ಹೊನ್ನಾವರ: `ಕಳಪೆ ಕಾಮಗಾರಿಯ ಮೂಲಕ ಕ್ಷೇತ್ರವನ್ನು ಹಾಳು ಗೆಡವಿದ ಶಾಸಕ ಮಂಕಾಳು ವೈದ್ಯ ಸಾವಿರ ಕೋಟಿ ರೂ. ಗಳ ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾನೆ ಎಂದು ಭಟ್ಕಳ ಕ್ಷೇತ್ರದ ಜೆಡಿಎಸ್ ಚುನಾವಣಾ ಉಸ್ತುವಾರಿ ಇನಾಯಿತುಲ್ಲಾ ಶಾಬಂದ್ರಿ ಆರೋಪಿಸಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಿಂದಿನ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಾಮಗಾರಿ ತನ್ನದು ಎಂದು ಹೇಳಿಕೊಳ್ಳುವ ಬೇರೆ ಇಲಾಖೆಯಿಂದ ಮತ್ತು ಬೇರೆಯವರಿಂದ ಪ್ರಯತ್ನಿಸಿ ಮಂಜೂರಿ ಪಡಿಸಿದ ಕಾಮಗಾರಿಯನ್ನೂ ತನ್ನದು ಎಂದು ಹೇಳಿಕೊಳ್ಳುತ್ತಿದ್ದಾರೆ. ಪುರಸಭೆಗೆ ಒಳಚರಂಡಿ ಕಾಮಗಾರಿಗೆ ಅನುದಾನ ನೀಡುವಂತೆ ತಂಜೀಮ್ ವತಿಯಿಂದ ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಲ್.ಕೆ.ಅತಿಕ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ 200 ಕೋಟಿ ರೂ. ಅನುದಾನವನ್ನು ಒಳಚರಂಡಿಗೆ ಮಂಜೂರು ಮಾಡಿಸಲಾಗಿದ್ದು, ಕಾಮಗಾರಿ ಈಗ ಪ್ರಗತಿಯಲ್ಲಿದೆ. ಭಟ್ಕಳದ ಹಾಲಿ ಶಾಸಕ ನಯಾ ಪೈಸೆಯನ್ನೂ ನೀಡಿಲ್ಲ. ಆದರೆ ಶಾಸಕ ಮಂಕಾಳು ವೈದ್ಯ ಬೇರೆಡೆ ಹೇಳಿದಂತೆ ಇದನ್ನೂ ತಾನೆಯೇ ಮಾಡಿಸಿದ್ದೇನೆ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದಾರೆ. ಕ್ಷೇತ್ರದಾದ್ಯಂತ ನಡೆಸಿದ ಕಾಮಗಾರಿಗಳೆಲ್ಲವೂ ಕಳಪೆ ಕಾಮಗಾರಿಯಾಗಿದ್ದು, ಇದನ್ನು ಜನರು ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಜಿ.ಎನ್.ಗೌಡ ಮಾತನಾಡಿ ಸಾವಿರ ಕೋಟಿ ಕಾಮಗಾರಿಯನ್ನು ತಂದ ಶಾಸಕರು ಅಂತ ಅವರ ಫಟಾಲಂಗಳು ಹೇಳುತ್ತಾರೆ. ಬೇಕಾ ಬಿಟ್ಟಿ ಬ್ಯಾನರ್ ಹಾಕಿಕೊಳ್ಳುತ್ತಿದ್ದಾರೆ. ಇವರು ಯಾವಾಗ ತಂದರು? ಅಂಕಿಅಂಶಗಳ ಸಹಿತ ದಾಖಲೆ ನೀಡಲಿ. ಕ್ಷೇತ್ರದಲ್ಲಿ ಶಾಸಕ ಮಂಕಾಳು ವೈದ್ಯ ಅವರ ನಿರ್ದೇಶನದಂತೆ ಹಲವಾರು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಈ ಚಟುವಟಿಕೆಯಿಂದ ಹಣ ವಸೂಲಿ ಮಾಡಿದ ಪಾಪದ ದುಡ್ಡಿನಲ್ಲಿ ಅಲ್ಪಸ್ವಲ್ಪ ದೇಣಿಗೆ ನೀಡುತ್ತಾರೆ. ಕಳೆದ ನಾಲ್ಕೂವರೆ ವರ್ಷ ಈತ ದಾನ ಕೊಟ್ಟ ಹಣವೆಷ್ಟು? ಎಂಬುದರ ಬಗ್ಗೆ ಆದಾಯ ತೆರಿಗೆ ಪ್ರಕಾರ ದಾಖಲೆ ನೀಡಲಿ ಎಂದು ಸವಾಲು ಹಾಕಿದರು.
