ಹೊನ್ನಾವರ :
ನಿನ್ನೆ ಹೊನ್ನಾವರದಲ್ಲಿ ಅಭೂತಪೂರ್ವ ಜನಬೆಂಬಲದೊಂದಿಗೆ ನಡೆದ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧೀಯವರ ರೋಡ್ ಶೋ ಕಾರ್ಯಕ್ರಮದಲ್ಲಿ ಐದಾರು ಕಿಡಿಗೇಡಿಗಳಿಂದ ನಡೆದ ಮೊದಿ ಪರ ಘೋಷಣೆಯನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತೀವ್ರವಾಗಿ ಖಂಡಿಸಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಬಿ.ಜೆ.ಪಿ. ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೊನ್ನಾವರಕ್ಕೆ ಆಗಮಿಸಿದ್ದರು. ಆಗ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಬಹಿರಂಗವಾಗಿ ಪತ್ರಿಕಾ ಪ್ರಕಟಣೆಯ ಮೂಲಕ ಅಮಿತ್ ಷಾ ಅವರನ್ನು ಸ್ವಾಗತಿಸಿ ಹೇಳಿಕೆ ನೀಡಲಾಗಿತ್ತು.
ಆದರೆ ನಿನ್ನೆ ಅದೇ ಪಕ್ಷದ ಕೆಲ ಕಿಡಿಗೆಡಿಗಳು ಹೊನ್ನಾವರದಲ್ಲಿ ಸಾರ್ವತ್ರಿಕ ಚುನಾವಣೆಯ ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಶಾಂತಿ ಕದಡಲು ರಾಹುಲ್ ಗಾಂಧೀಯವರನ್ನು ಸ್ವಾಗತಿಸಲು ಬಂದ ಕಾರ್ಯಕರ್ತರ ನಡುವೆ ಒಳನುಸುಳಿ ಇಂತಹ ಹೀನ ಕೃತ್ಯವೆಸಗಲು ಮುಂದಾದಂತೆ ಕಂಡು ಬರುತ್ತದೆ. ಆದರೆ ಇದನ್ನು ಸೂಕ್ಷ್ಮವಾಗಿ ಗುರುತಿಸಬೇಕಾಗಿದ್ದ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದೇ ಕೈಕಟ್ಟಿ ಕುಳಿತುಕೊಂಡಿರುವುದೇಕೆ ಅನ್ನುವುದನ್ನು ಜನತೆಗೆ ವಿವರಿಸಬೇಕಾಗಿದೆ ಎಂದು ಜಗದೀಪ ತೆಂಗೇರಿ ಆಗ್ರಹಿಸಿದ್ದಾರೆ.
ಆದರೆ ಸುಮಾರು ಐದಾರು ಸಾವಿರದಷ್ಟು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅತ್ಯಂತ ಸಂಯಮ, ತಾಳ್ಮೆಯಿಂದ ಕೇವಲ ಈ ಐದಾರು ಕಿಡಿಗೇಡಿಗಳ ಕೃತ್ಯವನ್ನು ನಿರ್ಲಕ್ಷಿಸಿದ್ದರಿಂದ ಮುಂದಾಗುವ ಅಪಾಯವನ್ನು ತಪ್ಪಿಸಿದ್ದಾರೆ. ಅದಕ್ಕಾಗಿ ಶಾಂತಿ ಕಾಪಾಡಿದ ಕಾಂಗ್ರೆಸ್ ಕಾರ್ಯಕರ್ತರನ್ನು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾರೆ.
Leave a Comment