ಹಳಿಯಾಳ:- ಹಳಿಯಾಳ ಹಾಗೂ ದಾಂಡೇಲಿಯ ಕೆಲವು ಭಾಗದಲ್ಲಿ ಭತ್ತದ ಗದ್ದೆಗಳಲ್ಲಿ ಕಂಡು ಬಂದಿರುವ ಕಂದು ಜಿಗಿ ಹುಳ ಮತ್ತು ಬಿಳಿ ಬೆನ್ನಿನ ಜಿಗಿ ಹುಳ ಬಾಧಿತ ಪ್ರದೇಶಗಳಿಗೆ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಸಕ್ತ ಸಾಲಿನಲ್ಲಿ ಉತ್ತಮ ಭತ್ತದ ಬೆಳೆಯ ಇಳುವರಿಯನ್ನು ನೀರಿಕ್ಷೀಸಿದ್ದ ರೈತರಲ್ಲಿ ಈ ಹುಳದ ಬಾಧೆಯಿಂದ ಹಳಿಯಾಳ ಹೋಬಳಿಯ ಕೇರವಾಡ, ತೇರಗಾಂವ, ಮಂಗಳವಾಡ, ಕಳಸಾಪೂರ ಹಾಗೂ ದಾಂಡೇಲಿ ಹೋಬಳಿಯ ಯಡೋಗಾ, ಬಿದ್ರೋಳ್ಳಿ, ಹಂದ್ಲಿ ಗ್ರಾಮಗಳಲ್ಲಿ ಭತ್ತದ ಇಳುವರಿಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಕಂಡುಬಂದಿದೆ.
ವಾತಾವರಣದಲ್ಲಿ ಅಧಿಕ ತೇವಾಂಶ ಮತ್ತು ಹೆಚ್ಚಿನ ಉಷ್ಣತೆ, ಅಧಿಕ ಸಾರಜನಕ ಬಳಕೆಯಿಂದ ಈ ಕೀಟದ ಬಾಧೆ ಉಲ್ಭಣಿಸಲು ಕಾರಣವಾಗಿದೆ ಎಂದಿರುವ ಹಳಿಯಾಳ ಕೃಷಿ ಇಲಾಖೆಯವರು ಪ್ರಾರಂಭದಲ್ಲಿ ಕೀಟದ ಬಾಧೆಯಿಂದ ಪೈರು ಸುಟ್ಟಂತೆ ಕಾಣುತ್ತದೆ. ಈ ಕಾರಣಕ್ಕೆ ರೈತರು ಯೂರಿಯಾ ಗೊಬ್ಬರವನ್ನು ಕೊಡಬಾರದು. ಯೂರಿಯಾ ಗೊಬ್ಬರ ನೀಡಿದರೆ ಇನ್ನು ಹೆಚ್ಚಿನ ಹಾನಿಯಾಗುತ್ತದೆ ಎಂದಿರುವ ಅವರು ಈ ಗ್ರಾಮದಲ್ಲಿ ಕೀಟದ ಹಾವಳಿಯ ಪರಿಸ್ಥಿತಿಯನ್ನು ಅಂದಾಜಿಸಲು ಈಗಾಗಲೇ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರ ಶಿರಸಿಯ ವಿಷಯ ತಜ್ಞರು ಎಲ್ಲಾ ಭಾಗದಲ್ಲಿ ಭೇಟಿ ನೀಡಿ ಪರಿಶೀಲಿಸಿರುವುದಾಗಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಕೃಷಿ ವಿಜ್ಞಾನಿಗಳಾದ ಡಾ. ಮಂಜು, ಡಾ.ರೂಪಾ ಪಾಟೀಲ ಹಾಗೂ ಡಾ.ಶಿವಶಂಕರ ಮೂರ್ತಿ ಹಾಗೂ ಹಳಿಯಾಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗೇಶ ನಾಯ್ಕ ಮತ್ತು ಅಧಿಕಾರಿಗಳ ತಂಡ ಗ್ರಾಮದ ವಿವಿಧ ಸ್ಥಳಗಳಲ್ಲಿ ರೈತರ ಹೊಲಕ್ಕೆ ಭೇಟಿ ನೀಡಿ ರೈತರಿಗೆ ಹುಳದ ಬಾಧೆಯಿಂದ ಆಗುವ ಹಾನಿ ಮತ್ತು ಹತೋಟಿ ಕ್ರಮದ ಬಗ್ಗೆ ಸಭೆಗಳನ್ನು ನಡೆಸಿ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.