ಶಾಸಕ ಮಂಕಾಳ ವೈದ್ಯ ಜಿಲ್ಲಾಧಿಕಾರಿ ಉಜ್ವಲ್ಕುಮಾರ ಘೋಷ್ ಹೊನ್ನಾವರದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಜನ ಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮದವರ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಏಕವಚನದಲ್ಲಿ ಹಿಯಾಳಿಸಿದ್ದಾನೆ. ತನ್ನ ಅಕ್ರಮ ವ್ಯವಹಾರಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಕಾನೂನು ತೊಡಕಿರುವ ಅಂಶಗಳಿಗೆ ಸೊಪ್ಪ ಹಾಕಿಲ್ಲ ಎಂಬ ಕಾರಣಕ್ಕೆ ಸಾರ್ವಜನಿಕ ಸಭೆಯಲ್ಲಿ ಸಾರ್ವಜನಿಕರ ಕೆಲಸದ ನೆಪದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಏಕವಚನದಲ್ಲಿ ನಿಂದಿಸಿದ್ದರು. ತದ ನಂತರ ಈ ವಿಷಯವು ಕ್ಷೇತ್ರ ಹಾಗೂ ಜಿಲ್ಲಾದ್ಯಂತ ವ್ಯಾಪಕ ಖಂಡನೆಗೊಳಗಾಗಿತ್ತು. ಅಷ್ಟೇ ಅಲ್ಲದೇ ಜಿ.ಪಂ ಎಇಇ ವಿ.ಆರ್.ಪವಾರ, ರಾಷ್ಟ್ರಿಯ ಹೆದ್ದಾರಿ ಇಂಜಿನಿಯರ್ಗಳಾದ ನಾಗರಾಜ ನಾಯ್ಕ, ಎಂ.ಜಿ.ಹೆಗಡೆ ಅವರು ಶಾಸಕನ ಹಪ್ತಾ ವಸೂಲಿ ಕಿರುಕುಳಕ್ಕೆ ಒಳಗಾಗಿ ವರ್ಗಾವಣೆ ಮಾಡಿಕೊಂಡು ಹೋಗಿದ್ದಾರೆ. ಭಟ್ಕಳದಲ್ಲಿ ಚೆಕ್ಪೋಸ್ಟ್ನಲ್ಲಿ ಪೊಲೀಸರಿಗೆ ತನ್ನ ಮಾಲೀಕತ್ವದ ಅಕ್ರಮ ವಾಹನವನ್ನು ತಡೆದುದ್ದಕ್ಕಾಗಿ ಮನಬಂದಂತೆ ಎಗರಾಡಿ ಜೀವಬೆದರಿಕೆಯೊಡ್ಡಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಯಾವುದೇ ಕಾಮಗಾರಿ ಮಂಜೂರಿ ಆದ ಸ್ಥಳದಿಂದ ತನ್ನ ಬೆಂಬಲಿಗರಿಗೆ ಬೇಕಾಗುವಂತೆ ಅನುಕೂಲವಾಗುವಂತೆ ಕಾಮಗಾರಿ ಸ್ಥಳ ಬದಲಾವಣೆ ಮಾಡುವ ಈ ಶಾಸಕ ತನ್ನ ಬೆಂಬಲಿಗರ ಮುಖಾಂತರ ಮರಳು ನಿಷೇಧ ಆದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಹೆದರಿಸಿ ಅಕ್ರಮ ಸೈಟ್ನಲ್ಲಿ ಅಕ್ರಮ ವ್ಯವಹಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ತಾಲೂಕಾ ಘಟಕದ ಅಧ್ಯಕ್ಷ ರಾಜು ನಾಯ್ಕ ಮಂಕಿ ಮಾತನಾಡಿ 1946 ರಲ್ಲಿ ಉದ್ಘಾಟನೆ ಆದಂತಹ ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ದರ್ಜೆಗೆ ಏರಿಸಲು ಸಾವಿರ ಕೋಟಿಯಲ್ಲಿ ಈ ಆರೋಗ್ಯ ಕೇಂದ್ರಕ್ಕೆ ಪಾಲು ಎಷ್ಟು? ಎಂಬುದನ್ನು ತಿಳಿಸಲಿ. ಶಾಸಕರು ತನ್ನ ಆಪ್ತರನ್ನು ಬಳಸಿಕೊಂಡು ಕಾಮಗಾರಿ ಮಾಡಿಸಿ ಪರ್ಸಂಟೇಜ್ ಪಡೆದುಕೊಂಡು ಗುಣಮಟ್ಟದ ಕಾಮಗಾರಿ ಮಾಡಿಲ್ಲ. ಈ ರಸ್ತೆಗಳು ಯಾವುದೇ ಪ್ರಯೋಜನಕ್ಕೆ ಬಾರದಂತಾಗಿವೆ. ಮಂಕಿ ಗ್ರಾ.ಪಂ ವ್ಯಾಪ್ತಿಯಲ್ಲಿ 3-4 ವರ್ಷದಲ್ಲಿ ಕೋಟ್ಯಾಂತರ ರೂ ವೆಚ್ಚದಲ್ಲಿ ಮಾಡಿದ ಹನಿನೀರಾವರಿ ಕಾಮಗಾರಿ ಕಳಪೆ ಕಾಮಗಾರಿಯಾಗಿದೆ. ಕೋಟ್ಯಾಂತರ ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳಿಕೊಳ್ಳುವ ಮಂಕಾಳ ವೈದ್ಯ ಕ್ಷೇತ್ರದಲ್ಲಿ ಆದ ಕಳಪೆ ಕಾಮಗಾರಿಯ ಬಗ್ಗೆ ಮೊದಲು ಮಾತಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೀನುಗಾರಿಕಾ ಮುಖಂಡ ತಿಮ್ಮಪ್ಪ ಮೇಸ್ತ ಮಾತನಾಡಿ ಶಾಸಕರು ಆಶ್ರಯ ಮನೆ, ಮೀನುಗಾರಿಕೆ ಮನೆ, ಪಶು ಭಾಗ್ಯ ಯೋಜನೆಯಲ್ಲಿ ಹಸು, ಕೋಳಿ, ಎಲ್ಲವನ್ನು ತನಗೆ ಬೇಕಾದ ಬೆಂಬಲಿಗರಿಗೆ ಫಲಾನುಭವಿಗಳಾಗುವಂತೆ ಮಾಡುತ್ತಾರೆ. ಕೃಷಿ ಇಲಾಖೆಯಲ್ಲಿ ಹಾಗೂ ಇತರೆ ಇಲಾಖೆಯಲ್ಲಿ ಮೂಗುತೂರಿಸಿ ತಾಡಪತ್ರಿ, ಕೃಷಿ ಉಪಕರಣ ಹಾಗೂ ಸಬ್ಸಿಡಿ ಸೌಲಭ್ಯಗಳಿಗೂ ಅರ್ಹರನ್ನು ಕಡೆಗಣಿಸಿ ತನ್ನ ಶಿಫಾರಸ್ಸು ಪತ್ರ ತಂದವರಿಗೆ ಮಾತ್ರ ನೀಡಬೇಕು ಎಂದು ಅಧಿಕಾರಿಗಳಿಗೆ ಧಮಕಿ ಹಾಕುತ್ತಾರೆ ಎಂದರು.
ಭಟ್ಕಳ ಜೆಡಿಎಸ್ ಯುವ ಅಧ್ಯಕ್ಷ ಪಾಂಡು ನಾಯ್ಕ, ಸೇವಾ ದಳದ ಅಧ್ಯಕ್ಷ ಉದಯ ನಾಯ್ಕ, ಅಬ್ದುಲ್ ಖಾದರ್, ಲಂಬೋದರ ಗೌಡ, ಅಬುಬಕ್ಕರ್, ಮಣಿ ಶಂಕರ ಗೌಡ, ಬಾಲು ವಿಷ್ಣು ಗೌಡ, ಅಬ್ದುಲ್ ರೆಹಮಾನ್, ಗಣೇಶ ಗೌಡ ಮೂಗ್ವಾ, ಗಣೇಶ ಗೌಡ ಮುಗಳಿ ಇತರರು ಉಪಸ್ಥಿತರಿದ್ದರು.
Leave a Comment