ಹಳಿಯಾಳ : ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ರಾತ್ರೋರಾತ್ರಿ ಮಹಾನ ಪುರುಷ ಶಿವಾಜಿ ಮೂರ್ತಿಯನ್ನು ಸ್ಥಾಪನೆ ಮಾಡಿದ್ದು ಕಾನೂನಿನ ಸ್ಪಷ್ಟ ಉಲ್ಲಂಘಟನೆಯಾಗಿದೆ. ಕಾನೂನು ಚೌಕಟ್ಟಿನಲ್ಲಿ ಶಿವಾಜಿ ಮೂರ್ತಿ ಸ್ಥಾಪನೆಗೆ ಜಿಲ್ಲಾಡಳಿತ, ಪೋಲಿಸ್, ಕಂದಾಯ ಮತ್ತು ಪುರಸಭೆಯ ಇಲಾಖೆಯ ಸಹಮತವಿದೆ. ಅಲ್ಲದೇ ಜನರ ಭಾವನೆಗಳಿಗೆ ನಾವು ಗೌರವ ನೀಡುತ್ತೇವೆ. ಆದರೆ ಕಾನೂನು ಉಲ್ಲಂಘನೆ ಮಾಡುವುದು ಅಪರಾಧವಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕರಾವ್ ಪಾಟೀಲ್ ಹೇಳಿದರು.
ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ಪೋಲಿಸ್ ಮತ್ತು ಕಂದಾಯ ಇಲಾಖೆಯವರು ಇತ್ತೀಚೆಗೆ ಐತಿಹಾಸಿಕ ಕೋಟೆ ಪ್ರದೇಶದ ವಿವಾಧಿತ ಪ್ರದೇಶದಲ್ಲಿ ಶಿವಾಜಿ ಮೂರ್ತಿ ಸ್ಥಾಪನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು ಕಾನೂನನ್ನು ಗೌರವಿಸುತ್ತಿದ್ದ ಶಿವಾಜಿ ಅವರ ಮೂರ್ತಿಯನ್ನು ಕಾನೂನು ಮೀರಿ ಸ್ಥಾಪನೆ ಮಾಡಿದ್ದು ಎಷ್ಟು ಸರಿ ಎಂದು ಮರಾಠ ಸಮಾಜ ಚಿಂತೆನ ನಡೆಸಬೇಕಾಗಿದೆ. ಕಾನೂನನ್ನು ಗೌರವಿಸಿದರೇ ಮಾತ್ರ ಕಾನೂನು ಎಲ್ಲರಿಗೂ ಗೌರವ ನೀಡುತ್ತದೆ. ಯಾವುದೇ ಕಾರಣಕ್ಕೆ ಕಾನೂನನ್ನು ಉಲ್ಲಂಘಿಸುವುದು ಸರಿಯಲ್ಲ ಎಂದರು.
ಯುವಕರು ಶಿವಾಜಿ ಮಹಾರಾಜರ ಕುರಿತು ಅಧ್ಯಯನ ನಡೆಸಲು ಮುಂದಾಗಲಿ ಎಂದು ಯುವ ಸಮುದಾಯಕ್ಕೆ ಕಿವಿ ಮಾತು ಹೇಳಿದ ಅವರು, ಮೂರ್ತಿಗಳು ಅವರ ಸಾಧನೆಗಳನ್ನು ಹೇಳುವುದಿಲ್ಲ. ಅವರ ಕುರಿತಾದ ಪುಸ್ತಕಗಳ ಓದುವದರಿಂದ ಮಾತ್ರ ಅವರ ಇತಿಹಾಸ, ಸಾಧನೆ ಮತ್ತೀತರ ವಿಷಯಗಳು ತಿಳಿಯಲು ಮತ್ತು ಅರಿಯಲು ಸಾಧ್ಯವೆಂದರು. ಮೂರ್ತಿಗಳಿಗೆ ಲಕ್ಷಾಂತರ ರೂಗಳನ್ನು ವೆಚ್ಚ ಮಾಡುವ ಬದಲು ಅವರ ಇತಿಹಾಸ ಸಾರುವ ಪುಸ್ತಕಗಳನ್ನು ಹೊಂದಿದ ಗ್ರಂಥಾಲಯಗಳನ್ನು ತೆರೆಯುವುದರಿಂದ ಅವರ ಕುರಿತು ಪ್ರಚಾರ, ಅರಿವು ಮತ್ತು ಚಿಂತನ ಮಂಥನ ಮಾಡಲು ಸಾಧ್ಯವೆಂದರು.
