲೆ ಸ್ವಂತ ಜಮೀನು ಹೊಂದಿರುವ ಮೀನುಗಾರರಿಗೆ ಮನೆ ಕಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವ್ಯಾಪ್ತಿ ಪ್ರದೇಶದೊಳಗೆ ಮನೆ ಕಟ್ಟಿದರೂ ಕೇವಲ 9 ಅಡಿ ಎತ್ತರದ ಕಟ್ಟಡ ಕಟ್ಟಲು ಮಾತ್ರ ಅವಕಾಶ ಇದೆ. ಮತ್ಸ್ಯಾಶ್ರಯ ಯೋಜನೆಯಡಿ ಮೀನುಗಾರರಿಗೆ ಮನೆ ಕಟ್ಟಿಸಿಕೊಳ್ಳಲು ತೊಡಕಾಗುತ್ತಿದೆ ಎಂದು ಆರೋಪಿಸಿದರು.
ಭಟ್ಕಳದಿಂದ ಕಾರವಾರ ತನಕ ಕರಾವಳಿ ನಿಯಂತ್ರಣ ವಲಯದ ನಕಾಶೆ ತಯಾರಾಗಿದ್ದು ಜನರ ಆಕ್ಷೇಪಗಳಿಗೆ ಜಿಲ್ಲಾಡಳಿತ ಗುರುವಾರ ಆಹ್ವಾನ ನೀಡಿದ್ದರಿಂದ ಸುಮಾರು 30ಕ್ಕೂ ಹೆಚ್ಚಿನ ದೂರುಗಳು ದಾಖಲಾದವು. ಕುಮಟಾ, ಹೊನ್ನಾವರ ತಾಲೂಕಿನಿಂದ ಹೆಚ್ಚು ಆಕ್ಷೇಪಗಳು ಸ್ವೀಕೃತವಾದವು. ಕರಾವಳಿ ಭಾಗದ ಎಷ್ಟೋ ಹಳ್ಳಿಗಳ ಸರ್ವೇ ನಂ. ತಪ್ಪಿ ಹೋಗಿ ಗೊಂದಲ ಸೃಷ್ಠಿಯಾಗಿದೆ. ಇದರ ವ್ಯಾಪ್ತಿಯೊಳಗೆ ಮರಳು ದಿಬ್ಬ,ರಕ್ಷಿತ ಕಾಂಡ್ಲಾ ವನ,ಮೀನುಗಾರಿಕಾ ಇಳಿದಾಣಗಳ ಬಗ್ಗೆ ಸ್ಪಷ್ಟವಾಗಿ ಗುರುತಿಸಲಾಗಿಲ್ಲ ಎಂಬುದು ಅವರ ಆಕ್ಷೇಪಗಳಿಗೆ ಮುಖ್ಯ ಕಾರಣವಾಗಿದೆ. ಇದಲ್ಲದೇ ಸಿಆರ್ಝಡ್ನ ವ್ಯಾಪ್ತಿಯನ್ನು 500 ಮೀಟರ್ನಿಂದ 50 ಮೀ. ಅಥವಾ 100 ಮೀ.ಗೆ ಇಳಿಸಿ ಸೀಮಿತಗೊಳಿಸಬೇಕು ಎಂದು ಜನ ಒತ್ತಾಯಿಸಿದರು.
Leave a Comment