ಹೊನ್ನಾವರ : ರಾಮಾಯಣ ಒಂದು ಆದಿ ಕಾವ್ಯ. ಆದಿಯ ಕಾವ್ಯ ಅಲ್ಲ, ಮಾತು ಕೆಡುವುದು ಗೊತ್ತಾದರೆ ಹೊಸ ಮಾತು ಹುಟ್ಟಿಕೊಳ್ಳುತ್ತದೆ. ನಾಗರಿಕತೆ ಕೆಡುತ್ತಿರುವುದು ಗೊತ್ತಾದಾಗ ಹುಟ್ಟಿದ ಕಾವ್ಯವೇ ರಾಮಾಯಣ ಎಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ನುಡಿದರು. ಅವರು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಂಘ, ಪರಂಪರೆ ಕೂಟ ಮತ್ತು ಅಭಿನವ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ತತ್ಕ್ಷಣದ ಸ್ಪಂದನ ಜೀವನ ಇರುತ್ತದೆ. ಪ್ರಪಂಚ ಕಠೋರವಾಗಿದ್ದರೂ ನಮ್ಮೊಳಗೊಂದು ಕರುಣೆಯ ಕಡಲಿದೆ. ಹೆಣ್ಣು ಹಕ್ಕಿಯ ಶೋಕವನ್ನು ಕಂಡಾಗ ವಾಲ್ಮೀಕಿಯ ಬಾಯಿಂದ ಶ್ಲೋಕ ಹೊರಹೊಮ್ಮಿತು. ಕಠೋರತೆಯ ಒಳಗಿನಿಂದ ಮಾತ್ರ ಕರುಣೆಯ ಕಾವ್ಯ ಹುಟ್ಟಬಲ್ಲದು. ತೋರಿಕೆಗೆ ಸಜ್ಜನರಾಗಿ ಅಂತರಂಗದಲ್ಲಿ ಕತ್ತಿ ಮಸೆಯುತ್ತಿದ್ದಾರೆ. ನಮ್ಮ ಕೆಡುಕನ್ನು ಕಲೆಯಾಗಿ ಮಾಡಿದರೆ ಬದುಕು ಕೃತಾರ್ಥವಾಗುವುದಿಲ್ಲ. ವಾಲ್ಮೀಕಿ ವಿರಚಿತ ರಾಮಾಯಣದಲ್ಲಿ ರಾಮನದ್ದು ಆದರ್ಶ ನಾಯಕನ ಪಾತ್ರ. ಪಟ್ಟಾಭಿಷೇಕದ ಪ್ರಸಂಗದೊಡನೆ ಅದುಸುಖಾಂತ್ಯವಾಗುವ ಕಾವ್ಯ. ಸೀತಾಪರಿತ್ಯಾಗ ಇವೆಲ್ಲವೂ ನಂತರದ ಕಲ್ಪನೆಗಳಷ್ಟೇ ಎಂದು ಹೇಳಿದರು. ನ.ರವಿಕುಮಾರ ಮಾತನಾಡಿ ರಾಮಾಯಣ ಎಲ್ಲ ಕಾಲಕ್ಕೂ ಸಲ್ಲದ ಕೃತಿ. ರಾಮಾಯಣವು ಸಜ್ಜನರ ಮನಸ್ಸಿನಂತೆ ನಿರ್ಮಲವಾದುದು ಛಂದ-ಚಂದ ಎರಡೂ ಅದರಲ್ಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಭಾರಿ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ನಾಯಕ ನಮ್ಮ ವಿದ್ಯಾರ್ಥಿಗಳಿಗೆ ರಾಮಾಯಣದಂತಹ ಕಾವ್ಯದ ಓದು ಅಗತ್ಯವಿದೆ ಅದು ಸ್ಪೂರ್ತಿಯನ್ನು ತುಂಬಬಲ್ಲದು ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ ಹೆಗಡೆ ಅಪಗಾಲ, ಪರಂಪರೆ ಕೂಟದ ಸಂಚಾಲಕ ಜಿ.ಎಸ್.ಹೆಗಡೆ ಉಪಸ್ಥಿತರಿದ್ದರು. ಕುಮಾರಿ ಸಂಗೀತಾ ನಾಯ್ಕ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಮಾರಿ ಆಶಾ ನಾಯ್ಕ ಸ್ವಾಗತಿಸಿದರು, ಕುಮಾರಿ ಸೀಮಾ ಗೌಡ ವಂದಿಸಿದರು. ಕುಮಾರಿ ವಿದ್ಯಾ ನಾಯ್ಕ ನಿರೂಪಿಸಿದರು.
Leave a Comment