ಪ್ರಾತ್ಯಕ್ಷಿಕೆಯ ಮುಖಾಂತರ ಹಾಗೂ ರೈತರೊಂದಿಗೆ ಸಂವಾದ ನಡೆಸುವ ಮೂಲಕ ರೈತರಿಗೆ ಸಿಂಪರಣಾ ವಿಧಾನವನ್ನು ತೋರಿಸಲಾಗಿದ್ದು ಭತ್ತದ ಪೈರಿನ ತಳ ಭಾಗಕ್ಕೆ ತಗಲುವಂತೆ ಔಷಧವನ್ನು ಸಿಂಪಡಿಸಲು ಸೂಚಿಸಲಾಗಿದೆ.
ಶಿಫಾರಿಸ್ಸಿನಂತೆ ಸಾರಜನಕ ಬಳಕೆ ಅತ್ಯಗತ್ಯ. ಆದರೆ ಅಧಿಕ ಸಾರಜನಕ ರಸಗೊಬ್ಬರ ಬಳಸಬಾರದು, ಹೆಚ್ಚು ಸಾರಜನಕ ಹಾಕಿದ ಪೈರು ಹುಲುಸಾಗಿ ಬೆಳೆದು ಕಾಂಡ ಮೃದುವಾಗುವುದರಿಂದ ರಸ ಹೀರುವ ಕೀಟಗಳ ಹೆಚ್ಚಳಕೆ ಕಾರಣವಾಗುತ್ತದೆ ಆದ್ದರಿಂದ ಗದ್ದೆಯಲ್ಲಿ ಹೆಚ್ಚಿನ ತೇವಾಂಶ ಜಿಗಿ ಹುಳುಗಳ ವೃದ್ಧಿಗೆ ಅನುಕೂಲವಾಗಿರುತ್ತದೆ. ಆದ್ದರಿಂದ ಗದ್ದೆಯಲ್ಲಿ ಸತತವಾಗಿ ನೀರು ನಿಲ್ಲಿಸಬಾರದು. ನಾಟಿ ಮಾಡಿದ 30 ದಿನಗಳ ನಂತರ ಭೂಮಿಯನ್ನು ಒಣಗಿಸಿ ನೀರು ಕೊಡುವುದು ಉತ್ತಮ ಇದರಿಂದ ಜಿಗಿ ಹುಳುಗಳು ವೃದ್ಧಿಯಾಗುವುದು ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಕೀಟನಾಶಕಗಳಿಂದ ಹತೋಟಿ:- ಪ್ರತೀ ಲೀ. ನೀರಿಗೆ 2.5 ಮೀ.ಲೀ ಕ್ಲೊರೋಫೈರಿಫಾಸ್ 20 ಇ.ಸಿ. ಅಥವಾ 2. ಮೀ.ಲೀ ಪೊಸೋಲೋನ್ ಅಥವಾ 3 ಗ್ರಾಂ ಕಾರ್ಬರಿಲ್ 50 ಡಬ್ಯು.ಪಿ ಅಥವಾ 0.3 ಮೀ.ಲೀ ಇಮಿಡಾಕ್ಲೊಪ್ರೀಡ್ 17.8 ಎಸ್.ಎಲ್. ಅಥವಾ 1 ಗ್ರಾಂ ಅಸೆಪೆಟ್ ಅಥವಾ 0.5 ಗ್ರಾಂ ಥಯೋಮೆಥಾಕ್ಸಾಮ್ ಬೆರೆಸಿ ಭತ್ತದ ಬುಡ್ಡಕ್ಕೆ ತಗಲುವಂತೆ ಸಿಂಪಡಿಸಬೇಕು. ಎಕರೆಗೆ 200 ರಿಂದ 250 ಲೀಟರ್ ಸಿಂಪರಣಾ ದ್ರಾವಣವನ್ನು ಉಪಯೋಗಿಸುವಂತೆ ಕೃಷಿ ಇಲಾಖೆಯವರು ರೈತರಿಗೆ ಸಲಹೆ ನೀಡಿದ್ದಾರೆ.
Leave a Comment