ಕಾರವಾರ: ನಂದನಗದ್ದಾದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಪಾರ್ವತಿ ಶಂಕರ ಸಭಾ ಭವನ ತೆರವು ಮಾಡುವಂತೆ ಆಗ್ರಹಿಸಿ ಸ್ಥಳೀಯರು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.
ಮಲ್ಲಿಕಾರ್ಜುನ ದೇವಾಲಯ ಸಮೀಪ ಪಾರ್ವತಿ ಶಂಕರ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಅನಧಿಕೃತವಾಗಿ ಸಭಾ ಭವನ ನಿರ್ಮಾಣ ಮಾಡಲಾಗಿದೆ. ಸರ್ವೆ ನಂ 166/2ರಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆದಿದ್ದು, 9ಮೀಟರ್ ರಸ್ತೆ ಬಿಡಬೇಕಿತ್ತು. ಆದರೆ, 3ಮೀಟರ್ ಮಾತ್ರ ರಸ್ತೆಗಾಗಿ ಜಾಗ ಬಿಡಲಾಗಿದೆ. ಇದರಿಂದ ಚರಂಡಿಯ ನೀರು ಇತರೆ ಮನೆಗಳಿಗೆ ನುಗ್ಗಿ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು. ಈ ಪ್ರದೇಶದಲ್ಲಿ ನೀರು ಹರಿದು ಹೋಗಲು ಸರಿಯಾದ ಮೋರಿಗಳಿಲ್ಲ. ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿಲ್ಲ ಎಂದು ಆರೋಪಿಸಿದರು. ನಗರಸಭೆಗೆ ಕಟ್ಟಡ ಆಸ್ತಿ ತೆರಿಗೆಯನ್ನು ತುಂಬಿಲ್ಲ. ಸಭಾ ಭವನ ಎಂದು ಪರವಾನಿಗೆ ಪಡೆದು ಕಲ್ಯಾಣ ಮಂಟಪ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಟ್ರಸ್ಟ್ ನಿಂದ ನಡೆಸುವ ಸಭಾ ಭವನಕ್ಕೆ ಪ್ರತಿ ದಿನ 1.30ಲಕ್ಷ ಶುಲ್ಕ ಪಡೆಯಲಾಗುತ್ತದೆ. ಇದಕ್ಕೆ ಯಾವದೇ ರಸಿದಿಯಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ತೊಂದರೆಯಾಗುತ್ತಿದೆ. ಹೀಗಾಗಿ ಕೂಡಲೇ ಪರವಾನಿಗೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಈ ಹಿಂದೆ ಇಲ್ಲಿನ ಅವ್ಯವಹಾರಗಳ ಕುರಿತು ನಗರಸಭೆ ಪೌರಾಯುಕ್ತರಿಗೆ ದೂರು ನೀಡಿದರೂ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು. ರಾಹುಲ ರಾಮನಾಥ ನಾಯ್ಕ, ಅಭಯ ದೇಸಾಯಿ, ಶಾಂತಾರಾಮ ಗೋನವಲ್ಲಿ, ರಂಗೋಬಾ ದೇಸಾಯಿ, ದೀಪಕ ನಾಯ್ಕ, ರಾಜೇಶ ನಾಯ್ಕ ಇತರರಿದ್ದರು.
Leave a Comment