ಹೊನ್ನಾವರ: ಜಿಲ್ಲೆಯನ್ನು ಕೋಮುದಳ್ಳುರಿಯಲ್ಲಿ ಬೇಯುವಂತೆ ಮಾಡಿದ್ದ ಪರೇಶ ಮೇಸ್ತ ಹತ್ಯೆ ಪ್ರಕರಣದ ತನಿಖೆ ಅದೇಕೋ ಹಳ್ಳ ಹಿಡಿಯುವಂತೆ ಕಾಣುತ್ತಿದೆ. “ಸಾವಿನ ಪೂರ್ವ ರಾಜಕೀಯ” “ಸಾವಿನ ನಂತರದ ರಾಜಕೀಯ” ಎಂಬ ದ್ವಿಪಥದ ವ್ಯೂಹದೊಳಗೆ ಸಿಲುಕಿ ನರಳಾಡುತ್ತಿರುವ ನ್ಯಾಯ ಕೊನೆಯುಸಿರು ಬಿಡುವ ಹಂತಕ್ಕೆ ತಲುಪಿರುವ ಕುರಿತು ಸಂದೇಹ ಮೂಡುವಂತಾಗಿದೆ. ರಾಜಕೀಯೇತರವಾಗಿ ನಡೆಯುವ ಪ್ರಕರಣಗಳಲ್ಲಿ ಆರೋಪಿಗಳನ್ನು ಒಂದೆರಡು ದಿನದಲ್ಲೋ ವಾರದೊಳಗೆಯೋ ಕಾಕಿಗಳು ಸೇರೆ ಹಿಡಿಯುತ್ತಾರೆ. ಆದರೆ ರಾಜಕಾರಣಿಗಳು ಪ್ರವೇಶಿಸುವ ಪ್ರಕರಣಗಳಲ್ಲಿ ಮಾತ್ರ ತನಿಖೆ ಹಳ್ಳ ಹಿಡಿಯುತ್ತಿದೆ. ಸಾಕ್ಷಿಗಳು ನಾಶವಾಗುತ್ತವೆ. ಪ್ರಕರಣವನ್ನು ಕಣ್ಣಾರೆ ಕಂಡವರೂ ದಂಗಾಗುವಂತೆ ಸಾಕ್ಷಿಗಳನ್ನು ತಿರುಚುತ್ತಾರೆ. ಜನಸಾಮಾನ್ಯರನ್ನು ಹೇಗೆ ಬೇಕಾದರೂ ಮಂಗ ಮಾಡುತ್ತಾರೆ. ಇಷ್ಟೆಲ್ಲಾ ನಡೆಯುವುದು ರಾಜಕೀಯ ಪುಢಾರಿಗಳ ಸ್ವಾರ್ಥದಿಂದಾಗಿ, ಪರೇಶ ಪ್ರಕರಣದಲ್ಲಿ ರಾಜಕೀಯ ಬಣ್ಣ ಲೇಪನದ ಪ್ರಸ್ತಾಪ ಸುಖಾಸುಮ್ಮನೆ ಮಾಡುತ್ತಿಲ್ಲ. ಇದಕ್ಕೆ ನಾನಾ ಕಾರಣಗಳಿವೆ.
ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದು ಓಳು ಬರೀ ಓಳು..!?: ಪರೇಶ ಮೇಸ್ತ ಹತ್ಯೆಯ ಪ್ರಕರಣದಿಂದ ಜಿಲ್ಲಾದ್ಯಂತ ಗಲಭೆಯು ತೀವ್ರ ಸ್ವರೂಪಕ್ಕಿಳಿಯುತ್ತಿದ್ದಂತೆಯೇ ಎಚ್ಚೇತ್ತ ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುತ್ತೇನೆ ಎಂದು ಬಿಸೋ ದೊಣ್ಣೆಯಿಂದ ತಪ್ಪಿಸಿಕೊಂಡಿತ್ತು. ಸಿಬಿಐ ತನಿಖೆಯಾದರೆ ಪರೇಶ ಸಾವಿಗೆ ನ್ಯಾಯ ಸಿಗುತ್ತೇ ಎಂಬುದು ಕೇವಲ ಕುಟುಂಬದವರ ನಂಬಿಕೆಯಾಗಿರಲಿಲ್ಲ, ಬದಲಿಗೆ ಅದು ಇಡಿ ಜಿಲ್ಲೆಯ ಜನತೆಯ ನಂಬಿಕೆಯಾಗಿತ್ತು. ಅಲ್ಲದೇ ಸಿಬಿಐ ತನಿಖೆಗೆ ಪ್ರಕರಣವನ್ನು ಒಪ್ಪಿಸುತ್ತೇವೆ ಎಂದು ಅಧೀಕೃತಗೊಳಿಸಿದ ಮೇಲೆ ವಿಕೋಪಕ್ಕೆ ತೆರಳಿದ್ದ ಪರಿಸ್ಥಿತಿ ಶಾಂತ ರೂಪಕ್ಕೆ ತಿರುಗಿತ್ತು ಆದರೆ ಹತ್ಯೆ ನಡೆದು ತಿಂಗಳಾದರು ಸಿಬಿಐ ತನಿಖೆಗೆ ಎತ್ತಿಕೊಂಡ ಸುದ್ದಿಯೇ ಇಲ್ಲ. ಸಿಬಿಐ ಅಧಿಕಾರಿಗಳು ಈಗ ಬರ್ತಾರೆ, ಆಗ ಬರ್ತಾರೆ ಎಂದು ಪರೇಶನ ಕುಟುಂಬದವರು ತಿಂಗಳಿಂದ ಶಾಂತ ಮೂರ್ತಿಯಂತೆ ಕಾದಿದ್ದೇ ಕಾದಿದ್ದು. ಆದರೆ ಸಿಬಿಐ ಮಾತ್ರ ಇತ್ತ ಸುಳಿಯಲೇ ಇಲ್ಲ. ಯಾಕೆಂದರೆ ಸಿಬಿಐಗಿನ್ನೂ ಪ್ರಕರಣದ ತನಿಖೆಯ ಕೋರಿಕೆ ಪತ್ರವನ್ನೇ ನೀಡಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸಿಬಿಐಗೆ ಒಪ್ಪಿಸಲು ವಿಳಂಬವೇಕೆ?.. ಯಾವುದೇ ಪ್ರಕರಣವಿರಲಿ.. ತನಿಖೆಯನ್ನು ಸಿಬಿಐಗೆ ಹಸ್ತಾಂತರ ಮಾಡಿದ ತಕ್ಷಣದಿಂದಲೇ ಅದು ಕಾರ್ಯೊನ್ಮುಖವಾಗುತ್ತದೆ. ಅಖಾಡಕ್ಕಿಳಿದು ತಮ್ಮದೇ ಶೈಲಿಯ ತನಿಖೆಗೆ ಕ್ಷಿಪ್ರಗತಿಯ ಚಾಲನೆ ನೀಡುತ್ತದೆ. ಆದರೆ ಪರೇಶ ಸಾವಿನ ತನಿಖೆಯಲ್ಲಿ ಮಾತ್ರ ತಿಂಗಳಾದರೂ ಸಿಬಿಐ ಸುಳಿವಿಲ್ಲ. ಕಾರಣವಿಷ್ಟೇ, ಇನ್ನೂ ತನಕ ಸಿಬಿಐಗೆ ಕೋರಿಕೆ ಪತ್ರವನ್ನೇ ರಾಜ್ಯ ಸರಕಾರ ನೀಡಿಲ್ಲ ಎನ್ನಲಾಗಿದೆ. ಇದೊಂದು ಜನರನ್ನು ಬೆಪ್ಪು ತಕ್ಕಡಿಯನ್ನಾಗಿಸುವ ರಾಜಕೀಯ ಹುನ್ನಾರ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ. ಸಿಬಿಐಗೆ ಹಸ್ತಾಂತರಿಸುವ ಮುನ್ನ ಹತ್ಯೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ನಾಶಪಡಿಸಲೆಂದೇ ಯತ್ನಿಸಿದ ಷಡ್ಯಂತರವಿದು ಎಂಬ ಶಂಕೆ ಈಗ ಸಹಜವಾಗಿ ಎಲ್ಲರ ಬಾಯಿಂದ ಕೇಳಿಬರುತ್ತಿದೆ. ಮಳೆ ನಿಂತು ಹೋದ ಮೇಲೆ ಹನಿ ನೀರಿದ್ದರೂ ಸಹ ಸಿಬಿಐ ಅಲರ್ಟ ಆಗುತ್ತೆ ಎನ್ನುವ ವಿಚಾರ ತಿಳಿದಿರುವುದರಿಂದಲೇ ನೀರಿನ ಹನಿಗಳನ್ನು ಒರೆಸುವ ಕಾರ್ಯ ಗೌಪ್ಯವಾಗಿ ನಡೆದಿದೆಯೇ ಎಂದು ಹೊನ್ನಾವರದ ಬೀದಿಗಳಲ್ಲಿ ಜನ ಸಂದೇಹ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಸ್ಥಳೀಯ ಪೋಲಿಸರು ತನಿಖೆ ನಡೆಸುತ್ತಿರುವುದೇಕೆ?.. ಅತ್ತ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದೆ ಎಂದು ಹೇಳಿಕೊಳ್ಳುತ್ತಲೇ ಬಂದಿದೆ. ಸಿಬಿಐಗೆ ಹಸ್ತಾಂತರವಾಗಿದ್ದೇ ನಿಜವಾದರೆ ತನಿಖೆಯಲ್ಲಿ ಸ್ಥಳೀಯ ಪೋಲಿಸರು ತನಿಖೆಯಲ್ಲಿ ಮಧ್ಯ ಪ್ರವೇಶ ಮಾಡುವಂತಿಲ್ಲ. ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಒಂದು ಪ್ರಕರಣದ ತನಿಖೆ ಈ ಪಾಟಿ ಹಳ್ಳ ಹಿಡಿಯುತ್ತದೆ ಎಂದರೆ ಅದು ಆಡಳಿತ ವ್ಯವಸ್ಥೆ ಕೆಟ್ಟು ಕೆರ ಹಿಡಿದ ಸೂಚನೆ, ಕಳೆದ ಒಂದು ವಾರದ ಹಿಂದಿನ ತನಕವೂ ಸ್ಥಳೀಯ ಪೋಲಿಸರು ತನಿಖೆ ನಡೆಸುತ್ತಲೇ ಬಂದಿದ್ದಾರೆ. ಪರೇಶ ಮನೆಯಲ್ಲಿ ತನಿಖೆ ನಡೆದಿದೆ, ಪರೇಶ ಸ್ನೇಹಿತರ ವಿಚಾರಣೆ ನಡೆದಿದೆ, ಸ್ಥಳೀಯ ಪೋಲಿಸರೇ ತನಿಖೆ ನಡೆಸಿ ಇತ್ಯರ್ಥಗೊಳಿಸುವುದಾದರೇ ‘ಸಿಬಿಐಗೆ ಒಪ್ಪಿಸುತ್ತೇನೆ’ ಎಂದು ರಾಜ್ಯ ಸರ್ಕಾರ ಹೇಳಿದ್ದು ಯಾವ ಪುರುಷಾರ್ಥಕ್ಕೆ? ಗಲಭೆಯ ವಿಚಾರದಲ್ಲಿ ಸ್ಥಳೀಯ ಪೋಲಿಸರ ನಡೆ ಮೇಲೆಯೇ ಹಲವು ಅಪವಾದಗಳು ಇರುವಾಗ ತನಿಖೆಯಲ್ಲಿ ಪ್ರಾಮಾಣಿಕತೆ ಮೆರೆಯುತ್ತಾರೆ ಎನ್ನುವದನ್ನು ನಂಬಲು ಸ್ಥಳೀಯರು ತಯಾರಿಲ್ಲ.
ಒಂದೆಡೆ ಗಲಭೆಯಲ್ಲಿ ಪಾಲ್ಗೊಂಡ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಬಂಧನ ಪ್ರಕ್ರೀಯೆ ಈಗಲೂ ನಡೆಯುತ್ತಿದೆ. ಮನೆ, ಮಕ್ಕಳನ್ನು ಬಿಟ್ಟು ಅದೆಷ್ಟೋ ಜನ ಈಗಲೂ ಕಣ್ತಪ್ಪಿಸಿಕೊಂಡಿದ್ದಾರೆ. ದೀಪಕ ರಾವ್ ಹತ್ಯೆಯ ನಂತರ ರಾಜ್ಯದ ಚಿತ್ತ ಅತ್ತ ಹೊರಳಿದೆ. ಇನ್ನೊಂಡೆದೆ ಸಿಬಿಐ ರಂಗ ಪ್ರವೇಶವಾಗುವುದೇ ಅನುಮಾನ ಎಂಬಲ್ಲಿಗೆ ಪ್ರಕರಣ ಸಾಗಿದೆ. ನ್ಯಾಯವನ್ನೇ ಗಲ್ಲಿಗೇರಿಸುವ ಚಾಣಾಕ್ಷ ಪುಡಾರಿಗಳ ಕಫಿಮುಷ್ಟಿಯೊಳಗೆ ಪರೇಶ ಸಾವಿನ ನ್ಯಾಯ ವಿಲವಿಲನೆ ಒದ್ದಾಡುತ್ತಿದೆ. ಸಿಬಿಐಗೆ ಪ್ರಕರಣದ ತನಿಖೆಯ ಕೋರಿಕೆಯ ಪ್ರತಿ ತಲಪಿದೆಯಾ ಎಂಬುದು ಮೊದಲು ತಿಳಿದು ಬರಬೇಕು. ಸಿಬಿಐಗೆ ಹಸ್ತಾಂತರಿಸುವಲ್ಲಿಯೂ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಪಾತ್ರದಾರಿಗಳು ಯಾರ್ಯಾರು ಎಂಬುದೂ ಸಹ ಬೆಳಕಿಗೆ ಬರಬೇಕಿದೆ.
ಪರೇಶ ಮೇಸ್ತನ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಂದೆ ಕಮಲಾಕರ ಮೇಸ್ತ ನೀಡಿದ ದೂರಿನನ್ವಯ ಇನ್ನೂ ಅನೇಕ ಆರೋಪಿಗಳನ್ನು ಬಂಧಿಸಿಲ್ಲ. ಬಂಧಿತ ಕೆಲವು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
Leave a Comment