ಹಳಿಯಾಳ: ಕಳ್ಳಭಟ್ಟಿ ಸರಾಯಿ ಹಿಡಿಯಲು ಹೋದ ಪೋಲಿಸರಿಗೆ ಸಿಕ್ಕಿದ್ದು ಸುಮಾರು 3 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಸಾಗವಾಣಿ ಮರದ ತುಂಡುಗಳು ಹಾಗೂ ಹಲಗೆಗಳು ಇಂತಹ ವಿದ್ಯಮಾನ ನಡೆದಿದ್ದು ತಾಲೂಕಿನ ಗರಡೊಳ್ಳಿ ಗ್ರಾಮದ ಬಳಿ. ಹೌದು ಇಂತದೊಂದು ವಿಚಿತ್ರ ವಿದ್ಯಮಾನ ನಡೆದಿರುವುದು ಶುಕ್ರವಾರ ರಾತ್ರಿ ತಾಲೂಕಿನ ಗರಡೊಳ್ಳಿ ಗ್ರಾಮದಿಂದ ವಾಡಾಕ್ಕೆ ಹೋಗುವ ರಸ್ತೆಯಲ್ಲಿ ಎಂದು ಪೋಲಿಸರು ತಿಳಿಸಿದ್ದಾರೆ. ಹಳಿಯಾಳ ಠಾಣೆಯ ಸಿಪಿಐ ಸುಂದ್ರೇಶ್ ಹೊಳೆಣ್ಣವರ ಅವರು ಗರಡೊಳ್ಳಿ ಭಾಗದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ಗರಡೊಳ್ಳಿ ಗ್ರಾಮದ ರಸ್ತೆಯ ಅಕ್ಕಪಕ್ಕದಲ್ಲಿ ಕಳ್ಳಭಟ್ಟಿ ಸರಾಯಿಯನ್ನು ಸಾಗಾಣಿಕೆ ಮಾಡಲು ತೆಗ್ಗುಗಳಲ್ಲಿ ದಾಸ್ತಾನು ಇಟ್ಟ ಬಗ್ಗೆ ಬಂದ ಮಾಹಿತಿಯಂತೆ ಸಿಪಿಐ ಅವರು ತಮ್ಮ ಸಿಬ್ಬಂದಿಗಳೊಂದಿಗೆ ತೆರಳಿ ಹುಡುಕಾಟ ನಡೆಸುತ್ತಿರುವಾಗ ತೆಗ್ಗುಗಳಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಬೆಲೆಬಾಳುವ 5 ಸಾಗವಾಣಿ ತುಂಡುಗಳು ಹಾಗೂ 7 ಸಾಗವಾಣಿ ಹಲಗೆಗಳು ದೊರಕಿದ್ದು ಆ ಸಂದರ್ಭದಲ್ಲಿ ಯಾರು ಸಿಗದ ಕಾರಣ ಪೋಲಿಸ್ ಇಲಾಖೆಯ ಡಿ.ಆರ್.ವ್ಯಾನಿನಲ್ಲೇ ಕಟ್ಟಿಗೆಗಳನ್ನು ಹಾಕಿಕೊಂಡು ಠಾಣೆಗೆ ಒಪ್ಪಿಸಲಾಗಿದೆ ಎನ್ನಲಾಗಿದೆ. ಇವುಗಳನ್ನು ಯಾರೋ ಕಳ್ಳರು ಸಾಂಬ್ರಾಣಿ ವಲಯ ಅರಣ್ಯದಲ್ಲಿ ಎಲ್ಲಿಯೋ ಸಾಗವಾಣಿ ಮರಗಳನ್ನು ಕಡಿದು ಅವುಗಳನ್ನು ಕೆತ್ತಿ ಅಕ್ರಮವಾಗಿ ಸಾಗಾಣಿಕೆ ಮಾಡಲು ಗರಡೊಳ್ಳಿಯಿಂದ ವಾಡಾಕ್ಕೆ ಹೋಗುವ ರಸ್ತೆಯ ಬದಿ ಗಿಡಗಂಟಿಗಳು ಇರುವ ತೆಗ್ಗು ಪ್ರದೇಶದಲ್ಲಿ ದಾಸ್ತಾನು ಮಾಡಿ ಹೋಗಿದ್ದು ಯಾರೋ ಆರೋಪಿತರ ಮೇಲೆ ಕಲಂ 24(ಇ) ಕರ್ನಾಟಕ ಅರಣ್ಯ ಕಾಯ್ದೆ, ಮತ್ತು 379 ಐಪಿಸಿ ನೇದರಂತೆ ಸಿಪಿಐ ಸುಂದ್ರೇಶ್ ಅವರು ದೂರು ನೀಡಿದ್ದಾರೆ. ಹಳಿಯಾಳ ಠಾಣೆಯ ಮುಖ್ಯಪೇದೆ ಸುರೇಶ ಗೊಂಜಾಳಿ ಅವರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರಿಂದ ನ್ಯಾಯಾಲಯದ ಆದೇಶದಂತೆ ವಶಪಡಿಸಿಕೊಂಡಿರುವ ಮಾಲನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಪೋಲಿಸ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆ ನೀರ್ಲಕ್ಷ್ಯ:- ಪೋಲಿಸ್ ಇಲಾಖೆಗೆ ಅಕ್ರಮ ಕಟ್ಟಿಗೆಗಳು ದೊರಕಿದ್ದರಿಂದ ಸಾಂಬ್ರಾಣಿ ವಲಯ ಅರಣ್ಯಾಧಿಕಾರಿಯವರ ಕರ್ತವ್ಯದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದು ಬೃಹತ್ ಮರವನ್ನು ಕಡಿದು ಅವುಗಳನ್ನು ತುಂಡುಗಳಾಗಿ ಮಾರ್ಪಡಿಸಿರುವುದು ವ್ಯವಸ್ಥಿತ ಸಂಚು ಎಂದು ಹೇಳಲಾಗುತ್ತಿದ್ದು ಈ ಭಾಗದಲ್ಲಿ ಅರಣ್ಯ ಕಳ್ಳರ ಹಾವಳಿ ಜಾಸ್ತಿಯಾಗಿದೆ ಎಂದು ಆ ಭಾಗದ ಮುಖಂಡ ರಾಮಚಂದ್ರ ವಡ್ಡರ ಮಾಧ್ಯುಮಕ್ಕೆ ತಿಳಿಸಿದ್ದು ಇಲಾಖೆಯವರ ಕಾರ್ಯಪ್ರವೃತ್ತರಾಗುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ತನಿಖೆ ನಡೆಸಲಾಗುವುದು:- ಲಕ್ಷಾಂತರ ರೂ. ಬೆಲೆ ಬಾಳುವ ಸಾಗವಾಣಿ ಮರದ ತುಂಡುಗಳು ದೊರಕಿದ್ದರಿಂದ ಆ ಮರ ಎಲ್ಲಿ ಕಡಿಯಲಾಗಿದೆ ಇದರಲ್ಲಿ ಯಾರ್ಯಾರು ಶಾಮಿಲಾಗಿದ್ದಾರೆ ಎನ್ನುವ ಕುರಿತು ಅರಣ್ಯ ಇಲಾಖೆಯು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಿದ್ದು ತಪ್ಪಿತಸ್ಥರನ್ನು ಕೂಡಲೇ ಕಂಡು ಹಿಡಿಯಲಾಗುವುದು ಎಂದು ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
Leave a Comment