ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಯ ವಿಷಯದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರೊರ್ವರಿಂದ ಕಾಮಗಾರಿ ಹಣದಲ್ಲಿ ಶೆ.0.5% ಹಣವನ್ನು ನೀಡುವಂತೆ ಪಿಡಿಸಿ ಅವರಿಂದ 30 ಸಾವಿರ ರೂ. ನಗದು ಹಣ ಪಡೆಯುತ್ತಿರುವ ಸಂದರ್ಭದಲ್ಲೇ ಉಕ ಜಿಲ್ಲಾ ಭ್ರಷ್ಟಾಚಾರ ನಿಗ್ರಹ(ಎಸಿಬಿ)ದಳ ದವರು ಕಾರ್ಯಾಚರಣೆ ನಡೆಸಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಪ್ರಯೋಗಾಲಯ ಸಿಬ್ಬಂದಿಯನ್ನು ಬಂಧಿಸಿದ್ದು ಪ್ರಮುಖ ಆರೋಪಿ ಅಧಿಕಾರಿ ಪರಾರಿಯಾಗಿರುವ ಘಟನೆ ಶನಿವಾರ ಹಳಿಯಾಳದಲ್ಲಿ ನಡೆದಿದೆ. ಎಸಿಬಿಗೆ ದೂರು ನೀಡಿರುವ ಕಾರವಾರದ ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ನೀಡಿದ ದೂರಿನ ಮೇಲೆ ಈ ದಾಳಿ ನಡೆದಿದ್ದು ಶನಿವಾರ ಸ್ಥಳದಲ್ಲಿದ್ದ ಅವರು ಮಾಧ್ಯಮವದರಿಗೆ ಮಾಹಿತಿ ನೀಡುತ್ತಾ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯಿಂದ ಸುಮಾರು 9 ಕೋಟಿ 70 ಲಕ್ಷ ರೂ. ಮೊತ್ತದ ಕಾಮಗಾರಿಗಳು ನಡೆಯುತ್ತಿದ್ದು ಅದರಲ್ಲಿ ಶೇ.0.5 ಹಣವನ್ನು ನೀಡುವಂತೆ ಡಿಸೆಂಬರ್ ತಿಂಗಳ 26 ರಂದು ಹಳಿಯಾಳದ ಈ ಕಚೇರಿಯಲ್ಲಿ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಚ್.ವಿಶ್ವನಾಥ ಅವರು ಗುತ್ತಿಗೆದಾರರ ಸಭೆ ನಡೆಸಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಹೇಳಿದರು. ತನ್ನ ಕಾಮಗಾರಿಯ ವಿಷಯದಲ್ಲಿ ರೂ.50 ಸಾವಿರ ನೀಡುವಂತೆ ಅಧಿಕಾರಿ ವಿಶ್ವನಾಥ ಅವರು ಬೇಡಿಕೆ ಇಟ್ಟಿದ್ದರು ಕೊನೆಗೆ ಅದು 30 ಸಾವಿರ ರೂ.ಗೆ ಒಪ್ಪಲಾಗಿತ್ತು ಅದರಂತೆ ಶನಿವಾರ ದಿ.1 ರಂದು ತಾವು ಕಾರವಾರದ ಎಸಿಬಿ ಕಚೇರಿಗೆ ತೆರಳಿ ಭ್ರಷ್ಟ ಅಧಿಕಾರಿಯ ವಿರುದ್ದ ದೂರು ನೀಡಿ ಅಧಿಕಾರಿ ಬೇಡಿಕೆ ಇಟ್ಟ ಹಣ ತೆಗೆದುಕೊಂಡು ಹಳಿಯಾಳದ ಕಚೇರಿಗೆ ಆಗಮಿಸಿದಾಗ ಎಚ್.