ಹಳಿಯಾಳ: ಹಳಿಯಾಳದ ಶಿವಪ್ರತಿಷ್ಠಾನ ಹಾಗೂ ದುರ್ಗಾದೌಡ ಸಮಿತಿಯಿಂದ ನಡೆಸಲಾಗುತ್ತಿರುವ ಧಾರ್ಮಿಕ ಕಾರ್ಯರ್ಯಕ್ರಮ “ದುರ್ಗಾದೌಡ-ಧಾರ್ಮಿಕ ನಡಿಗೆ” ಅಭೂತಪೂರ್ವವಾಗಿದ್ದು, ಹೀಗೆ ತನ್ನ ವೈಭವವನ್ನು ಉಳಿಸಿಕೊಂಡು ಮುಂದುವರೆಯಲಿ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾರೈಸಿದ್ದಾರೆ.
ದಿ.10 ನವರಾತ್ರಿಯ ಆರಂಭದಲ್ಲಿ ಪ್ರಾರಂಭವಾದ ದುರ್ಗಾದೌಡ ಬುಧವಾರ 8ನೇ ದಿನಕ್ಕೆ ಕಾಲಿಟ್ಟಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರು ದೌಡನಲ್ಲಿ ಪಾಲ್ಗೊಂಡು ಪ್ರತಿದಿನ ಬೆಳಗಿನ ಜಾವ ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದನ್ನು ಕಂಡು ಸಂತೋಷ ವ್ಯಕ್ತಪಡಿಸಿ ಮಾಧ್ಯಮದವರೊಂದಿಗೆ ಮಾತನಾಡಿ ಶಿವಪ್ರತಿಷ್ಠಾನ, ದುರ್ಗಾದೌಡ ಸಮೀತಿಗೆ ಯಶಸ್ವಿ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೆ ಅಭಿನಂದನೆ ಸಲ್ಲಿಸಿದರು.
ಬುಧವಾರ ಪಟ್ಟಣದ ಗುತ್ತಿಗೇರಿ, ಗೌಳಿಗಲ್ಲಿಯಲ್ಲಿರುವ ದುರ್ಗಾದೇವಿ ದೇವಸ್ಥಾನದಿಂದ ಪ್ರಾರಂಭವಾದ ದೌಡ ತಾನಾಜಿ ಗಲ್ಲಿ, ಕುಂಬಾರಗಲ್ಲಿ, ಶಿವಾಜಿ ಗಲ್ಲಿ, ಬ್ರಾಹ್ಮಣಗಲ್ಲಿಯ ಮೂಲಕ ಪ್ರಸಿದ್ದ ತುಳಜಾಭವಾನಿ ದೇವಸ್ಥಾನಕ್ಕೆ ತಲುಪಿತು. 9ನೇ ದಿನ ಗುರುವಾರ ಕೊನೆಯ ದೌಡ ನಡೆಯಲಿದ್ದು ತುಳಜಾಭವಾನಿ ದೇವಸ್ಥಾನದಿಂದ ಪ್ರಾರಂಭವಾಗಿ ಶೆಟ್ಟಿಗಲ್ಲಿ, ಕಿಲ್ಲಾ ಪ್ರದೇಶ, ದೇಸಾಯಿಗಲ್ಲಿಯ ಮೂಲಕ ಹಳಿಯಾಳ ಗ್ರಾಮದೇವಿ ಉಡಚಮ್ಮಾ ದೇವಿ ದೇವಸ್ಥಾನಕ್ಕೆ ಆಗಮಿಸಿ ಸಮಾರೋಪವಾಗಲಿದೆ. ಮಂಗಳೂರಿನ ಚೈತ್ರಾ ಕುಂದಾಪುರ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದು ಹಲವು ಗಣ್ಯರು, ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬುಧವಾರ ಕುಂಬಾರಗಲ್ಲಿಯಲ್ಲಿ ಶಿವಶರಣರು ಹಾಗೂ ನವದುರ್ಗೆಯರ ಛದ್ಮವೇಷದಲ್ಲಿ ಮಕ್ಕಳು ಕಣ್ಮನ ಸೆಳೆದರು. ಬ್ರಾಹ್ಮಣಗಲ್ಲಿಯಲ್ಲಿ ಗೋಮಾತೆಯ ರಕ್ಷಣೆಯ ಕುರಿತು ಜಾಗೃತಿ ಸಾರಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಪ್ರತಿದಿನ ಆಯಾ ಭಾಗದ ಜನ ರಾತ್ರಿಯಿಡಿ ತಮ್ಮ ಬಡಾವಣೆಗಳನ್ನು ಹಲವು ಅಲಂಕಾರಗಳಿಂದ, ರಂಗೋಲಿಗಳಿಂದ ಶೃಂಗರಿಸುವುದು ಹಾಗೂ ಮಕ್ಕಳು ವಿವಿಧ ಮಹನೀಯರು, ದೇವತೆಗಳ ಛದ್ಮವೇಷದಲ್ಲಿ ದುರ್ಗಾದೌಡನ್ನು ಸ್ವಾಗತಿಸುವುದು ವಿಶೇಷವಾಗಿದೆ.
Leave a Comment