ಹೊನ್ನಾವರ:
ಪ್ರಕೃತಿಗೆ ಅದಮ್ಯ ಶಕ್ತಿಯಿದ್ದು ಇದರೊಟ್ಟಿಗೆ ಸಂಘರ್ಷಕ್ಕಿಳಿಯದೆ ಅನ್ಯೋನ್ಯತೆಯ ಸಂಬಂಧವನ್ನು ಹೊಂದುವ ಮೂಲಕ ಬದುಕಿನಲ್ಲಿ ಆನಂದ ಪಡೆಯಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಚನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು.
ಅರಣ್ಯ ಇಲಾಖೆಯ ಹೊನ್ನಾವರ ವಿಭಾಗ,ಕಾಮಕೋಡ ದುರ್ಗಮ್ಮ ದೇವಸ್ಥಾನ,ಕಾಮಕೋಡ ಪರಿಸರ ಕೂಟ,ಕಸಾಪ ಹೊನ್ನಾವರ ತಾಲ್ಲೂಕು ಘಟಕ,ಎಸ್ಡಿಎಂ ಕಾಲೇಜಿನ ಬಯೋ ಕ್ಲಬ್,ಎನ್ಎಸ್ಎಸ್,ರೋಟರ್ಯಾಕ್ಟ್,ರೆಡ್ಕ್ರಾಸ್ ಘಟಕಗಳ ಆಶ್ರಯದಲ್ಲಿ ಹಾಚಲಮಕ್ಕಿಯ ಕಾಮಕೋಡ ದುರ್ಗಮ್ಮ ದೇವರಕಾಡಿನಲ್ಲಿ ನಡೆದ “ಪ್ರಕೃತಿ ಶಿಬಿರ ಹಾಗೂ ಕಾಡು-ಬೆಳದಿಂಗಳಲ್ಲಿ ಭಾವಲಹರಿ’ ಎಂಬ ವೈಶಿಷ್ಟ್ಯಪೂರ್ಣ ಪರಿಸರ ಸ್ನೇಹಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
“ಪರಿಸರಕ್ಕೆ ಧಕ್ಕೆಯಾದರೆ ಅದರ ಪರಿಣಾಮ ಆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ.ಪರಿಸರ ಕಾಳಜಿಯ ಕಾರ್ಯಕ್ರಮಕ್ಕೆ ಜಾಗತಿಕ ಮಹತ್ವವಿದೆ’ ಎಂದು ಅವರು ಹೇಳಿದರು.
ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್.ಹೆಗಡೆ ಮಾತನಾಡಿ,”ಅರಣ್ಯ ಸೇರಿದಂತೆ ಪರಿಸರದ ರಕ್ಷಣೆ ಒಂದು ಸಂಘಟಿತ ಪ್ರಯತ್ನವಾಗಬೇಕು.ಕಲೆ,ಸಂಸ್ಕøತಿ,ಪರಿಸರ,ಆಧ್ಯಾತ್ಮದ ನಡುವೆ ಅವಿನಾಭಾವ ಸಂಬಂಧವಿದೆ’ ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ರವೀಂದ್ರ ಪಿ.ಸಿ. ಮಾತನಾಡಿ”ಅರಣ್ಯ ರಕ್ಷಣೆ ಸಮಾಜದ ಎಲ್ಲರ ಹೊಣೆಯಾಗಿದ್ದು ಅರಣ್ಯ ಇಲಾಖೆ ಜನರ ಸಹಭಾಗಿತ್ವದಲ್ಲಿ ಪರಿಸರಕ್ಕೆ ಪೂರಕವಾದ ವಿವಿಧ ಯೋಜನೆಗಳನ್ನು ರೂಪಿಸಿದೆ’ ಎಂದು ತಿಳಿಸಿದರು.
ಐಐಎಸ್ಸಿಯ ವಿಜ್ಞಾನಿ ಡಾ.ಜಿ.ಆರ್.ರಾವ್ ಉಪನ್ಯಾಸ ನೀಡಿದರು.ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ನಾಯ್ಕ ಮಾತನಾಡಿದರು.ವಿದ್ಯಾರ್ಥಿಗಳು ದೇವರಕಾಡಿನಲ್ಲಿ ಚಾರಣ ನಡೆಸಿ ಗಿಡ-ಮರ ಹಾಗೂ ವನ್ಯಜೀವಿಗಳ ಕುರಿತು ಮಾಹಿತಿ ಪಡೆದುಕೊಂಡರು
ವಿದ್ಯಾರ್ಥಿಗಳಿಂದ ನಡೆದ ಮನರಂಜನಾ ಕಾರ್ಯಕ್ರಮ,ಶ್ರೀಪಾದ ಭಟ್ಟ ಕಡತೋಕಾ,ಕೆ.ಆರ್.ಶ್ರೀಲತಾ,ಗುರುರಾಜ ಹೆಗಡೆ ಆಡುಕಳ,ಗೌರೀಶ ಯಾಜಿ ಕೂಜಳ್ಳಿ ಅವರ ಸಂಗೀತ ಕಾರ್ಯಕ್ರಮ,ಬಳ್ಕೂರು ಕೃಷ್ಣಯಾಜಿ,ನೀಲ್ಕೋಡ ಶಂಕರ ಹೆಗಡೆ,ವಿನಯ ಭಟ್ಟ ಬೇರೊಳ್ಳಿ,ಪ್ರಸನ್ನ ಭಟ್ಟ ಬಾಳ್ಕಲ್ ಮತ್ತಿತರರಿಂದ ನಡೆದ ಯಕ್ಷಗಾನ ಪ್ರದರ್ಶನ ಕಾಡು-ಬೆಳದಿಂಗಳ ನಡುವೆ ಪ್ರೇಕ್ಷಕರಿಗೆ ಹೊಸದೊಂದು ಅನುಭವ ನೀಡಿತು.
ಕಸಾಪ ಹೊನ್ನಾವರ ಘಟಕದ ಅಧ್ಯಕ್ಷ ಪ್ರೊ.ನಾಗರಾಜ ಹೆಗಡೆ ಅಪಗಾಲ ಸ್ವಾಗತಿಸಿದರು.ಕಾಮಕೋಡ ಪರಿಸರ ಕೂಟದ ಸಂಚಾಲಕ ಪ್ರೊ.ಎಂ.ಜಿ.ಹೆಗಡೆ ವಂದಿಸಿದರು.
Leave a Comment