ಹೊನ್ನಾವರ: ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಸಂಪರ್ಕಿಸುವ ಸೇತುವೆ ಕಾಮಗಾರಿಗೆ ಸರ್ಕಾರದ ತಾಂತ್ರಿಕ ಇಲಾಖೆ ಅಧಿಕಾರಿಗಳು ಸೂಚಿಸಿದ ಸ್ಥಳವನ್ನು ಜನಪ್ರತಿನಿಧಿಗಳು ದುರುದ್ದೇಶದಿಂದ ಬದಲಿಸಲು ಹೊರಟಿದ್ದಾರೆ. ಸ್ವಜನಪಕ್ಷಪಾತದಿಂದ ಮಂಜೂರರಾದ ಸೇತುವೆ ಕಾಮಗಾರಿ ಆರಂಭವಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಹೊನ್ನಾವರ: ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಸಂಪರ್ಕಿಸುವ ಸೇತುವೆ ಕಾಮಗಾರಿಗೆ ಸರ್ಕಾರದ ತಾಂತ್ರಿಕ ಇಲಾಖೆ ಅಧಿಕಾರಿಗಳು ಸೂಚಿಸಿದ ಸ್ಥಳವನ್ನು ಜನಪ್ರತಿನಿಧಿಗಳು ದುರುದ್ದೇಶದಿಂದ ಬದಲಿಸಲು ಹೊರಟಿದ್ದಾರೆ. ಸ್ವಜನಪಕ್ಷಪಾತದಿಂದ ಮಂಜೂರರಾದ ಸೇತುವೆ ಕಾಮಗಾರಿ ಆರಂಭವಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನ ಮಾವಿನಕುರ್ವಾ ಗ್ರಾಮವು ತಾಲೂಕು ಕೇಂದ್ರದಿಂದ 350 ಮೀಟರ್ ಅಂತರವಿದ್ದರೂ ಸಂಪರ್ಕ ಸೇತುವೆ ಇಲ್ಲದ ಕಾರಣ ಸುಮಾರು 24 ಕಿ.ಮೀ ಸುತ್ತುವರೆದು ಹೋಗಬೇಕಾದ ಪರಿಸ್ಥಿತಿಯಿದೆ. ಇದರಿಂದ ಇಲ್ಲಿಯ ಜನಜೀವನ ಕಷ್ಟಕರವಾಗಿದೆ. ಈ ಗ್ರಾಮದಲ್ಲಿ ಕೂಲಿ ಕಾರ್ಮಿಕರು, ಸಣ್ಣ ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಪಟ್ಟಣಕ್ಕೆ ಹೋಗಲು ಹತ್ತಿರದ ದಾರಿಯಿಲ್ಲದೇ ಕೃಷಿಕರಿಗೆ, ರೈತರಿಗೆ, ವ್ಯಾಪಾರಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಲ್ಲದೇ ರೋಗಿಗಳಿಗೆ ತೊಂದರೆಯಾಗುತ್ತಿದೆ. ಈ ಗ್ರಾಮದ ಪೂರ್ವಜರು ಸೇರಿದಂತೆ 25 ವರ್ಷಗಳಿಂದ ಈಗಲೂ ಸಹ ಈ ಗ್ರಾಮಕ್ಕೆ ಒಂದು ಸೇತುವೆ ನಿರ್ಮಾಣ ಮಾಡಬೇಕೆಂದು ಹೋರಾಟ ಮಾಡುತ್ತಾ ಬಂದಿದ್ದಾರೆ. ಇಲ್ಲಿಯ ಜನರ ಬೇಡಿಕೆಗೆ ಸ್ಪಂದಿಸಿ ಉತ್ತರ ಧಾರವಾಡದ ಸಂಪರ್ಕ ಮತ್ತು ಕಟ್ಟಡ ಇಲಾಖೆಯ ಮುಖ್ಯ ಇಂಜಿನಿಯರ್ ಶಿಫಾರಸ್ಸಿನೊಂದಿಗೆ ಸರ್ಕಾರವು 31-01-2017 ರಂದು (ಸರಕಾರದ ಆದೇಶ ಸಂಖ್ಯೆ : ಲೊ,ಇ/34/ಇಎಪಿ2014) ಈ ಭಾಗದಲ್ಲಿ ಶರಾವತಿ ನದಿಗೆ 40 ಕೋಟಿ ರೂ. ವೆಚ್ಚದ ಮಾವಿನಕುರ್ವಾ-ಹೊನ್ನಾವರ ಸಂಪರ್ಕ ಸೇತುವೆಗೆ ಮಂಜೂರಿ ಮಾಡಿದೆ. ಕೆಆರ್ಡಿಸಿಎಲ್ ಇಲಾಖೆಯು ಸರ್ವೆ ಮಾಡಿ ನಿರ್ಮಾಣದ ಅಲೈನಮೆಂಟ್ ಮತ್ತು ತಾಂತ್ರಿಕತೆಗೆ ಬೆಳ್ಳುಕುರ್ವಾ ಬಳಿ ರೈಲ್ವೇ ಸೇತುವೆಯ ಪಕ್ಕದಿಂದ ಹೊನ್ನಾವರಕ್ಕೆ ಸಂಪರ್ಕಿಸುವುದು ಎಲ್ಲಾ ರೀತಿಯಲ್ಲಿ ಯೋಗ್ಯ ಮತ್ತು ಸೂಕ್ತವಾಗಿದೆ ಎಂದು ಪ್ರಮಾಣಪತ್ರವನ್ನು ನೀಡಿದೆ. ಸೇತುವೆಯ ಉದ್ದ 340 ಮೀ. ಹಾಗೂ ಅಗಲ 10.5 ಮೀ. ಸೇತುವೆಯ ಅಂದಾಜು ವೆಚ್ಚ 40.00 ಕೋಟಿ ರೂ. ಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಮಧ್ಯೆ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ತನ್ನ ಬೆಂಬಲಿಗರು ಹೇಳಿದ ಇನ್ನೊಂದು ಸ್ಥಳದಿಂದ ಸೇತುವೆಯನ್ನು ಪ್ರಾರಂಭಿಸಬೇಕು ಎಂದು ಪಟ್ಟು ಹಿಡಿದಿದ್ದರಿಂದ ಆ ಮಾರ್ಗವನ್ನು ಅನುಸರಿಸಿ ಸೇತುವೆ ನಿರ್ಮಿಸಲು ಯತ್ನ ನಡೆಸಿದ್ದರು. ಆದರೆ ಇಲಾಖೆಯು ಶಾಸಕರು ಹಾಗೂ ಅವರ ಬೆಂಬಲಿಗರು ತಿಳಿಸಿದ ಸ್ಥಳವು ನದಿಯ ನೀರಿನ ಆಳ, ಸೆಳೆತ, ತಿರುವು ಇರುವುದರಿಂದ ಇದು ಅವೈಜ್ಞಾನಿಕವೂ, ವೆಚ್ಚದಾಯಕವೂ ಆಗಿರುವುದರಿಂದ ತಾಂತ್ರಿಕ ಇಲಾಖೆಯು ಶಾಸಕರು ತಿಳಿಸಿದ ಸ್ಥಳವನ್ನು ನಿರಾಕರಿಸಿತ್ತು. ಬೆಳ್ಳುಕುರ್ವಾ ಬಳಿ ರೈಲ್ವೇ ಸೇತುವೆಯ ಪಕ್ಕದಿಂದ ಹೊನ್ನಾವರಕ್ಕೆ ಸಂಪರ್ಕಿಸುವುದೇ ಎಲ್ಲಾ ರೀತಿಯಲ್ಲಿ ಯೋಗ್ಯ ಮತ್ತು ಸೂಕ್ತವಾಗಿದೆ ಎಂದು ಇಲಾಖೆಯು ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿತು. ತಾಂತ್ರಿಕ ಇಲಾಖೆಯ ವರದಿಯಿಂದ ವಿಚಲಿತರಾದ ಶಾಸಕ ಮತ್ತವರ ಬೆಂಬಲಿಗರು `ಸೇತುವೆ ಇಲ್ಲದಿದ್ದರೂ ಅಡ್ಡಿಯಿಲ್ಲ, ತಮ್ಮ ಪ್ರತಿಷ್ಠೆಗೆ ಧಕ್ಕೆಯಾಗಬಾರದು. ತಾವು ಹೇಳದ ಜಾಗದಲ್ಲಿ ಸೇತುವೆ ಬೇಡ’ ಎಂದು ಮಂಜೂರಾದ ಸೇತುವೆಗೆ ಕಲ್ಲು ಹಾಕುತ್ತಿದ್ದಾರೆ. ಬೆಂಬಲಿಗರ ಮಾತು ಕೇಳಿ ಅವರ ಓಲೈಕೆ ಮಾಡಲು ಹೋದ ಶಾಸಕರು ಸೇತುವೆಯನ್ನು ಬದಲಿಸಿ ಬೇರೆ ತಾಲೂಕಿಗೆ ವರ್ಗಾವಣೆ ಮಾಡಲು ಹುನ್ನಾರ ನಡೆಸಿದ್ದಾರೆ. ಮಂಜೂರಾದ ಸೇತುವೆಯನ್ನು ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಮಾವಿನಕುರ್ವಾ-ಹೊನ್ನಾವರ ಸಂಪರ್ಕ ಸೇತುವೆಯ ಹೋರಾಟ ಸಮಿತಿ ಅಧ್ಯಕ್ಷ ಪೀಟರ್ ಮೆಂಡಿಸ್, ಕಾರ್ಯದರ್ಶಿ ಹರಿಶ್ಚಂದ್ರ ಗೋವಿಂದ ನಾಯ್ಕ ಹಾಗೂ ಊರ ನಾಗರಿಕರು ಸಂಬಂಧಪಟ್ಟ ಇಲಾಖೆಗೆ ಮತ್ತ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
Leave a Comment