ಕಾರವಾರ: ಇರುವೆ ದಾಳಿಗೆ ಸಾವನಪ್ಪಿದ ಅಂಗವಿಕಲ ಶಿವು ಕುಟುಂಬದವರಿಗೆ ಸರ್ಕಾರದಿಂದ ಬರುವ ಸಾವಿರ ರೂ ಮಾಸಾಶನವೇ ಆಧಾರವಾಗಿತ್ತು. ಶಿವು ಮರಣದೊಂದಿಗೆ ಮಾಸಾಶನವೂ ಸ್ಥಗತಗೊಂಡಿರುವದರಿಂದ ಕುಟುಂಬ ಆರ್ಥಿಕ ಹಾಗೂ ಮಾನಸಿಕವಾಗಿ ಇನ್ನಷ್ಟು ಜರ್ಜರಿತಗೊಂಡಿದೆ.
ಹೋಟೆಲ್ವೊಂದರಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕಮಲಾಳಿಗೆ ಅವಳಿ ಮಕ್ಕಳು ಹುಟ್ಟಿದ್ದರು. ಅವರೇ ಸಂಗೀತಾ ಹಾಗೂ ಶಿವು. ಹುಟ್ಟಿನಿಂದಲೂ ಶಿವುಗೆ ಕೈ ಕಾಲುಗಳಿರಲಿಲ್ಲ. ಸರಿಯಾಗಿ ಮಾತು ಬರುತ್ತಿರಲಿಲ್ಲ. ಹೊರ ಪ್ರಪಂಚ ನೋಡಿರದ ಶಿವು ತೆವಳಿಕೊಂಡೆ ಗುಡಿಸಲಿನಲ್ಲಿ ಓಡಾಡಿಕೊಂಡಿದ್ದರು. ಐದು ವರ್ಷಗಳ ಹಿಂದೆ ಮನೆ ಯಜಮಾನನ ಸಾವು ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ಆದರೂ ಹೋಟೆಲ್ನಲ್ಲಿ ಪಾತ್ರೆ ತೊಳೆದು ಕಮಲಾ ಜೀವನ ನಡೆಸುತ್ತಿದ್ದರು. ಮಂಗಳವಾರ ಹೊಟೇಲ್ ಕೆಲಸಕ್ಕೆ ತೆರಳಿದ್ದ ಕಮಲಾ ಮನೆಗೆ ಬರುವಾಗ ಯಾರೋ ನೀಡಿದ ತುಳಸಿ ಹಬ್ಬದ ಕಬ್ಬನ್ನು ತಂದಿದ್ದರು. ಅದನ್ನು ಮೂಲೆಯಲ್ಲಿರಿಸಿ ಮರುದಿನ ಕೆಲಸಕ್ಕೆ ಹೋಗಿದ್ದಾಗ ಕಬ್ಬಿಗೆ ಬಂದ ಕಪ್ಪು ಇರುವೆಗಳು ಕ್ರಮೇಣವಾಗಿ ಅಂಗವಿಕಲ ಶಿವುವನ್ನು ಆಕ್ರಮಿಸಿಕೊಂಡಿದ್ದವು. ಹೆದ್ದಾರಿ ಪಕ್ಕದಲ್ಲಿಯೇ ಗುಡಿಸಲಿದ್ದರೂ ಮನೆ ಹಿಂಬಾಗ ದಟ್ಟ ಅರಣ್ಯವಿದ್ದಿದ್ದರಿಂದ ಶಿವುವಿನ ಮೂಕ ವೇದನೆ ಯಾರಿಗೂ ಕೇಳಿಸಿಲ್ಲ. ಹೀಗಾಗಿ ಈಡಿ ದಿನ ಲಕ್ಷಾಂತರ ಇರುವೆಗಳೊಂದಿಗೆ ಸೆಣಸಾಟ ನಡೆಸಿದ್ದ ಶಿವು ಸಂಜೆ ವೇಳೆಗೆ ತೀವೃ ಅಸ್ವಸ್ಥಗೊಂಡಿದ್ದರು. ಸಂಜೆ ಈತನನ್ನು ಗಮನಿಸಿದ ತಾಯಿ ಇತರರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಶಿವು ಆಸ್ಪತ್ರೆಯಲ್ಲಿಯೇ ಕೊನೆ ಉಸಿರೆಳೆಯಬೇಕಾಯಿತು.
ಹೊಟೇಲ್ವೊಂದರಲ್ಲಿ ದಿನಕ್ಕೆ 150 ರೂ ಸಂಬಳಕ್ಕೆ ದಿನವಿಡಿ ದುಡಿಯುತ್ತ ಕಮಲಾ ಬಳಿ ಮಗನ ಶವ ಸಂಸ್ಕಾರಕ್ಕೂ ಕಾಸಿರಲಿಲ್ಲ. ಎರಡು ದಿನದಿಂದ ಕೆಲಸಕ್ಕೆ ಬಾರದ ಕಾರಣ ಶನಿವಾರ ಹೋಟೆಲ್ನವರು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿಲ್ಲ. ಒಂದಡೆ ಮಗನ ಸಾವು, ಇನ್ನೊಂದಡೆ ಕೈ ತಪ್ಪಿದ ಕೆಲಸ ಹಾಗೂ ಮಾಸಾಶನವೂ ಸ್ಥಗಿತಗೊಂಡಿದ್ದರಿಂದ ಈಡಿ ಕುಟುಂಬ ಚಿಂತೆಗೆ ಸಿಲುಕಿದೆ. ಕಮಲಾ ಇನ್ನೊಬ್ಬ ಮಗ ಸತೀಶ 10ನೇ ತರಗತಿ, ಮತ್ತೊಬ್ಬ 6ನೇ ತರಗತಿ ಹಾಗೂ ಸಂಗೀತಾ ಡಿಗ್ರಿ ಓದುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಇವರ ಶೈಕ್ಷಣಿಕ ವೆಚ್ಚವನ್ನು ಭರಿಸಲಾಗದ ಸ್ಥಿತಿಯಲ್ಲಿ ಈ ಕುಟುಂಬವಿದೆ. ಅಲಿಗದ್ದಾದಲ್ಲಿ ಕಮಲಾ ಕುಟುಂಬಕ್ಕೆ ಸ್ವಂತ ಭೂಮಿಯಿತ್ತು. ಅಲ್ಲಿ ಪುಟ್ಟದೊಂದು ಜೋಪಡಿ ಕಟ್ಟಿಕೊಂಡು ವಾಸವಾಗಿದ್ದರು. ಅದಿರು ದಾಸ್ತಾನಿಗಾಗಿ ಈ ಭೂಮಿಯನ್ನು ವಶಕ್ಕೆ ಪಡೆಯಲಾಗಿದ್ದು, 15 ಸಾವಿರ ರೂಪಾಯಿಗಳನ್ನು ಕೈಯಲ್ಲಿರಿಸಿ ಇವರನ್ನು ಒಕ್ಕಲೆಬ್ಬಿಸಲಾಯಿತು. ಅದಾದ ನಂತರ ಕಮಲಾ ಬೈತಖೋಲ್ದಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಅರಣ್ಯದಿಂದ ಬರುವ ಹುಳ, ಹುಪ್ಪಡಿ ಹಾಗೂ ಇನ್ನಿತರ ಜೀವಿಗಳ ಆಕ್ರಮಣ ಇವರಿಗೆ ನಿತ್ಯದ ಬದುಕಾಗಿ ಬಿಟ್ಟಿದೆ.
Leave a Comment