ಹೊನ್ನಾವರ:
`ಶಾಲೆಗೆ ಹೋಗದೇ ಕಾಳಕ್ಷರ ಜ್ಞಾನವಿಲ್ಲದವನಿಗೂ ರಾಮಾಯಣ ಮಹಾಭಾರತದ ಜ್ಞಾನ ನೀಡಬಲ್ಲ ಏಕೈಕ ಕಲೆ, ಅದು ಗಂಡುಮೆಟ್ಟಿನ ಯಕ್ಷಗಾನ ಕಲೆ’ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೃಷ್ಣ ಯಾಜಿ ಬಳ್ಕೂರು ಹೇಳಿದರು.
ತಾಲೂಕಿನ ಹಡಿನಬಾಳದ ಹುಡಗೋಡ್ ಶ್ರೀ ಆಂಜನೇಯ ಯುವಕ ಮಂಡಳ ವತಿಯಿಂದ 26ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಗುರುವಾರ ಹಮ್ಮಿಕೊಂಡ ಸಭಾಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನೃತ್ಯ, ಗೀತ, ನಾಟಕ, ಚಿತ್ರ ಈ ನಾಲ್ಕು ಪ್ರಭಲ ಮಾಧ್ಯಮಗಳ ಸಮ್ಮೇಳನದಿಂದ ಯಕ್ಷಾಗಾನ ಬೆಳೆಯುತ್ತಿದೆ. ಯಕ್ಷಗಾನ ಕಲೆಗೆ ಜ್ಞಾನ, ವಿದ್ಯಾರ್ಹತೆ, ವಯಸ್ಸು ಯಾವುದರ ಅರ್ಹತೆಯೂ ಬೇಕಾಗಿಲ್ಲ. ವೇಷ ಕಟ್ಟಿದಾಕ್ಷಣ ಮಾತನಾಡುವ, ಕುಣಿಯುವ ಹುಮ್ಮಸ್ಸು ತಾನಾಗಿಯೇ ಒದಗಿಬರುತ್ತದೆ. ಜ್ಞಾನವಿಲ್ಲದವನೂ ಪುರಾಣ ಕಥೆಗಳನ್ನು ತೊದಲದೇ ಮಾತನಾಡುವುದರಿಂದಾಗಿ ಇಂದು ಯಕ್ಷಗಾನ ಅಖಂಡ ಕರ್ನಾಟಕದ ಕಲೆಯಾಗಿ ಬೆಳಗುತ್ತಿದೆ ಎಂದರು.
ತಾಪಂ ಸದಸ್ಯ ಆರ್.ಪಿ ನಾಯ್ಕ ಮಾತನಾಡಿ ಶುದ್ಧ ಕನ್ನಡದಲ್ಲಿ ಮಾತನಾಡುವ ಕಲೆ ಎಂದರೆ ಅದು ಯಕ್ಷಗಾನ ಕಲೆ. ಇಂದಿನ ಯುವ ಪೀಳಿಗೆ ಯಕ್ಷಗಾನ ಕಲೆಯನ್ನು ಮರೆಯುತ್ತಿದ್ದು, ಯಕ್ಷಗಾನ ಕಲೆಯ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಆಂಜನೇಯ ಯುವಕ ಮಂಡಳದÀ ವತಿಯಿಂದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಯಕ್ಷಗಾನ ಕಲಾವಿದ ಚಂದ್ರಹಾಸ ಹುಡಗೋಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಡಿನಬಾಳ ವಿಎಸ್ಎಸ್ ಸಂಘದ ಅದ್ಯಕ್ಷ ಹರಿಯಪ್ಪ ನಾಯ್ಕ, ಕೃಷ್ಣ ನಾಯ್ಕ ಇತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಕಲಾಶ್ರೀ ಯಕ್ಷ ಮಿತ್ರ ಮಂಡಳಿ ವತಿಯಿಂದ `ಅಕ್ಷಯಾಂಬರ’ ಯಕ್ಷಗಾನ ಪ್ರದರ್ಶನ ನಡೆಯಿತು.
Leave a Comment