ಕಾರವಾರ: ವಿಕಲ ಚೇತನರಲ್ಲಿ ಹುದುಗಿರುವ ಕಲಾ ಕೌಶಲ್ಯಗಳಿಗೆ ಸೂಕ್ತ ವೇದಿಕೆ ಸೃಷ್ಟಿಯಾಗಬೇಕಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿಠ್ಠಲ ಎಸ್.ಧಾರವಾಡಕರ ಹೇಳಿದರು.
ಭಾನುವಾರ ಜಿಲ್ಲಾ ರಂಗಮಂದಿರದಲ್ಲಿ ವಿಶ್ವ ವಿಕಲಚೇತನ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರೆಂದರೆ ಭಿನ್ನವಾದ ವ್ಯಕ್ತಿಗಳಲ್ಲ. ಅವರೂ ಕೂಡಾ ನಮ್ಮಂತೆ ನಾಗರಿಕರು. ಅವರಿಗೆ ಕನಿಕರ ಅನುಕಂಪ ನೀಡುವ ಬದಲಾಗಿ ಅವಕಾಶಗಳನ್ನು ನೀಡಬೇಕು. ಸಮಾಜ ಅವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯ ಮಾತನಾಡಿ, ವಿಕಲಚೇತನರಿಗೆ ಅವಕಾಶ ಮತ್ತು ಸಹಕಾರ ನೀಡಿದಲ್ಲಿ ಅವರೂ ಕೂಡಾ ಎಲ್ಲರಂತೆ ಬೆಳೆಯಲು ಮತ್ತು ಬದುಕಲು ಸಾಧ್ಯವಾಗುತ್ತದೆ, ಅವರಿಗೆ ಬೇಕಾಗಿರುವದು ಅವಕಾಶವೇ ಹೊರತು ಅನುಕಂಪವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ ಸೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಕಲಚೇತನ ಮಕ್ಕಳು ಶಾಪವಲ್ಲ ದೇವರು ಕೊಟ್ಟ ಪ್ರಸಾದ ಎಂದು ತಿಳಿಯಬೇಕು. ಅಂತಹ ಮಕ್ಕಳು ಸರ್ವ ಸಮಾನ ಹಕ್ಕುಗಳನ್ನು ಹೊಂದಿರುವಂತವರು. ಸರಕಾರ ವಿಕಲಚೇತನರಿಗೆ ಸಾರಿಗೆ ಭತ್ಯೆ, ಬೆಂಗಾವಲು ಭತ್ಯೆ, ವೈಧ್ಯಕೀಯ ಮತ್ತು ಫಿಜಿಯೋತೇರಪಿಯಂತಹ ಸೌಲಭ್ಯಗಳನ್ನು ಒದಗಿಸಿದೆ. ಸರಕಾರದ ಸೌಲಭ್ಯಗಳನ್ನು ವಿಕಲಚೇತನರು ಬಳಸಿಕೊಳ್ಳಬೇಕು ಎಂದು ಹೇಳಿದರು. ನ್ಯಾಯವಾದಿ ರಾಜೇಶ್ವರಿ ವಿ.ನಾಯ್ಕ ಮಾತನಾಡಿ, ಮಾನಸಿಕ ವಿಕಲತೆ ಹೊಂದಿರುವ ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ರತಿಯೊಬ್ಬರಿಗೂ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಿದ್ದು, ಅವುಗಳನ್ನು ಖಾತ್ರಿಪಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿಕಲಚೇತನರ ಹಕ್ಕುಗಳ ಕುರಿತು ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಕಲಚೇತನರಿಗಾಗಿ ಮೀಸಲಾತಿ ಒದಗಿಸಲಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಹಾಗೂ ಪಾಲಕರಿಗೆ ವಿವಿಧ ಮನೋರಂಜನಾ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಿಜೇತ ಪಾಲಕರಿಗೆ ನಗದು ಬಹುಮಾನ ಹಾಗೂ ಮಕ್ಕಳಿಗೆ ಟ್ರೋಫಿಗಳನ್ನು ವಿತರಿಸಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್ ಚಂದ್ರಶೇಖರ ನಾಯಕ, ಶಿಕ್ಷಣಾಧಿಕಾರಿ ರಾಮಕೃಷ್ಣ ನಾಯಕ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Leave a Comment