ಕಾರವಾರ: ರವೀಂದ್ರನಾಥ ಟಾಗೋರ್ ನಲ್ಲಿ ಸಿದ್ಧಗೊಳ್ಳುತ್ತಿರುವ ರಾಕ್ ಗಾರ್ಡನ್ನಲ್ಲಿ ಅಳವಡಿಸಲು ವೈವಿಧ್ಯಮಯ ಸಿಮೆಂಟ್ ಶಿಲ್ಪಗಳು ನುರಿತ ಕಲಾವಿದರ ಕೈಚಳಕದಲ್ಲಿ ಸಿದ್ದಗೊಳ್ಳುತಿದೆ.
ಜಿಲ್ಲಾಡಳಿತವು ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಇರುವ ಕಡಲ ತೀರದ ಪ್ರದೇಶದಲ್ಲಿ ಬೃಹತ್ ರಾಕ್ ಗಾರ್ಡನ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಗಾರ್ಡನ್ನಲ್ಲಿ ಅಳವಡಿಸಲು ಸಿಮೆಂಟ್ ಪುತ್ಥಳಿ ನಿರ್ಮಿಸುವ ಕಾರ್ಯ ಇಲ್ಲಿನ ಮಯೂರ ವರ್ಮ ವೇದಿಕೆಯ ಆವರಣದಲ್ಲಿ ನಡೆಯುತ್ತಿದೆ. ಹಾಲಕ್ಕಿಗಳ ಜನಪದ ಸಂಸ್ಕøತಿ, ಸಿದ್ಧಿಗಳ ಬುಡಕಟ್ಟು ಸಂಸ್ಕøತಿ, ಮೀನುಗಾರರ ಜೀವನ ಸಂಸ್ಕøತಿಯ ಜೊತೆಗೆ ರೈತರ ಬೆನ್ನೆಲುಬಾದ ಎತ್ತುಗಳು, ಎಮ್ಮೆ, ಕೋಳಿ, ನಾಯಿ ಮುಂತಾದ ಸಾಕು ಪ್ರಾಣಿಗಳ ಪ್ರತಿಕೃತಿಗಳ ವೈವಿಧ್ಯಮಯ ಶಿಲ್ಪಗಳು ಈಗಾಗಲೇ ಸಿದ್ಧವಾಗಿದ್ದು ಅವುಗಳಿಗೆ ಅಂತಿಮ ಸ್ಪರ್ಷ ನೀಡಲಾಗುತ್ತಿದೆ. ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ರಾಕ್ ಗಾರ್ಡ್ನ್ನಲ್ಲಿ ಈ ಶಿಲ್ಪಗಳನ್ನು ಅಳವಡಿಸಲಾಗುತ್ತಿದೆ. ಜಿಲ್ಲೆಯ ವೈವಿಧ್ಯಮಯ ಸಂಸ್ಕøತಿಗೆ ತಕ್ಕಂತೆ ಆಯಾ ಜನಾಂಗದ ಕೇರಿ, ಹಟ್ಟಿ, ವಾಡೆಗಳಲ್ಲಿ ಕುಳಿತು ಹರಟೆ ಹೊಡೆಯುವ, ಹೊಲದಲ್ಲಿ ಕೆಲಸ ಮಾಡುವ, ನಾಟಿ ಔಷಧ ತಯಾರಿಸುವ, ಮೀನು ಬುಟ್ಟಿ ಹೊರುವ ಹೀಗೆ ವಿವಿಧ ಶೈಲಿಯ ಪುತ್ಥಳಿಗಳು ಕಲಾವಿದರ ಕೈಚಳಕದಲ್ಲಿ ರೂಪುಗೊಳ್ಳುತ್ತಿವೆ.
