ಹೊನ್ನಾವರ : ಪಟ್ಟಣದ ಬಸ್ ನಿಲ್ದಾಣದ ಬಳಿಯ ಶನೈಶ್ಚರ ದೇವಸ್ಥಾನದ ಎದುರುಗಡೆ ಇರುವ ಸ.ನಂ. 303ಕ ಜಾಗದ ಪೋಡಿ ಪ್ರಕರಣ ಹಾಗೂ ಇತರ ಬೇಡಿಕೆಗಳನ್ನು ಒಂದು ತಿಂಗಳ ಒಳಗೆ ಬಗೆಹರಿಸದಿದ್ದರೆ ಮತ್ತೊಮ್ಮೆ ಜಿಲ್ಲೆಯಾದ್ಯಂತ ಹೋರಾಟ ಕೈಗೊಳ್ಳಲಾಗುವುದು ಎಂದು ಆಗ್ರಹಿಸಿ ಹಿಂದೂ ಧರ್ಮರಕ್ಷಣಾ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರು ಸೋಮವಾರ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ದುರ್ಗಾಕೇರಿಯ ದಂಡಿನ ದುರ್ಗಾದೇವಿ ದೇವಸ್ಥಾನದಿಂದ ಕಿಂತಾಲಕೇರಿ, ಶರಾವತಿ ಸರ್ಕಲ್ ಮೂಲಕ ತಹಸೀಲ್ದಾರರ ಕಚೇರಿ ವರೆಗೆ ಮೇರವಣಿಗೆ ನಡೆಸಿದರು. ಶರಾವತಿ ಸರ್ಕಲ್ದಲ್ಲಿ ಹುತಾತ್ಮ ಯೋಧರಾದ ವಿಜಯಾನಂದ ನಾಯ್ಕ ಹಾಗೂ ಸಂತೋಷ ಗುರವ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದರು ಒಂದು ನಿಮಿಷ ಮೌನಾಚರಣೆ ನಡೆಸಿ ಗೌರವ ಸಮರ್ಪಿಸಿದರು.
ಮನವಿಯಲ್ಲೇನಿದೆ : ಪಟ್ಟಣದ ಬಸ್ನಿಲ್ದಾಣದ ಸಮೀಪದ ಶನೈಶ್ಚರ ದೇವಸ್ಥಾನದ ಎದುರುಗಡೆ ಇರುವ ಸ.ನಂ. 303ಕ ಜಾಗದ ಪೋಡಿ ಪ್ರಕರಣ ಪೋಡಿ ಮಾಡಿಕೊಡುತ್ತೇನೆಂದು ಉಪ ವಿಭಾಗಾಧಿಕಾರಿ ಮಂಜುನಾಥ ಅವರು ಸಾರ್ವಜನಿಕ ಸಭೆಯಲ್ಲಿ ವಾಗ್ಧಾನ ಮಾಡಿದ್ದರು. 7 ತಿಂಗಳು ಕಳೆದರೂ ಸಮಸ್ಯೆ ಬಗೆಹರಿದಿಲ್ಲ. ಆದರೂ ಮಾಡಿಲ್ಲ. ತಕ್ಷಣ ಪೋಡಿ ಪ್ರಕರಣ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. 8 ತಿಂಗಳಾಗುತ್ತ ಬಂದರೂ 24 ಘಂಟೆಯಲ್ಲಿ ಬರಬೇಕಾದ ಪರೇಶ ಮೇಸ್ತ ಮರಣೋತ್ತರ ವರದಿ ಇನ್ನೂ ಬಂದಿಲ್ಲ. ಪ್ರಕರಣವನ್ನು ಸಿ.ಬಿ.ಐ. ಗೆ ವಹಿಸಲು ಎರಡು ತಿಂಗಳು ವಿಳಂಬ ಮಾಡಲಾಗಿದೆ ಈಗ ತನಿಖೆ ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.ಪರೇಶ ಮೇಸ್ತ ಅವರ ಕುಟುಂಬದವರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶರತ ಮಡಿವಾಳ ಮತ್ತು ದೀಪಕರಾವ್ ಕೊಲೆಯಾದಾಗ ತಕ್ಷಣ 10 ಲಕ್ಷ ರೂ. ಪರಿಹಾರ ನೀಡಿದ ರಾಜ್ಯ ಸರ್ಕಾರ ಪರೇಶ ಮೇಸ್ತ ಪ್ರಕರಣದಲ್ಲಿ ಕೇವಲ 5 ಲಕ್ಷ ರೂ. ನೀಡಿ ತಾರತಮ್ಯ ಮಾಡಿದೆ. ಎಂದು ಮನವಿಯಲ್ಲಿ ದೂರಿದ್ದಾರೆ.ಅವನ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಆಶ್ವಾಸನೆ ನೀಡಲಾಗಿತ್ತು ಅದನ್ನು ತಕ್ಷಣ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ತಹಸೀಲ್ದಾರ ಮಂಜುಳಾ ಭಜಂತ್ರಿ ಮನವಿ ಸ್ವೀಕರಿಸಿದರು.ಮೆರವಣಿಗೆಯಲ್ಲಿ ಹಿಂದುಪರ ಸಂಘಟನೆಯ ವಿಶ್ವನಾಥ ನಾಯಕ, ಜೆ.ಟಿ.ಪೈ., ರಘು ಪೈ, ಪರೇಶ ಮೇಸ್ತನ ತಂದೆ ಕಮಲಾಕರ ಮೇಸ್ತ, ತಾಯಿ ರುಕ್ಮಿಣಿ ಮೇಸ್ತ, ಉಮೇಶ ನಾಯ್ಕ, ಸಂಜು ಶೇಟ್, ರಾಜು ಭಂಡಾರಿ, ಶಿವರಾಜ ಮೇಸ್ತ, ಉಮೇಶ ಮೇಸ್ತ, ಉಮೇಶ ಸಾರಂಗ, ಬಾಲಕೃಷ್ಣ ಬಾಳೇರಿ, ಲೋಕೇಶ ಮೇಸ್ತ, ಭಾಗ್ಯ ಮೇಸ್ತ, ಗೌರಿ ಮೇಸ್ತ, ವಿಮಲ ರೇವಣಕರ ಮತ್ತಿತರರು ಪಾಲ್ಗೊಂಡಿದ್ದರು.
Leave a Comment