ಹೊನ್ನಾವರ : ಅವಧೂತತ್ವ, ಆಧ್ಯಾತ್ಮ, ತ್ಯಾಗ, ಸನ್ಯಾಸ, ಮೊದಲಾದ ಶ್ರೇಷ್ಠ ಮೌಲ್ಯಗಳನ್ನು ಒಳಗೊಂಡಿದ್ದ ಶ್ರೀ ಶ್ರೀಧರ ಸ್ವಾಮಿಗಳ ಪ್ರವಚನಗಳನ್ನು ಅಕ್ಷರ ರೂಪದಲ್ಲಿ ಕಾದಿಡುತ್ತಿರುವುದು ಆಧ್ಯಾತ್ಮ ಲೋಕಕ್ಕೆ ದೊಡ್ಡ ಕೊಡುಗೆ ಎಂದು ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಶ್ರೀಧರ ಸ್ವಾಮಿಗಳ ಚರಿತ್ರೆಯ 450ಪುಟಗಳನ್ನೊಳಗೊಂಡ ಸಚಿತ್ರ ಗ್ರಂಥದ ದ್ವಿತೀಯ ಮುದ್ರಣವನ್ನು ಬಿಡುಗಡೆ ಮಾಡಿ ಶುಭಹಾರೈಸಿದರು. ಸದ್ಗುರು ಶ್ರೀಧರ ಸ್ವಾಮಿ ಚರಿತಂ ಎಂಬ ಈ ಕೃತಿಯನ್ನು ನಾಡಿನ ಹಿರಿಯ ಪತ್ರಕರ್ತ ಜಿ.ಎ. ನರಸಿಂಹಮೂರ್ತಿ ಕನ್ನಡದಲ್ಲಿ ರಚಿಸಿದ್ದರು. ಪ್ರಸಿದ್ಧ ಲೇಖಕ, ಇಂಗ್ಲೀಷ್ ಪ್ರಾಧ್ಯಾಪಕ ಪ್ರೋ.ಎಲ್.ಎಸ್. ಶೇಷಗಿರಿ ರಾವ್ ಇದನ್ನು ಇಂಗ್ಲೀಷ್ಗೆ ಅನುವಾದ ಮಾಡಿದ್ದರು. ಶ್ರೀಧರ ಸ್ವಾಮಿಗಳೊಂದಿಗೆ ಬಹುಕಾಲ ಸೇವೆಗೆ ತೊಡಗಿಕೊಂಡಿದ್ದ ಜನಾರ್ಧನ ರಾಮದಾಸಿ ಮತ್ತು ಜಾನಕಿ ಅಕ್ಕ ಇವರು ಶ್ರೀಗಳು 4ತಿಂಗಳು ಚಾತುರ್ಮಾಸ್ಯಕ್ಕೆ ಏಕಾಂತದಲ್ಲಿ ಕುಳಿತಾಗ ಧ್ವನಿವರ್ಧಕದಲ್ಲಿ ಆಶೀರ್ವಚನ ನೀಡುತ್ತಿದ್ದರು. ಅದನ್ನು ಧ್ವನಿಗ್ರಹಣ ಮಾಡಿಟ್ಟುಕೊಂಡಿದ್ದ ಜನಾರ್ಧನ ಅವರು ಕೃತಿ ರೂಪದಲ್ಲಿ ಇಳಿಸಲು ನಾಡಿನ ಹಿರಿಯ ಸಂಸ್ಕøತ ವಿದ್ವಾಂಸರಾದ ಸೋ.ತಿ. ನಾಗರಾಜ ಮತ್ತು ಅವರ ಬಳಗದ ನೆರವು ಪಡೆದಿದ್ದರು. ಶ್ರೀಧರರು ತಮ್ಮ ಉಪನ್ಯಾಸ ಕೃತಿ ರೂಪದಲ್ಲಿ ಪ್ರಕಟವಾಗಿ ಮುಂದಿನ ಪೀಳಿಗೆಗೆ ಸಹಾಯವಾಗಬೇಕು ಎಂದು ಬಯಸಿದ್ದರು. ಅಂತೆಯೇ ಮೊದಲ ಇಂಗ್ಲೀಷ್ ಕೃತಿ 20ವರ್ಷಗಳ ಹಿಂದೆ ಅಗಸ್ಟ್ 9, 1997ರಂದು ಬೆಂಗಳೂರಿನಲ್ಲಿ ವೀರೇಂದ್ರ ಹೆಗ್ಗಡೆಯವರಿಂದಲೇ ಬಿಡುಗಡೆಯಾಗಿತ್ತು. ಆಗ ಹೆಗ್ಗಡೆಯವರು ಶ್ರೀಧರರ ಎಲ್ಲ ಆಶೀರ್ವಚನವನ್ನು ತಪ್ಪಿಲ್ಲದೆ ವಿದ್ವಾಂಸರಿಂದ ಬರೆಸಿ, ಉತ್ತಮವಾಗಿ ಮುದ್ರಿಸಿ, ಪ್ರಕಟಿಸಿ ಎಂದಿದ್ದರು. ಅವರ ಹಾರೈಕೆಯಂತೆ ತೊಂದರೆ ಇಲ್ಲದೆ 15ವಚನಾಮೃತ ಧಾರೆ ಕೃತಿಗಳು ಕನ್ನಡದಲ್ಲಿ, ಮರಾಠಿಯಲ್ಲಿ, ಕೆಲವು ಇಂಗ್ಲೀಷ್ನಲ್ಲಿ ಪ್ರಕಟವಾಗಿದೆ. ಎಲ್ಲ ಕೃತಿಗಳು ಭಕ್ತರ ಕೈ ಸೇರಿದ್ದು ಪುನಃ ಮುದ್ರಣ ಆರಂಭವಾಗಿದೆ. ಈಗ ಪುನಃ ಧರ್ಮಸ್ಥಳದಲ್ಲಿ ಶ್ರೀ ವೀರೇಂದ್ರ ಹೆಗ್ಗಡೆಯವರ ಹಸ್ತದಿಂದಲೇ ದ್ವಿತೀಯ ಮುದ್ರಣ ಬಿಡುಗಡೆಯಾಗಿದೆ ಎಂದು ಜನಾರ್ಧನ ಅವರು ಹೇಳಿದ್ದು ಭಕ್ತಾಧಿಗಳು ಶ್ರೀಧರರ ಚಿಂತನೆ ಅರಿಯಲು ಕೃತಿ ಸಹಕಾರಿ ಎಂದು ಹೇಳಿದ್ದಾರೆ. ಶ್ರೀಧರರ ಬಾಲ್ಯದಿಂದ ಆರಂಭಿಸಿ, ಅವರ ಜೀವನದ ಪ್ರಮುಖ ಘಟನಾವಳಿ ಮತ್ತು ಸಮಾಧಿಯವರೆಗಿನ ವರ್ಣ ಚಿತ್ರಗಳನ್ನೊಳಗೊಂಡ ಕೃತಿ ಸಂಗ್ರಾಹ್ಯವಾಗಿದೆ.
Leave a Comment