ವಿಶ್ವನಾಥ ಅವರು ಸ್ಥಳದಲ್ಲಿರಲಿಲ್ಲ ಬದಲಾಗಿ ಕಚೇರಿಯಲ್ಲಿದ್ದ ಪ್ರಯೋಗಾಲಯ ಸಹಾಯಕ ಮಹಾರುದ್ರ ಹೂಲಿ ಅವರಿಗೆ ಹಣ ನೀಡುವಂತೆ ಮೊಬೈಲ್ ಕಾಲ್ನಲ್ಲಿ ತಿಳಿಸಿದಾಗ ನಾನು ಅವರಿಗೆ ಹಣ ನೀಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಪ್ರಯೋಗಾಲಯ ಸಹಾಯಕನನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆದರೇ ಎಚ್.ವಿಶ್ವನಾಥ ಅವರು ತಲೆ ಮರೆಸಿಕೊಂಡಿದ್ದು ಅವರ ಬಂಧನಕ್ಕೆ ಅಧಿಕಾರಿಗಳು ಬಲೆ ಬಿಸಿದ್ದಾರೆಂದು ದೂರುದಾರ ಮಾಧವ ನಾಯಕ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಚ್.ವಿಶ್ವನಾಥ ಅವರ ಮೇಲೆ ಈಗಾಗಲೇ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ 2-3 ಪ್ರಕರಣಗಳು ನಡೆಯುತ್ತಿದ್ದು ಇದು ಅವರ ಮೇಲೆ ನಾಲ್ಕನೇಯ ದಾಳಿಯಾಗಿದೆ ಎಂದು ಮಾಧವ ನಾಯಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಕಾರ್ಯಾಚರಣೆಯಲ್ಲಿ ಎಸಿಬಿಯ ಡಿವೈಎಸ್ಪಿ ಗಿರಿಶ, ಇನ್ಸಪೆಕ್ಟರ್ ರಮೇಶ ಎಚ್, ಎಮ್.ಎಸ್.ಮುಲ್ಲಾ ಅವರೊಂದಿಗೆ ಸಿಬ್ಬಂದಿಗಳಾದ ರಾಜೇಶ ಪ್ರಭು, ಕೃಷ್ಣಾ ಬಾಳೆಗದ್ದೆ, ಗಜೇಂದ್ರ ಪೂಜಾರ, ಶಿವಕುಮಾರ ನಾಯ್ಕ, ಉಶಾ ಗೌಡಾ, ಪ್ರಸಾದ ನಾಯ್ಕ, ಮೆಹಬೂಬ ಅಲಿ, ಶ್ರೀಧರ ಮೊದಲಾದವರು ಇದ್ದರು. 2018ರ ವರ್ಷಾರಂಭದ ಮೊದಲ ದಿನವೇ ಹಳಿಯಾಳದಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ಭ್ರಷ್ಟ ಅಧಿಕಾರಿಯ ಭರ್ಜರಿ ಬೇಟೆ ನಡೆದಿದ್ದು ಹಳಿಯಾಳದಲ್ಲಿ ಬಿಸಿ ಬಿಸಿ ಚರ್ಚೆಯ ವಿಷಯವಾಗಿದೆ ಅಲ್ಲದೇ ಇನ್ನೂ ಕೆಲವು ಭ್ರಷ್ಟ ಅಧಿಕಾರಿಗಳ ನಿದ್ದೆ ಗೆಡಿಸಿದೆ ಎಂದು ಪ್ರಜ್ಞಾವಂತ ನಾಗರಿಕರು ಹೇಳುತ್ತಿರುವುದು ಕೇಳಿ ಬಂತು. ಪೊಟೊ :- 1ಎಚ್.ಎಲ.ವೈ1 ಹಳಿಯಾಳ: ಪ್ರಮುಖ ಆರೋಪಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಚ್.ವಿಶ್ವನಾಥ.1ಎಚ್.ಎಲ.ವೈ2 ಹಳಿಯಾಳ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಕಚೇರಿ. 1ಎಚ್.ಎಲ.ವೈ3 ಹಳಿಯಾಳ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಪ್ರಯೋಗಾಲಯ ಸಹಾಯಕ ಮಹಾರುದ್ರ ಹೂಲಿ ಅವರನ್ನು ವಿಚಾರಣೆಗೊಳಪಡಿಸಿರುವ ಎಸಿಬಿ ಅಧಿಕಾರಿಗಳು ಚಿತ್ರದಲ್ಲಿ ಮಹಾರುದ್ರ ಇದ್ದಾರೆ.
Leave a Comment