ಕಾರವಾರ: “ಕರಾವಳಿ ಉತ್ಸವ – 2017″ಕ್ಕೆ ಡಾ.ರವೀಂದ್ರನಾಥ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ಅದ್ದೂರಿ ಚಾಲನೆ ದೊರೆತಿದೆ. ಹಲವು ಗಣ್ಯರು ಹಾಗೂ ಹಿರಿಯ ಕಲಾವಿದರು ಇದಕ್ಕೆ ಸಾಕ್ಷಿಯಾದರು.
ಕರಾವಳಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಹಲವು ಮನರಂಜನಾ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ವಿವಿಧ ರೋಮಾಂಚನ ಸ್ಪರ್ಧೆಗಳು ಜರುಗಿದವು. ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ್ದ ಪೇಂಟ್ಬಾಲ್ ಹಾಗೂ ಠಾಗೋರ ಕಡಲತೀರದಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯ ಗಮನ ಸೆಳೆಯಿತು. ಜಿಲ್ಲೆಯಲ್ಲಿಯೇ ಮೊದಲ ಭಾರಿ ಆಯೋಜಿಸಿದ್ದ ಪೇಂಟ್ ಬಾಲ್ ಕ್ರೀಡೆ ಪ್ರಮುಖ ಆಕರ್ಷಣೆಗೆ ಕಾರಣವಾಯಿತು. ಮಾಲಾದೇವಿ ಮೈದಾನದಲ್ಲಿ ಬಣ್ಣದ ಬುಲೆಟ್ಗಳು ಹೊರಬರದಂತೆ ನಿರ್ಮಿಸಿದ ಪರದೆಯೊಳಗೆ ನಡೆದ ಸಾಹಸಿ ಕ್ರೀಡೆಗೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಿಗ್ಗೆ 10 ಗಂಟೆ ಸುಮಾರಿಗೆ ನೌಕಾನೆಲೆ ಹಾಗೂ ಪೊಲೀಸರು ಬಣ್ಣದ ಜಾಕೇಟ್, ಹೇಲ್ಮೆಟ್ ಸೇರಿದಂತೆ ಇನ್ನಿತರ ಸುರಕ್ಷತಾ ಪರಿಕರಣಗಳನ್ನು ತೊಟ್ಟ ಆಟಗಾರರು ಕಣಕ್ಕಿಳಿದು ಬಣ್ಣದ ಬುಲೆಟ್ಗಳ ಕದನ ನಡೆಸಿದರು. ಸುಮಾರು 20 ನಿಮಿಷಗಳ ಕಾಲ ನಡೆದ ಈ ಹೋರಾಟದಲ್ಲಿ ಕೊನೆಗೆ ನೌಕಾನೆಲೆ ತಂಡ ಎದುರಾಳಿ ತಂಡದ ಎಲ್ಲರನ್ನು ಫೈರ್ ಮಾಡಿ ಗೆಲುವು ಸಾಧಿಸಿತು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್. ಪುರುಷೋತ್ತಮ ವಿಜೆತರಿಗೆ ಪ್ರಶಸ್ತಿ ವಿತರಿಸಿದರು. ಬೀಚ್ ಬಾಲಿಬಾಲ್ ಸ್ಪರ್ಧೆಯಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಕಾರವಾರ ತಂಡ ಪ್ರಥಮ ಸ್ಥಾನ ಪಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಮಹಿಳೆಯರ 6 ತಂಡ ಹಾಗೂ ಪುರಷರ 10 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಅದರಲ್ಲಿ ಅಂತಿಮವಾಗಿ ಮಹಿಳಾ ವಿಭಾಗದಲ್ಲಿ ಕಾರವಾರ ಕ್ರೀಡಾ ವಸತಿ ಶಾಲೆ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವೀತಿಯ ಸ್ಥಾನ ಪಡೆದುಕೊಂಡರು. ಪುರಷರ ವಿಭಾಗದಲ್ಲಿ ಕಾರವಾರ ಪ್ರಥಮ ಹಾಗೂ ಶಿರಸಿ ತಂಡ ದ್ವಿತೀಯ ತಂಡ ಪಡೆಯಿತು.
Leave a Comment