ಹಳಿಯಾಳ : ಪ್ರಪಂಚ ಬದುಕಲು ನೀರು, ಅನ್ನ, ಉತ್ತಮ ವಿಚಾರಗಳು ಮುಖ್ಯವಾಗಿದ್ದು ಅದೇ ರೀತಿ ಕುಡಿಯಲು ನೀರು ಕೆಳುತ್ತಿರುವ ಕಳಸಾ ಬಂಡೂರಿ- ಮಹಾದಾಯಿ ಹೋರಾಟಗಾರ ಹೋರಾಟಕ್ಕೆ ಜಯ ಸಿಗಲಿ ಎಂದು ಉಪ್ಪಿನಬೆಟಗೇರಿಯ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಸಂಕಲ್ಪ ಮಾಡಿದರು. ಸ್ಥಳೀಯ ವೀರಶೈವ, ಲಿಂಗಾಯತ ಮತ್ತು ಸರ್ವಧರ್ಮ ಸಹಯೋಗದೊಂದಿಗೆ ಪಟ್ಟಣದ ಗ್ರಾಮದೇವಿ ಮೈದಾನದಲ್ಲಿ ಜ.10ರವರೆಗೆ ಪ್ರತಿದಿನ ಸಂಜೆ 6.00ರಿಂದ 7.30ರವರೆಗೆ ನಡೆಯುವ ಬಸವಪುರಾಣ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯ ವಾಗಿಯೂ ಶಾಖಾ ವಿರಕ್ತಮಠಗಳನ್ನು ಹೊಂದಿದ ಉಪ್ಪಿನಬೆಟಗೇರಿಯ ವಿರಕ್ತಮಠದ ಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿಯವರು ಪ್ರಪಂಚ ಬದುಕಲು ನೀರು, ಅನ್ನ, ಉತ್ತಮ ವಿಚಾರಗಳು ಮುಖ್ಯವಾಗಿದ್ದು ಭಾವಪರಿಶುದ್ಧಿಗೆ ನಿರ್ಮಲ ಮನಸ್ಸಿಗೆ ಬಸವಣ್ಣನವರು `ಕಂಗಳು ತುಂಬಿದ ಬಳಿಕ ನೋಡಲಿಲ್ಲ, ಕಿವಿಗಳು ತುಂಬಿದ ಕೇಳಲಿಲ್ಲ, ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ, ಮನ ತುಂಬಿದ ಬಳಿಕ ನೆನಯಲಿಲ್ಲ ಮಹಾಂತ ಕೂಡಲಸಂಗಮದೇವನ’ ವಚನದ ಮೂಲಕ ನಾಲ್ಕು ಸೂತ್ರಗಳನ್ನು ಕೊಟ್ಟಿದ್ದಾರೆ. ನದಿಗಳೆಲ್ಲ ಸಮುದ್ರ ಸೇರುವಂತೆ 12ನೇ ಶತಮಾನದಲ್ಲಿ ಎಲ್ಲೇಡೆಯಿಂದ ಆಧ್ಯಾತ್ಮ ಜೀವಿಗಳು ಬಂದು ಕಲ್ಯಾಣ ಸೇರಿದರು. ಹಾಗೆ ಬರಲು ಬಸವಣ್ಣನವರೇನು ಬಂಗಾರ ಕೊಡಲಿಲ್ಲ ಬದಲಿಗೆ ಬಂಗಾರದಂತಹ ಮಾತುಗಳನ್ನು ಕೊಟ್ಟಿದ್ದರೆಂದು ಮಾರ್ಮಿಕವಾಗಿ ನುಡಿದರಲ್ಲದೇ ಹಳಿಯಾಳದಲ್ಲಿ ಎಲ್ಲ ಸಮಾಜದವರೂ ಇದ್ದಾರೆ. ಇದು ಭಾವೈಕ್ಯತೆಗೆ ಹೆಸರಾದ ಪಟ್ಟಣವಾಗಿದೆ ಎಂದರಲ್ಲದೇ ಎಲ್ಲರಿಗೂ ಒಳ್ಳೆಯದು ಮಾಡುವುದೇ ಹಾಗೂ ಸಮಾಜ ಸೇವೆಯೇ ಪೂಜೆಯೆಂದು ಅಭಿಪ್ರಾಯಪಟ್ಟರು. ಶಿರಸಿಯ ಬಣ್ಣದ ಮಠದ ಶ್ರೀ ಶಿವಲಿಂಗ ಸ್ವಾಮೀಜಿ ಇದು ಶರಣರ ನಾಡು, ವಚನ ಸಾಹಿತ್ಯವನ್ನು ಉಳಿಸಿದ ಬೀಡು. ಇಂಥಹ ಸ್ಥಾನದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಬಸವ ಪುರಾಣ ಹಳಿಯಾಳದಲ್ಲಿ ನಡೆಯುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿಯಾಗಿದ್ದು, ಮನುಕುಲ ಉದ್ಧಾರ ಮಾಡುವ ಶಕ್ತಿ ವಚನಗಳಲ್ಲಿದ್ದು, ವಚನಗಳನ್ನು ಅಧ್ಯಯನ ಮಾಡಿ ಬಸವ ಪುರಾಣ ಕೇಳಿದರೇ ನಮ್ಮಲ್ಲಿರುವ ಅಹಂಕಾರ ಅಳಿದು ಸದ್ಭಕ್ತಿಯನ್ನು ಸಾಧಿಸಲು ಸಾಧ್ಯ. ಅದಕ್ಕೇ ಅಥಣಿ ಶಿವಯೋಗಿಗಳಿಗೊಮ್ಮೆ ಒಬ್ಬರು ಬಂದು ಭಗವದ್ಗೀತಾ ಕೊಟ್ಟು ಓದಲು ವಿನಂತಿಸಿದರಂತೆ ಆಗ ಶಿವಯೋಗಿ ಅಪ್ಪಗಳು `ನಾನು ಈಗಾಗಲೇ ಒಂದು ಗೀತೆಯನ್ನು ಓದುತ್ತಿದ್ದೇನೆ. ಅದು ಮುಗಿದಮೇಲೆ ನೋಡೋಣ’ ಎಂದರಂತೆ ಅದಕ್ಕೇ ಆ ವ್ಯಕ್ತಿ ದೇಶದಲ್ಲಿ `ಭಗವದ್ಗೀತೆ’ ಬಿಟ್ಟರೇ ಮತ್ತಾವ ಗೀತೆಯೂ ಇಲ್ಲವಲ್ಲಾ ಅಂದರಂತೆ. ಅದಕ್ಕೆ ಅಪ್ಪಗಳು ಬಸವಗೀತೆ ಇದೆ. ಅದನ್ನು ಓದುತ್ತಿರುವೆ ಎಂದರಂತೆ ಅಷ್ಟೊಂದು ಶಕ್ತಿ ವಚನಸಾಹಿತ್ಯಕ್ಕಿದೆ ಎಂದರಲ್ಲದೇ ಶಿಶುನಾಳ ಶರೀಫರು `18 ಪುರಾಣಗಳು ನನ್ನ ಬಗಲಲ್ಲಿ ಬಸವಪುರಾಣ ನನ್ನ ತಲೆಯ ಮೇಲೆ’ ಎನ್ನುತ್ತಿದ್ದರೆಂದು ಸ್ಮರಿಸಿದರು. ಕೆ.ಕೆ.ಹಳ್ಳಿ ಸಿದ್ಧಾರೂಢ ಮಠದ ಸುಬ್ರಮಣ್ಯ ಸ್ವಾಮೀಜಿ, ಆದಿಶಕ್ತಿ ಪೀಠದ ಕೃಷ್ಣಾನಂದ ಭಾರತಿ ಸ್ವಾಮೀಜಿ, ಮಾದನ ಹಿಪ್ಪರಗಿ ಶ್ರೀಗಳು ಸಾಂದರ್ಭಿಕ ಮಾತನಾಡಿದರು. ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಿ, ಅ.ಭಾ.ವೀ.ಮಹಾಸಭೆಯ ತಾಲೂಕಾಧ್ಯಕ್ಷ ಎಂ.ಬಿ.ತೋರಣಗಟ್ಟಿ, ಜಿಲ್ಲಾಧ್ಯಕ್ಷ ಶ್ರೀಕಾಂತ ಹೂಲಿ ಇತರರು ಇದ್ದರು.
Leave a Comment