ಹಳಿಯಾಳ:
ನೇತ್ರದಾನದಿಂದ ಸ್ಪೂರ್ತಿಗೊಂಡ ಹಳಿಯಾಳ ತಾಲೂಕಿನ ಮದ್ನಳ್ಳಿ ಗ್ರಾಮದ ‘ಯುವಬಳಗ’ ತಂಡದ 15 ಯುವಕರು ನೇತ್ರದಾನ ಮಾಡುವ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಇತರ ಯುವಕರಿಗೆ ಪ್ರೇರಣೆ ನೀಡಿರುವ ವಿಶಿಷ್ಠ ಕಾರ್ಯಕ್ರಮ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಜೀವಿತಾವಧಿಯ ನಂತರ ಅಂಧರ ಬಾಳಿಗೆ ಬೆಳಕಾಗುವ ಸದುದ್ದೇಶಕ್ಕಾಗಿ ಎಲ್ಲಾ ‘ಯುವಬಳಗ’ ತಂಡದ ಸದಸ್ಯರು ಸ್ವಇಚ್ಚೆಯಿಂದ ನೇತ್ರದಾನ ಮಾಡಲು ತಾವಾಗೆ ಮುಂದೆ ಬಂದು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಬಳಿಕ ಸರಳ ಸಮಾರಂಭದಲ್ಲಿ ನೇತ್ರಾಧಿಕಾರಿಗಳ ಎದುರು ಮರಣಾ ನಂತರ ತಮ್ಮ ನೇತ್ರಗಳನ್ನು ಸ್ವ ಇಚ್ಚೆಯಿಂದ ದಾನ ಮಾಡುವ ನೇತ್ರದಾನದ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. ಪಟ್ಟಣದಿಂದ 10 ಕೀಮಿ ಅಂತರದಲ್ಲಿರುವ ಮದನಳ್ಳಿ ಗ್ರಾಮದ ‘ಯುವಬಳಗ’ ತಂಡದ ಸದಸ್ಯರಾದ ನಾರಾಯಣ ಮೇತ್ರಿ, ಸಂಜಯ ಶಿರೋಡಕರ, ಸಂಜು ಬಡಿಗೇರಿ, ಬಾಳಪ್ಪಾ ಚಿಕ್ಕೋಡಿ, ಆನಂದ ಗಳಗಿ, ಮಲ್ಲೇಶ ಮೇತ್ರಿ, ರಾಕೇಶ ಚಲವಾದಿ, ಸಂಜು ಕರ್ಲೆಕರ, ಸಾತಪ್ಪ ಕಾನೋಜಿ, ರಶೀದ ಮಕಾಂದರ, ಹೇಮಂತ ಬಂಬರಗಿ, ಗಜಾನಂದ ಅಪ್ಪನವರ, ಸುನೀಲ ಸೇರಿದಂತೆ ಹಲವು ಗೆಳೆಯರು ನೇತ್ರದಾನ ಮಾಡಿ ಇತರರಿಗೆ ಸ್ಪೂರ್ತಿ ತುಂಬಿದ ಯುವಕರಾಗಿದ್ದಾರೆ. ಹಳಿಯಾಳದ ತಾಲೂಕಾ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ| ರಮೇಶ ಕದಂ, ನೇತ್ರ ವಿಭಾಗದ ವೈದ್ಯಾಧಿಕಾರಿಗಳಾದ ಡಾ.ಸೀಮಾ ಬಿರ್ಜೆ ಹಾಗೂ ನೇತ್ರಧಿಕಾರಿ ಸದಾನಂದ ಶಿರಿಯಣ್ಣವರ ಇತರ ಪ್ರಮುಖ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು. ನೇತ್ರದಾನ ಕಾರ್ಯಕ್ರಮದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಯುವಕರು ಮುಂದಿನ 2 ತಿಂಗಳ ಅವಧಿಯಲ್ಲಿ ಮದ್ನಳ್ಳಿ ಗ್ರಾಮದಲ್ಲಿ ಪ್ರತಿ ಮನೆಯಿಂದ ಒರ್ವರು ನೇತ್ರದಾನಕ್ಕೆ ಮುಂದೆ ಬರುವಂತೆ ಪ್ರೇರಣೆ ನೀಡಲು ವಿಶಿಷ್ಠ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
Leave a Comment