ಅಮಾಯಕರ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ನಮ್ಮಲ್ಲಿರುವ ಸಾಕ್ಷಾಧಾರಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಗರ್ಭಿಣಿ ಮಹಿಳೆ, ಪಾಶ್ರ್ವವಾಯು ಪೀಡಿತ ಪುರುಷ ಮತ್ತು ಕೆಲ ವಿದ್ಯಾರ್ಥಿ ಯುವಕರ ಮೇಲಿನ ಪ್ರಕರಣವನ್ನು ಹಿಂದಕ್ಕೆ ಪಡೆಯುವ ವಿಶ್ವಾಸ ವ್ಯಕ್ತ ಪಡಿಸಿದ ಅವರು ಸತ್ಯಾಸತ್ಯತೆಯ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿ, ಮೂರ್ತಿ ಸ್ಥಾಪನೆ ಕುರಿತು ತಾಳ್ಮೆ ವಹಿಸುವಂತೆ ಹಲವಾರು ಬಾರಿ ಸಭೆಗಳನ್ನು ನಡೆಸಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಷಾಧ ವ್ಯಕ್ತಪಡಿಸಿ, ಪ್ರಕರಣದ ಕುರಿತು ಇನ್ನಷ್ಟು ಚಿಂತನ ಮಂಥನ ನಡೆಯುತ್ತಿವೆ ಎಂದು ಸೃಷ್ಟ ಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಮರಾಠ ಸಮುದಾಯದ ಮುಖಂಡರು ಮಾತನಾಡಿ, ಮುಗ್ದರು ಮತ್ತು ಅಮಾಯಕರು ಸೇರಿದಂತೆ ಕಾನೂನಿನ ಅರಿವು ಇಲ್ಲದ ಸಮಾಜದ ಕೆಲವರು ಭಾವನಾತ್ಮಕವಾಗಿ ಈ ಕೃತ್ಯವನ್ನು ಎಸಗಿದ್ದು, ಅಧಿಕಾರಿಗಳು ಧೀರ್ಘ ಸಮಾಲೋಚನಾ ಸಭೆಗಳನ್ನು ನಡೆಸಿ ಅಂತಿಮವಾಗಿ ಪ್ರಕರಣ ಹಿಂದಕ್ಕೆ ಪಡೆಯುವ ನಿಟ್ಟಿನಲ್ಲಿ ಕಾರ್ಯಪ್ರವತ್ತರಾಗಲು ಮನವಿ ಮಾಡಿ, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸುವ ವಿಶ್ವಾಸ ವ್ಯಕ್ತ ಪಡಿಸಿದರು.
ಸಭೆಯಲ್ಲಿ ಎಸಿ ಅಭಿಜಿನ್, ಡಿವೈಎಸ್ಪಿ ಮೋಹನ ಪ್ರಸಾದ, ತಹಶೀಲದಾರ ವಿದ್ಯಾಧರ ಗುಳಗುಳಿ, ಸಿಪಿಐ ನಾಗನಾಥ್, ಪಿಎಸೈ ಆನಂದಮೂರ್ತಿ ಮರಾಠಾ ಮುಖಂಡರಾದ ಎಸ್.ಕೆ.ಗೌಡಾ, ಉಡಚಪ್ಪಾ ಬೂಬಾಟಿ, ಶಂಕರ ಬೆಳಗಾಂವಕರ, ಮಂಗಲಾ ಕಶೀಲ್ಕರ, ನಾಗೇಂದ್ರ ಜಿವೋಜಿ, ಎಲ್.ಎಸ್. ಅರಶಿಣಗೇರಿ, ಮಲ್ಲಾರಿ ಘಾಡಿ, ಸುಭಾಷ ಕಾಮ್ರೇಕರ ಇತರರು ಇದ್ದರು.
Leave a Comment