ಹೊನ್ನಾವರ ಪ್ರಭಾತನಗರದ ಲಾಯನ್ಸ್ ಸಭಾಭವನದಲ್ಲಿ ಲಾಯನ್ಸ್ ಕ್ಲಬ್ ಮತ್ತು ಸುವಿಧಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಮಕ್ಕಳಿಗೆ ಬರುವ ಕ್ಯಾನ್ಸರ್ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.
ಉಪನ್ಯಾಸಕರಾಗಿ ಬಂದ ಹೊನ್ನಾವರ ಸರಕಾರಿ ದವಾಖಾನೆಯ ಹಿರಿಯ ಸರ್ಜನ್ರಾದ ಲಯನ್ ಡಾ|| ಮಂಜುನಾಥ ಶೆಟ್ಟಿ ಮಾತನಾಡಿ ಇಂದಿನ ಆಧುನಿಕ ಜೀವನ ಶೈಲಿ ಮತ್ತು ಪಾಲಕರ ಒತ್ತಡದ ಕೆಲಸದಲ್ಲಿ ಮಕ್ಕಳ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗದೇ ಇರುವುದರಿಂದ ಟಿ.ವಿಯಲ್ಲಿ ಬರುವ ಜಾಹಿರಾತುಗಳ ಆಕರ್ಷಣೆಗೆ ತುತ್ತಾಗಿ ಮಕ್ಕಳು ಪೇಟೆಯಲ್ಲಿ ಬಾಯಿಗೆ ರುಚಿ ಸಿಗುವ ಆಹಾರಕ್ಕೆ ಅಂಟಿಕೊಳ್ಳುತ್ತಿದ್ದಾರೆ. ರುಚಿಯ ಸಲುವಾಗಿ ಕೆಮಿಕಲ್ ಯುಕ್ತ ಆಹಾರ ಸೇವನೆಯಿಂದ ಮಕ್ಕಳಿಗೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆರೋಗ್ಯ ಅಂದರೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಅವಶ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಲಾಯನ್ ದೇವಿದಾಸ ಮಡಿವಾಳ ಮಾತನಾಡಿ ಇಂದಿನ ಆಧುನಿಕ ಸ್ಪಧಾತ್ಮಕ ಶಿಕ್ಷಣ ಪದ್ಧತಿಯಿಂದ ಮಕ್ಕಳು ಭಾರದ ಚೀಲಗಳನ್ನು ಹೊರುವಂತಾಗಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಶಿಕ್ಷಣ ತಜ್ಞರ ವರದಿಯ ಅನುಸಾರ ಮಕ್ಕಳ ಹೊರೆಯನ್ನು ಕಡಿಮೆ ಮಾಡಲು ಸರಕಾರ ಈಗಾಗಲೇ ಆದೇಶಿಸಿದೆ. ಪ್ರತಿಯೊಬ್ಬ ಮಕ್ಕಳಲ್ಲಿ ಪ್ರತಿಭೆ ಇರುತ್ತದೆ. ಪ್ರತಿಭೆ ಹೊರಬರಲು ಇಂತಹ ಶಿಬಿರ ಸೂಕ್ತ ವೇದಿಕೆಯಾಗುತ್ತದೆ ಎಂದು ಹೇಳಿದರು.
ಸುವಿಧಾ ಟ್ರಸ್ಟ್ ನಡೆಸಿದ ಬೇಸಿಗೆ ಶಿಬಿರದ ಸಂಚಾಲಕಿ ಪುಷ್ಪಾ ವಿನಾಯಕ ನಾಯ್ಕ ಮಾತನಾಡಿ ಇಂತಹ ಶಿಬಿರದಿಂದ ಮಕ್ಕಳ ಬುದ್ಧಿ ಬೆಳವಣಿಗೆ ಜೊತೆಗೆ ಆರೋಗ್ಯ ಉತ್ತಮವಾಗುವುದಾಗಿ ತಿಳಿಸಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಬಿರದ ಮಕ್ಕಳ ಜೊತೆ ಪಾಲಕರು ಭಾಗವಹಿಸಿದ್ದರು.
Leave a Comment