ಉತ್ತರ ಕರ್ನಾಟಕದ ಪ್ರಸಿದ್ಧ ಶಿಲ್ಪ ಕಲಾವಿದ ಮುರುಗಯ್ಯ ಹಿರೇಮಠ ಅವರ ನೇತ್ರತ್ವದಲ್ಲಿ ಶಿಲ್ಪಗಳಿಗೆ ಜೀವ ತುಂಬಲಾಗುತ್ತಿದೆ. ಪ್ರತಿಯೊಂದು ಶಿಲ್ಪವು ನೈಜವಾಗಿ ಮೂಡಿ ಬಂದಿದ್ದು, ಮನುಷ್ಯ, ಪ್ರಾಣಿ, ಪಕ್ಷಿಗಳ ನೈಜ ರೂಪಕ್ಕೂ ಈ ಶಿಲ್ಪಗಳಿಗೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಹಾಲಕ್ಕಿ, ಸಿದ್ದಿ, ಮೀನುಗಾರ, ಎತ್ತು, ಮರಿಯೊಂದಿಗಿರುವ ಕೋಳಿ, ಎಮ್ಮೆ, ಸಾಕು ನಾಯಿಗಳ ಪುತ್ಥಳಿಗಳಿಗೆ ಬಣ್ಣ ಬಳಿದಾಗ ಅದರ ಚಿತ್ರಣವೇ ಬೇರೆ ಇರಲಿದೆ. ಕಲಾವಿದರು ಹೇಳುವಂತೆ ಅವುಗಳ ಸಮೀಪ ಹೋಗಿ ಸ್ಪರ್ಶಿಸಿ ನೋಡಿದಾಗಲೇ ಅವು ರಚನೆಯಾದ ಶಿಲ್ಪಗಳೆಂಬುದು ಅನುಭವಕ್ಕೆ ಬರಲಿದೆ ಎನ್ನುತ್ತಾರೆ. ಈ ಶಿಲ್ಪಗಳಿಗೆ ಕಲಾವಿದರಾದ ಎಂ.ಜಿ.ಹಿರೇಮಠ್, ಮಧುಪ್ರಕಾಶ್, ರಮೇಶ ಹೂಗಾರ್, ಪರಶುರಾಮ್ ರಜಿಕನ್ನವರ್, ವಿಜಯ, ರೇವಣಸಿದ್ಧಪ್ಪ ಕಲ್ಲಶೆಟ್ಟಿ ಮುಂತಾದವರು ಹಗಲಿರುಳು ಶ್ರಮಿಸಿ ಒಂದು ನಿರ್ದಿಷ್ಠ ಆಕಾರ ನೀಡುತ್ತಿದ್ದಾರೆ. ಇದಲ್ಲದೇ ಅ.28ರಿಂದ ಪ್ರಾರಂಭವಾಗಿರುವ ರಾಜ್ಯಮಟ್ಟದ ಜನಪರ ಸಿಮೆಂಟ್ ಶಿಲ್ಪಕಲಾ ಶಿಬಿರದಲ್ಲಿ ವಿವಿಧ ಜಿಲ್ಲೆಗಳ 20 ಕಲಾವಿದರಿಂದ ಜಿಲ್ಲೆಯ ವಿವಿಧ ಜನಾಂಗಗಳ ನೃತ್ಯ ರೂಪಕಗಳ ಕಲಾಕೃತಿಗಳು ಸಿದ್ಧವಾಗಲಿವೆ. ಪುತ್ಥಳಿಗಳ ತಯಾರಿಕೆಗಾಗಿ ಸಿಮೆಂಟ್, ಉಕ್ಕು, ಮರಳು, ಗ್ಲಾಸಿನ ಗೋಲಿ ಮುಂತಾದ ಅವಶ್ಯಕ ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಹಾಲಕ್ಕಿಗಳ ಪುರುಷ, ಮಹಿಳೆಯರು ಗದ್ದೆ ಕೆಲಸದಲ್ಲಿ ನಿರತರಾಗಿರುವ, ಮಹಿಳೆ ಭತ್ತ ಕುಟ್ಟುವ, ಸಾಕಿದ ದನಕರುಗಳ ಜೊತೆಗೆ ಇರುವ, ಮನೆ ಜಗುಲಿಯಲ್ಲಿ ಹರಟೆ ಹೊಡೆಯುವ, ಸಿದ್ಧಿಗಳ ಧಮಾಮಿ ನೃತ್ಯ, ವೀಳ್ಯದೆಲೆ ಕೊಯ್ಯುವ ಮುಂತಾದ ನಾನಾ ವಿಧದ ಭಂಗಿಗಳ ಪುತ್ಥಳಿಗಳು ಸಿದ್ಧಗೊಂಡಿವೆ. ಬುಡಕಟ್ಟು ಸಿದ್ಧಿ ಜನಾಂಗದ ಜನರು ಅರಣ್ಯದಲ್ಲಿ ನಾನಾ ರೀತಿಯ ಕೆಲಸ ಮಾಡುವ ಶೈಲಿಯ ಸಿದ್ಧಿ ವ್ಯಕ್ತಿ, ಮಹಿಳೆಯರ ಹಾವಭಾವದ ಸ್ಥಿರ ಚಿತ್ರಣದ ಪುತ್ಥಳಿಗಳು ನೋಡುಗರನ್ನು ರಂಜಿಲಿವೆ. ಇದಲ್ಲದೇ ಕಡಲ ಮಕ್ಕಳು ಎಂದು ಗುರುತಿಸಿ ಕೊಂಡಿರುವ ಮಿನುಗಾರರ ಜೀವನ ಪದ್ಧತಿಯ ಮೀನು ಒಣಗಿಸುವ, ಮೀನು ವ್ಯಾಪಾರ ಮಾಡುವ ಶೈಲಿಯ ಕಲ್ಪನೆಗಳಿಗೆ ಕಲಾವಿದರು ಮೂರ್ತರೂಪ ನೀಡುತ್ತಿದ್ದಾರೆ. ಜಿಲ್ಲೆಯ ಪ್ರಮುಖ ನಾಟಿ ವೈದ್ಯರ ಹಾಗೂ ಪದ್ಮಶ್ರೀ ಸುಕ್ರಿ ಗೌಡ ಅವರ ಕಲಾಕೃತಿಗಳು ನೈಜವಾಗಿಯೇ ಗೋಚರಾಗುತ್ತಿವೆ.
************************
ರಾಕ್ ಗಾರ್ಡನ್ಗಾಗಿ ಜಿಲ್ಲೆಯ ವಿವಿಧ ಜನಾಂಗಗಳ ಒಟ್ಟು 45 ಕಲಾಕೃತಿಗಳು ಸಿದ್ದವಾಗಿವೆ. ಮೀನುಗಾರರು ಮೀನು ಹಿಡಿಯುವ ಮತ್ತು ಮೀನುಗಳು ಸಿಕ್ಕಾಗ ಸಂಭ್ರಮಿಸುವ ಕುರಿತ ಸುಮಾರು 22 ಅಡಿ ಎತ್ತರದ ಸೆಲಿಬ್ರೆಷನ್ ಕಲ್ಚರ್ ಎಂಬ ಕಲಾಕೃತಿಯು ಬೆಂಗಳೂರಿನಲ್ಲಿ ಸಿದ್ದಗೊಳ್ಳುತ್ತಿದ್ದು ಪ್ರಮುಖ ಆಕರ್ಷಣೆಯಾಗಲಿದೆ.
– ಎಸ್.ಎಸ್.ನಕುಲ್, ಜಿಲ್ಲಾಧಿಕಾರಿ
ನವೆಂಬರ್ ಒಳಗೆ ಶಿಲ್ಪ ನಿರ್ಮಾಣ ಕಾರ್ಯ ಮುಗಿಸಲು ಗುರಿ ನಿಗದಿಪಡಿಸಲಾಗಿದೆ. ಆದರೆ ಇದು ಬಹಳ ಸೂಕ್ಷ್ಮ ಕೆಲಸವಾಗಿದ್ದು, ಸದ್ಯ ಅರ್ಧ ಕೆಲಸ ಮುಗಿದಿದೆ. ಮುಂದಿನ ಡಿಸೆಂಬರ್ ಒಳಗೆ ಸಂಪೂರ್ಣಗೊಳ್ಳಬಹುದು ಎಂಬ ವಿಶ್ವಾಸ ಇದೆ
-ಮಧುಪ್ರಕಾಶ್, ಮುಖ್ಯ ಕಲಾವಿದ. ಮುರುಗಯ್ಯ ಹಿರೇಮಠ್ ಕಲಾ ಬಳಗ.
Leave a Comment